ಸಾಲಿಗ್ರಾಮ ಡಿವೈನ್ ಪಾರ್ಕ್ ಸಂಸ್ಥಾಪಕ ಡಾಕ್ಟರ್ ಜೀ ನೆನಪು ಮಾತ್ರ – ಡಾ. ಚಂದ್ರಶೇಖರ್ ಉಡುಪರಿಗೆ ಭಾವುಕ ವಿದಾಯ

ಕೋಟ, ಸಾಲಿಗ್ರಾಮ, ಬ್ರಹ್ಮಾವರ ಜನರಿಗೆ ಡಿವೈನ್ ಪಾರ್ಕ್ ಚಿರಪರಿಚಿತ. ಆಧ್ಯಾತ್ಮಿಕ ಚೇತನದ ದೀಪ ಡಿವೈನ್ ಪಾರ್ಕ್ ಸಂಸ್ಥಾಪಕರು ಡಾ.ಎ.ಚಂದ್ರಶೇಖರ ಉಡುಪ. ಮಾನವೀಯ ಮೌಲ್ಯಗಳ ಪ್ರತಿರೂಪವಾಗಿರುವ ಡಾ.ಎ ಚಂದ್ರಶೇಖರ್ ಉಡುಪ ಅವರು ಜನವರಿ 7ರಂದು ವಿಧಿವಶರಾಗಿದ್ದಾರೆ. ಅಗಲಿದ ದಿವ್ಯ ಚೇತನಕ್ಕೆ ಕರಾವಳಿ ಜನತೆ ಭಾವುಕ ವಿದಾಯ ಕೋರಿದರು.
ಇದನ್ನೂ ಓದಿ:KSRTC ಪ್ರಯಾಣಿಕರಿಗೆ ಬಿಗ್ ಆಫರ್ – ಟಿಕೆಟ್ ದರ ಇಳಿಕೆ, ಯಾವ್ಯಾವ ರೂಟ್ನಲ್ಲಿ ಎಷ್ಟೆಷ್ಟು ಕಮ್ಮಿ ಗೊತ್ತಾ?
ಸಾಲಿಗ್ರಾಮದಲ್ಲಿ ತಲೆಎತ್ತಿ ನಿಂತಿರುವ ಡಿವೈನ್ ಪಾರ್ಕ್ಗೆ ಭೇಟಿ ಕೊಟ್ಟವರೆಲ್ಲಾ ಡಾ.ಎ.ಚಂದ್ರಶೇಖರ್ ಉಡುಪರನ್ನು ಮರೆಯುವುದಿಲ್ಲ. ಸರಳತೆ, ಸೇವೆ, ಧ್ಯಾನ, ಸಕರಾತ್ಮಕ ಚಿಂತನೆಗಳನ್ನು ಜಾಗೃತಗೊಳಿಸುವಲ್ಲಿ ಡಾಕ್ಟರ್ ಜೀ ಸೇವೆ ಅಪಾರವಾದದ್ದು. ಡಿವೈನ್ ಪಾರ್ಕ್ ಒಂದು ರೀತಿ ಆತ್ಮಶಾಂತಿಯ ದಾರಿದೀಪವಾಗಿತ್ತು. ಇಲ್ಲಿಗೆ ಭೇಟಿಕೊಟ್ಟ ಅನೇಕ ಮಂದಿ ಡಾ.ಎ.ಚಂದ್ರಶೇಖರ ಉಡುಪರನ್ನು ಬದುಕಿಗೆ ಸನ್ಮಾರ್ಗತೋರಿಸಿದ ಗುರು ಎಂದೇ ಭಾವಿಸುತ್ತಾರೆ. ಡಿವೈನ್ ಪಾರ್ಕ್ ಸಂಸ್ಥಾಪಕರಾಗಿ, ಡಾಕ್ಟರ್ ಜಿ ಎಂದೇ ಖ್ಯಾತರಾಗಿದ್ದ ಡಾ. ಎ. ಚಂದ್ರಶೇಖರ್ ಉಡುಪ ಅವರು 75ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಜನವರಿ 7ರಂದು ಹೃದಯಾಘಾತದಿಂದ ಕೊನೆಯುಸಿರಳೆದಿದ್ದಾರೆ. ಮಾನವೀಯತೆಯ ಪ್ರತಿರೂಪದಂತೆ ಇದ್ದ ಡಾಕ್ಟರ್ ಜೀ ಅವರಿಗೆ ಕರಾವಳಿಯ ಜನ ಭಾವುಕರಾಗಿ ಅಂತಿಮ ವಿದಾಯ ಕೋರಿದರು.
ಡಾ. ಎ ಚಂದ್ರಶೇಖರ್ ಉಡುಪ ಅವರು ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ವೇಳೆ ಸ್ವಾಮಿ ವಿವೇಕಾನಂದರ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿದ್ದರು. ಹೀಗಾಗಿ ಬ್ರಹ್ಮಾವರದ ಸಾಲಿಗ್ರಾಮದಲ್ಲಿ ಡಿವೈನ್ ಪಾರ್ಕ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಇಲ್ಲಿ ಆರೋಗ್ಯ ಮತ್ತು ಆಧ್ಯಾತ್ಮದ ಚಿಂತನೆಯಲ್ಲಿ ಪ್ರಾರಂಭಿಸಿ ಅನೇಕ ಜನಹಿತ ಸೇವಾ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದರು. ಚಂದ್ರಶೇಖರ್ ಉಡುಪ ಅವರು ಡಿವೈನ್ ಪಾರ್ಕ್ನ ಸಹಸಂಸ್ಥೆಯಾಗಿ ಎಸ್ಎಚ್ಆರ್ಎಫ್ ಯೋಗಬನ ಸ್ಥಾಪಿಸಿದ್ದಾರೆ. ಇಲ್ಲಿ, ಯೋಗ, ಪ್ರಕೃತಿ, ಆಯುರ್ವೇದ ಜೊತೆಗೆ ಆಧ್ಯಾತ್ಮಿಕ ಚಿಕಿತ್ಸಾ ಕ್ರಮವೂ ಇದೆ. ಡಿವೈನ್ ಪಾರ್ಕ್ ಹೆಸರೇ ಹೇಳುವಂತೆ ಇಲ್ಲಿ ಭೇಟಿ ನೀಡಿದರೆ, ದಿವ್ಯತೆಯ ಅನುಭವವಾಗುತ್ತದೆ. ಡಿವೈನ್ ಪಾರ್ಕ್ನ ಮುಖ್ಯ ದ್ವಾರದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು, ಡಿವೈನ್ ಪಾರ್ಕ್ನ ಮುಖ್ಯ ಮಂದಿರದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇನ್ನು ಇಲ್ಲಿ ಪ್ರತಿ ತಿಂಗಳಿನ ಎರಡನೇ ಮತ್ತು ನಾಲ್ಕನೇ ಭಾನುವಾರ ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸುಮಾರು 800 ಜನರು ಏಕಕಾಲದಲ್ಲಿ ಕುಳಿತು ಊಟ ಮಾಡಬಹುದಾದ ದೊಡ್ಡ ಭೋಜನಾಲಯ ಕೂಡ ಇಲ್ಲಿದೆ. ಹಾಗೇ 1500 ಜನರು ಕುಳಿತು ಕಾರ್ಯಕ್ರಮವನ್ನು ವೀಕ್ಷಿಸಲು ಸುಸಜ್ಜಿತ ಮತ್ತು ವಿಶಾಲ ಆಡಿಟೋರಿಯಂ ಕೂಡ ಕಟ್ಟಿಸಲಾಗಿದೆ.

ನೋಡಿರಿ

