ಒಡಿಶಾ ರೈಲು ದುರಂತ ಸಂಭವಿಸಿ 4 ತಿಂಗಳು ಕಳೆದರೂ ಪತ್ತೆಯಾಗಿಲ್ಲ 28 ಮೃತದೇಹಗಳ ಗುರುತು! – ರೈಲ್ವೆ ಇಲಾಖೆಯಿಂದಲೇ ಅಂತ್ಯಕ್ರಿಯೆ?

ಒಡಿಶಾ ರೈಲು ದುರಂತ ಸಂಭವಿಸಿ 4 ತಿಂಗಳು ಕಳೆದರೂ ಪತ್ತೆಯಾಗಿಲ್ಲ 28 ಮೃತದೇಹಗಳ ಗುರುತು! – ರೈಲ್ವೆ ಇಲಾಖೆಯಿಂದಲೇ ಅಂತ್ಯಕ್ರಿಯೆ?

ಭುವನೇಶ್ವರ: ಒಡಿಶಾ ರೈಲು ದುರಂತ ಇಡೀ ದೇಶವನ್ನೇ ಬೆಚ್ಚ ಬೀಳುವಂತೆ ಮಾಡಿತ್ತು. ಈ ಅವಘಡದಲ್ಲಿ ಬರೋಬ್ಬರಿ 293 ಜನರು ಸಾವನ್ನಪ್ಪಿದ್ದರು. ಸಾವಿರಾರು ಮಂದಿ ಗಾಯಗೊಂಡಿದ್ದರು. ಇದೀಗ ಈ ಘಟನೆ ನಡೆದು ಬರೋಬ್ಬರಿ ನಾಲ್ಕು ತಿಂಗಳೇ ಕಳೆದಿದೆ ಆದರೂ ಸುಮಾರು 28 ಶವಗಳ ಗುರುತು ಇನ್ನು ಪತ್ತೆಯಾಗಿಲ್ಲ. ಹೀಗಾಗಿ ಅಲ್ಲಿನ ಸರ್ಕಾರ ಗರುತು ಸಿಗದ ಶವಗಳ ಅಂತ್ಯ ಸಂಸ್ಕಾರವನ್ನು ವೀಡಿಯೋ ಚಿತ್ರೀಕರಣದ ಮೂಲಕ ವೈಜ್ಞಾನಿಕವಾಗಿ ಅಂತ್ಯಕ್ರಿಯೆ ಮಾಡಲು ತೀರ್ಮಾನಿಸಿದೆ.

ಕಳೆದ ಜೂನ್‌ 2 ರಂದು ಬಾಲಸೋರ್‌ನಲ್ಲಿ ರೈಲು ದುರಂತ ಸಂಭವಿಸಿದೆ. ಮೂರು ರೈಲುಗಳು ಡಿಕ್ಕಿ ಹೊಡೆದಿದ್ದರಿಂದ ಶತಮಾನದ ಅತ್ಯಂತ ಭೀಕರ ರೈಲು ದುರಂತ ಸಂಭವಿಸಿತ್ತು. ಎರಡು ದಶಕಗಳ ಅತಿದೊಡ್ಡ ಅಪಘಾತದಲ್ಲಿ 293 ಜನರು ಸಾವು ಕಂಡಿದ್ದರೆ, 1 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅಪಘಾತದ ಕುರಿತು ಒಂದೆಡೆ ಸಿಬಿಐ ತನಿಖೆ ನಡೆಸಿದೆ. ಇನ್ನು ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಕೂಡ ತನಿಖೆ ನಡೆಸಿ ವರದಿಯನ್ನು ಸರ್ಕಾರಕ್ಕೆ ನೀಡಿದೆ. ರೈಲು ಅಪಘಾತದಲ್ಲಿ ಮೃತ 293 ಜನರಲ್ಲಿ ಅಕ್ಟೋಬರ್‌ ತಿಂಗಳವರೆಗೂ ಒಟ್ಟು 265 ಶವಗಳನ್ನು ಪತ್ತೆ ಮಾಡಿದ್ದು, ವಾರಸುದಾರರನ್ನು ಗುರುತಿಸಲಾಗಿದೆ. ಆದರೆ, ಘಟನೆ ನಡೆದು ಈವರೆಗೆ ನಾಲ್ಕು ತಿಂಗಳು ಕಳೆದರೂ 28 ಶವಗಳನ್ನು ಗುರುತಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಎಷ್ಟೇ ಪ್ರಕಟಣೆ ಕೊಟ್ಟರೂ ಯಾರೊಬ್ಬ ವಾರಸುದಾರರೂ ರೈಲ್ವೆ ಇಲಾಖೆಯನ್ನು ಸಂಪರ್ಕ ಮಾಡಿಲ್ಲ. ಇನ್ನು ಬೆರಳಚ್ಚು ಮೂಲಕ ಗುರುತಿಸಲು ಪ್ರಯತ್ನ ಮಾಡಿದರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದಲೇ ಅ.10 (ಮಂಗಳವಾರ) ಭುವನೇಶ್ವರ ಮುನಿಸಿಪಲ್ ಕಾರ್ಪೊರೇಷನ್ ವಿಯಿಂದ ಅಂತ್ಯಕ್ರಿಯೆ ಮಾಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಗೆಳೆಯನ ಖಾತೆಗೆ ಕಳುಹಿಸಿದ್ದು 2000 ರೂ.. ಮರಳಿ ಖಾತೆಗೆ ಬಂದಿತ್ತು 753 ಕೋಟಿ! – ಕ್ಷಣಾರ್ಧದಲ್ಲೇ ಕುಬೇರನಾದ ಯುವಕ

ಇನ್ನು ಶವಗಳ ಅಂತ್ಯಕ್ರಿಯೆಗೂ ಮುನ್ನ ವೈಜ್ಞಾನಿಕವಾಗಿ ದೇಹಗಳ ಮಾಹಿತಿ ಸಂಗ್ರಹಣೆಗೆ ಕ್ರಮವಹಿಸಲಾಗಿದೆ. ದೇಹದ ಮೇಲಿನ ಎಲ್ಲ ಗುರುತುಗಳನ್ನು, ಡಿಎನ್‌ಎ ಸ್ಯಾಂಪಲ್‌ಗಳನ್ನು ಹಾಗೂ ವ್ಯಕ್ತಿಗೆ ಸಂಬಂಧಿಸಿದ ಎಲ್ಲ ವೈಜ್ಞಾನಿಕ ಮಾಹಿತಿಗಳನ್ನು ಸಂಗ್ರಹಿಸಿ ವೀಡಿಯೋ ಚಿತ್ರೀಕರಣದ ಮೂಲಕ ಅಂತ್ಯಕ್ರಿಯೆ ಮಾಡಲು ನಿರ್ಧರಿಸಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಯಾರೇ ವಾರಸುದಾರರು ಬಂದರೂ ಕೂಡ ಅವರಿಗೆ ಶವದ ಫೋಟೋ ಹಾಗೂ ಡಿಎನ್‌ಎ ಮಾದರಿಗಳನ್ನು ವೈಜ್ಞಾನಿಕವಾಗಿ ಹೋಲಿಕೆ ಮಾಡಿ ವಾರಸುದಾರರಿಗೆ ಸರ್ಕಾರದಿಂದ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

ರೈಲ್ವೆ ಇಲಾ​ಖೆಯು, ಸಹಾಯ​ವಾಣಿ ಸಂಖ್ಯೆ 139ಗೆ ಕರೆ ಮಾಡಿ ಮೃತರ ಗುರುತು ಪತ್ತೆ ಮಾಡುವ ಬಗ್ಗೆ ಬಂಧು​ಗಳು ಮಾತ​ನಾ​ಡ​ಬ​ಹುದು ಎಂದು ಮನವಿ ಮಾಡಿದೆ. ಇನ್ನು ಮೃತದೇಹ ತಮ್ಮದೆಂದು ಬರುವ ಮುನ್ನ ಸಂಬಂಧಿತ ದಾಖಲೆಗಳನ್ನು ತೆಗೆದುಕೊಂಡು ಬರುವಂತೆ ರೈಲ್ವೆ ಇಲಾಖೆಯಿಂದ ಮನವಿ ಮಾಡಲಾಗಿದೆ. ಇನ್ನು ವಾರಸುದಾರರು ಇಲ್ಲದಿದ್ದರೆ ಈ ಪ್ರಕರಣವನ್ನು ಬಹುತೇಕವಾಗಿ ಅಂತ್ಯಗೊಳಿಸಲು ಸರ್ಕಾರ ತೀರ್ಮಾನಿಸಲಾಗಿದೆ.

Shwetha M