ಜೂನ್ 3ಕ್ಕೆ ಡಿಕೆ ಶಿವಕುಮಾರ್ ಪಟ್ಟಾಭಿಷೇಕ – ನೊಣವಿನಕೆರೆ ಅಜ್ಜಯ್ಯ ಹೇಳಿದ್ದಂತೆ ಮುಹೂರ್ತ ಫಿಕ್ಸ್

ಅಂತಿಮವಾಗಿ ಡಿಕೆ ಶಿವಕುಮಾರ್ ಪಟ್ಟಾಭಿಷೇಕಕ್ಕೆ ಡೇಟ್ ಫಿಕ್ಸ್ ಆಗಿದೆ. ಜೂನ್ 3ರ ಬುಧವಾರ ಡಿಕೆ ಶಿವಕುಮಾರ್ ಮುಂದಿನ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಮೇ.31ಕ್ಕೆ ಜೂನ್ 3ಕ್ಕೆ.. ಜೂನ್ 5ಕ್ಕೆ ಪ್ರಮಾಣವಚನ ಸ್ವೀಕರ ಮಾಡ್ತಾರೆ ಎನ್ನಲಾಗಿತ್ತು. ಆದ್ರೆ ಅಂತಿಮವಾಗಿ ಈಗ ಜೂನ್ 3ಕ್ಕೆ ಪ್ರಮಾಣವಚನ ಸ್ವೀಕರ ಮಾಡಲಿದ್ದು, ಡೇಟ್ ಫಿಕ್ಸ್ ಆಗಿದೆ.
ತುಮಕೂರು ಜಿಲ್ಲೆಯ ನೊಣವಿನಕೆರೆಯ ಶ್ರೀ ಕಾಡಸಿದ್ಧೇಶ್ವರ ಅಜ್ಜಯ್ಯ ಪೀಠದ ಆದೇಶದಂತೆ, ಜೂನ್ 3ರಬುಧವಾರ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಪಕ್ಕಾ ಆಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಡಿ.ಕೆ. ಶಿವಕುಮಾರ್ ಅವರ ವೈಯಕ್ತಿಕ ಜಾತಕ ಮತ್ತು ಗ್ರಹಗತಿಗಳ ಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿರುವ ಅಜ್ಜಯ್ಯನ ಪೀಠದ ಶ್ರೀಗಳು, ಜೂನ್ 3ರ ಬುಧವಾರದಂದು ಅತ್ಯಂತ ಶ್ರೇಷ್ಠ ಹಾಗೂ ವಿಜಯದಾಯಕ ಮುಹೂರ್ತವಿದೆ ಎಂದು ತಿಳಿಸಿದ್ದಾರೆ.
ಅಜ್ಜಯ್ಯನವರ ವಾಕ್ಯ ಹಾಗೂ ಪೀಠದ ನಿರ್ದೇಶನವನ್ನು ಚಾಚೂ ತಪ್ಪದೆ ಪಾಲಿಸುವ ಡಿಕೆಶಿ, ಇದೇ ದಿನಾಂಕವನ್ನು ಅಂತಿಮಗೊಳಿಸುವಂತೆ ಹೈಕಮಾಂಡ್ ಹಾಗೂ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಡಿ.ಕೆ. ಶಿವಕುಮಾರ್ ಅವರು ಅಜ್ಜಯ್ಯನವರ ಪೀಠದ ಪರಮ ಭಕ್ತರಾಗಿದ್ದು, ವಿಧಾನಸಭಾ ಚುನಾವಣೆ, ಸಿಎಂ ರೇಸ್ ಹಾಗೂ ಇತ್ತೀಚಿನ ರಾಜಕೀಯ ಬಿಕ್ಕಟ್ಟುಗಳ ಸಂದರ್ಭದಲ್ಲೂ ಪೀಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. “ಅಜ್ಜಯ್ಯನವರು ಹೇಳಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಈಗ ಅವರೇ ನೀಡಿದ ಮುಹೂರ್ತದ ಪ್ರಕಾರ ಪದಗ್ರಹಣ ನಡೆಯಲಿದೆ” ಎಂದು ಅವರ ಆಪ್ತ ವಲಯದ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯ ರಾಜಭವನದಲ್ಲಿ ದಿನಾಂಕದ ಅಧಿಕೃತ ಪ್ರಕಟಣೆಯ ಪ್ರಕ್ರಿಯೆಗಳು ಚುರುಕುಗೊಂಡಿದ್ದು, ಜೂನ್ 3ರ ಮಹೂರ್ತದ ಸುದ್ದಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಭಾರಿ ಸಡಗರ ತಂದಿದೆ.

ನೋಡಿರಿ

