ಪಾಕಿಸ್ತಾನದಿಂದ ಅಫ್ಘಾನಿಸ್ತಾನದ ಮೇಲೆ ವೈಮಾನಿಕ ದಾಳಿ – ಟಿಟಿಪಿ ಶಿಬಿರ ಗುರಿಯಾಗಿಸಿಕೊಂಡು ಅಟ್ಯಾಕ್

ಪಾಕಿಸ್ತಾನದಿಂದ ಅಫ್ಘಾನಿಸ್ತಾನದ ಮೇಲೆ ವೈಮಾನಿಕ ದಾಳಿ – ಟಿಟಿಪಿ ಶಿಬಿರ  ಗುರಿಯಾಗಿಸಿಕೊಂಡು ಅಟ್ಯಾಕ್

ಅಫ್ಘಾನಿಸ್ತಾನದ  ತಾಲಿಬಾನ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನ ಅಫ್ಘಾನಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿದೆ. ಗುರುವಾರ ರಾತ್ರಿ ಅಫ್ಘಾನಿಸ್ತಾನದಲ್ಲಿ ಸ್ಫೋಟಗಳು ಸಂಭವಿಸಿದ್ದು, ಪಾಕಿಸ್ತಾನದ ಜೆಟ್‌ಗಳು ಕಾಬೂಲ್‌ನಲ್ಲಿರುವ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಶಿಬಿರಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿವೆ ಎಂದು ವರದಿಗಳು ತಿಳಿಸಿವೆ. ಎರಡೂ ದೇಶಗಳ ನಡುವೆ ಉದ್ವಿಗ್ನತೆ ಭುಗಿಲೆದ್ದಿದೆ.

ಇದನ್ನೂ ಓದಿ: ವೀರೇಂದ್ರ ಪಪ್ಪಿ ಲಾಕರ್‌ ರಹಸ್ಯ! – ಶಾಸಕನ ಚಿನ್ನದ ಖಜಾನೆ ಕಂಡು ಬೆಚ್ಚಿಬಿದ್ದ ಅಧಿಕಾರಿಗಳು!

ವರದಿಗಳ ಪ್ರಕಾರ, ಶಾಹಿದ್ ಅಬ್ದುಲ್ ಹಕ್ ಚೌಕದ ಬಳಿ ನಡೆದ ವೈಮಾನಿಕ ದಾಳಿಯು ಟಿಟಿಪಿ ಮುಖ್ಯಸ್ಥ ನೂರ್ ವಾಲಿ ಮೆಹ್ಸೂದ್‌ನನ್ನು ಹತ್ಯೆ ಮಾಡುವ ಗುರಿಯನ್ನು ಹೊಂದಿತ್ತು. ಈತ 2018 ರಲ್ಲಿ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದ. 9/11 ದಾಳಿಯ ನಂತರ ಅಮೆರಿಕ ಜೊತೆಗಿನ ಪಾಕಿಸ್ತಾನದ ಮೈತ್ರಿಯನ್ನು ದ್ರೋಹವೆಂದು ಭಾವಿಸಿದ್ದ ಮೆಹ್ಸೂದ್, ಇಸ್ಲಾಮಾಬಾದ್‌ಗೆ ನಿರಂತರ ತಲೆನೋವಾಗಿದ್ದಾನೆ. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನಿ ಮಿಲಿಟರಿ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಹಲವಾರು ದಾಳಿಗಳನ್ನು ನಡೆಸಿದೆ, ಇತ್ತೀಚಿನ ದಾಳಿ ಅಕ್ಟೋಬರ್ 8 ರಂದು ನಡೆದಿದೆ. ಬುಧವಾರ ಅಫ್ಘಾನ್ ಗಡಿಯ ಬಳಿ ಟಿಟಿಪಿ ನಡೆಸಿದ ಮಾರಕ ಹೊಂಚುದಾಳಿಯಲ್ಲಿ ಇಬ್ಬರು ಹಿರಿಯ ಅಧಿಕಾರಿಗಳು ಸೇರಿದಂತೆ 11 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದರು.

ಅಫ್ಘಾನಿಸ್ತಾನದ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಅವರು ಗುರುವಾರ ಭಾರತಕ್ಕೆ ಆಗಮಿಸಿದ್ದಾರೆ. ತಾಲಿಬಾನ್‌ ಸರ್ಕಾರವು ನಾಲ್ಕು ವರ್ಷಗಳ ಹಿಂದೆ ಅಶ್ರಫ್ ಘನಿ ಸರ್ಕಾರವನ್ನು ಪತನಗೊಳಿಸಿತ್ತು. ನಂತರ ಕಾಬೂಲ್‌ನಲ್ಲಿ ಅಧಿಕಾರ ಹಿಡಿದ ತಾಲಿಬಾನ್ ಸರ್ಕಾರದ ಮೊದಲ ಭಾರತ ಭೇಟಿ ಇದಾಗಿದೆ. ಮುತ್ತಾಕಿ ಅವರು 6 ದಿನಗಳ ಕಾಲ ಭಾರತದಲ್ಲಿರಲಿದ್ದು, ಈ ವೇಳೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ವಿವಿಧ ವಿಷಯಗಳ ಕುರಿತು ವಿವರವಾದ ಚರ್ಚೆ ನಡೆಸಲಿದ್ದಾರೆಂದು ತಿಳಿದುಬಂದಿದೆ.

Kishor KV