ಕುರ್ಕುರೆ, ಬಿಸ್ಕೆಟ್‌ ಪ್ಯಾಕೆಟ್‌ ಕದ್ದ ಆರೋಪ – ಮಕ್ಕಳನ್ನು ಕಂಬಕ್ಕೆ ಕಟ್ಟಿ ಥಳಿಸಿದ ಅಂಗಡಿ ಮಾಲೀಕ!

ಕುರ್ಕುರೆ, ಬಿಸ್ಕೆಟ್‌ ಪ್ಯಾಕೆಟ್‌ ಕದ್ದ ಆರೋಪ – ಮಕ್ಕಳನ್ನು ಕಂಬಕ್ಕೆ ಕಟ್ಟಿ ಥಳಿಸಿದ ಅಂಗಡಿ ಮಾಲೀಕ!

ಮಕ್ಕಳು ಅಂದ ಮೇಲೆ ಕೆಲವೊಂದು ತಪ್ಪುಗಳನ್ನು ಮಾಡುವುದು ಸಾಮಾನ್ಯ. ಕೆಲವೊಂದು ಮಕ್ಕಳು ಕಳ್ಳತನ ಮಾಡುವುದನ್ನು ಕೂಡ ಕರಗತ ಮಾಡಿಕೊಂಡಿರುತ್ತಾರೆ. ಯಾವುದಾದರೂ ವಸ್ತುಗಳನ್ನು ಕಳ್ಳತನ ಮಾಡಿ ಸಿಕ್ಕಿ ಬೀಳುತ್ತಾರೆ. ಈ ವೇಳೆ ಅವರಿಗೆ ಬೈದು ಬುದ್ದಿವಾದ ಹೇಳುವುದು ಸಾಮಾನ್ಯ. ಆದರೆ ಇಲ್ಲೊಂದು ಕಡೆ ಮಕ್ಕಳು ಕಳ್ಳತನ ಮಾಡಿದ್ದಾರೆ ಎಂದು ಅವರನ್ನು ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿರುವ ಅಮಾನವೀಯ ಘಟನೆ ನಡೆದಿದೆ.

ಏನಿದು ಘಟನೆ?

ಕಳೆ ಎರಡು ದಿನಗಳ ಹಿಂದೆ ದಿನಸಿ ಅಂಗಡಿಯೊಂದರಲ್ಲಿ ಮಕ್ಕಳು ಕುರ್ಕುರೆ, ಬಿಸ್ಕೆಟ್‌ ಪ್ಯಾಕೆಟ್‌ಗಳನ್ನು ಕದ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನಾಲ್ವರು ಬಾಲಕರನ್ನು ಕಂಬಕ್ಕೆ ಕಟ್ಟಿ ಥಳಿಸಿರುವ ಅಮಾನವೀಯ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯ ಬೀರ್‌ಪುರದ ಫಜಿಲ್‌ಪುರ ಗ್ರಾಮದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಅಂಗಡಿ ಮಾಲೀಕ ನಾಲ್ಕು ಬಾಲಕರನ್ನು ಕಂಬಕ್ಕೆ ಕಟ್ಟಿ ಥಳಿಸುತ್ತಿರುವ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಆತನ ವಿರುದ್ಧ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಈವರೆಗೆ ಬಂಧಿಸಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ: ಪೊಲೀಸರನ್ನು ಕಂಡು ಎಸ್ಕೇಪ್‌ ಆಗಲು ಯತ್ನ! – ಓಡುತ್ತಾ.. ಓಡುತ್ತಾ ನದಿಗೆ ಹಾರಿಯೇ ಬಿಟ್ಟ!

ಬೇಗುಸರೈ ಎಸ್ಪಿ ಯೋಗೇಂದ್ರ ಕುಮಾರ್ ಈ ಬಗ್ಗೆ ಮಾತನಾಡಿದ್ದು, ಪ್ರಕರಣ ದಾಖಲಿಸಿಕೊಂಡ ಬಳಿಕ ತನಿಖೆ ನಡೆಸುವ ಸಮಯದಲ್ಲಿ ಕೆಲ ಹುಡುಗರು ಅಂಗಡಿಯಿಂದ ಕಳ್ಳತನ ಮಾಡುತ್ತಿರುವುದು ಕಂಡುಬಂದಿದೆ. ಕಳ್ಳತನ ಮಾಡುವಾಗ ಅಂಗಡಿ ಮಾಲೀಕನಿಗೆ ಸಿಕ್ಕಿಬಿದ್ದು ಥಳಿಕಕ್ಕೊಳಗಾಗಿದ್ದಾರೆ. ಒಟ್ಟಿನಲ್ಲಿ ಅಂಗಡಿಯವನು ಥಳಿಸಿದ್ದು, ದೊಡ್ಡ ತಪ್ಪು ಮತ್ತು ಅಮಾನವೀಯ ಎಂದು ತಿಳಿಸಿದ್ದಾರೆ.

ಅಂಗಡಿ ಮಾಲೀಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರೂ ಒತ್ತಾಯಿಸಿದ್ದಾರೆ. ಆದ್ರೆ ಈವರೆಗೆ ಲಿಖಿತ ದೂರು ನೀಡಿಲ್ಲ. ಬೀರ್‌ಪುರ ಪೊಲೀಸ್ ಠಾಣೆ ಸಂಪರ್ಕಿಸಿ ದೂರು ದಾಖಲಿಸುವಂತೆ ನಾವು ಕುಟುಂಬಸ್ಥರಿಗೆ ತಿಳಿಸಿದ್ದೇವೆ. ಅವರು ದೂರು ನೀಡಿದ ನಂತರವೇ ಮುಂದಿನ ಕ್ರಮ ಜರುಗಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Shwetha M