ವಿದ್ಯಾರ್ಥಿಗಳಿಗೆ ಆತ್ಮಗಳ ಭಯ! – ರೈಲು ದುರಂತಕ್ಕೆ ಬಲಿಯಾಯ್ತು ಸರ್ಕಾರಿ ಶಾಲೆ!

ವಿದ್ಯಾರ್ಥಿಗಳಿಗೆ ಆತ್ಮಗಳ ಭಯ! – ರೈಲು ದುರಂತಕ್ಕೆ ಬಲಿಯಾಯ್ತು ಸರ್ಕಾರಿ ಶಾಲೆ!

ಜೂನ್‌ 2ರಂದು ಸಂಭವಿಸಿದ ಬಾಲಸೋರ್ ತ್ರಿವಳಿ ರೈಲು ಅಪಘಾತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ದುರಂತ ನೂರಾರು ನೋವಿನ ಕಥೆಗಳನ್ನು ಹೇಳುತ್ತಿದೆ. ದುರಂತದಲ್ಲಿ ಮಡಿದವರ ಕುಟುಂಬಗಳಲ್ಲಿ ಕಣ್ಣೀರ ಕೋಡಿ ಹರಿಯುತ್ತಿದೆ. ತ್ರಿವಳಿ ರೈಲು ದುರಂತದಲ್ಲಿ ಮಡಿದವರ ಶವಗಳನ್ನು ಸರ್ಕಾರಿ ಶಾಲೆಯೊಂದರಲ್ಲಿ ಇಡಲಾಗಿತ್ತು. ಹೀಗಾಗಿ ಆ ಶಾಲೆಗೆ ಬರಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಆಡಳಿತ ಮಂಡಳಿ ಶಾಲೆಯನ್ನು ನೆಲಸಮಗೊಳಿಸಿದೆ.

ಇದನ್ನೂ ಓದಿ: ಶವ ಇಟ್ಟ ಶಾಲೆಗೆ ಹೋಗಲು ವಿದ್ಯಾರ್ಥಿಗಳ ಹಿಂದೇಟು – ಮಕ್ಕಳನ್ನು ಕಾಡುತ್ತಿದೆ ‘ಆತ್ಮಗಳ ಭಯ’?

ಬಾಲಸೋರ್‌ ದುರಂತದಲ್ಲಿ ಸುಮಾರು 288 ಮಂದಿ ಸಾವನ್ನಪ್ಪಿದ್ದರು. ಸಾವಿರಾರು ಜನರು ಗಾಯಗೊಂಡಿದ್ದರು. ಸಾವನ್ನಪ್ಪಿದವರ ಮೃತದೇಹಗಳನ್ನು ಬಾಲಸೋರ್‌ನ ಸರ್ಕಾರಿ ಬಹನಾಗಾ ಪ್ರೌಢಶಾಲೆಯಲ್ಲಿ ಇಡಲಾಗಿತ್ತು. ಬಳಿಕ ಶವಗಳನ್ನು ಕುಟುಂಸ್ಥರಿಗೆ ಹಸ್ತಾಂತರಿಸಲಾಗಿತ್ತು. ಇದೀಗ ಶಾಲೆ ಪ್ರಾರಂಭವಾಗಿದೆ. ಆದರೆ ಶಾಲೆಯಲ್ಲಿ ಮೃತರ ಆತ್ಮವಿದೆ. ಹೀಗಾಗಿ ನಾವು ಶಾಲೆಗೆ ಬರುವುದಿಲ್ಲ ಎಂದು ಮಕ್ಕಳು ಪಟ್ಟು ಹಿಡಿದು ಕುಳಿತಿದ್ದರು. ಪೋಷಕರು ಕೂಡ ಶಾಲಾ ಆವರಣಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಶಾಲಾ ಆಡಳಿತ ಮಂಡಳಿ ಹಳೇ ಕಟ್ಟಡವನ್ನು ಕೆಡವುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು. ಕಟ್ಟಡ ಸುರಕ್ಷಿತವಾಗಿಲ್ಲ. ರೈಲು ಅಪಘಾತ ಘಟನೆಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಆಘಾತಕ್ಕೊಳಗಾಗಿದ್ದಾರೆ ಎಂದು ಸಮಿತಿಯು ಹೇಳಿಕೆ ನೀಡಿದೆ. ಹಾಗಾಗಿ ಶುಕ್ರವಾರ ಶಾಲೆಯನ್ನು ಕೆಡವಲಾಗಿದೆ.

ಈ ಬಗ್ಗೆ ಬಹನಾಗಾ ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಸ್ವೈನ್ ಮಾತನಾಡಿದ್ದು, ಜೂನ್ 2 ರ ರೈಲು ಅಪಘಾತದ ನಂತರ, 65 ವರ್ಷ ಹಳೆಯ ಶಾಲಾ ಕಟ್ಟಡಕ್ಕೆ ಮೃತದೇಹಗಳನ್ನು ತಂದಿಡಲಾಗಿತ್ತು. ಹೀಗಾಗಿ ವಿದ್ಯಾರ್ಥಿಗಳು ಶಾಲೆಗೆ ಬರಲು ಭಯಭೀತರಾಗಿದ್ದಾರೆ. ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಮತ್ತು ಅವರ ಭಯವನ್ನು ಹೋಗಲಾಡಿಸಲು ಕೆಲವು ಕಾರ್ಯಗಳನ್ನು ಆಯೋಜಿಸಲು ಚಿಂತಿಸಿದೆ ಹೇಳಿದ್ದಾರೆ.

ಇನ್ನು ಗುರುವಾರ ಶಾಲೆಗೆ ಭೇಟಿ ನೀಡಿದ್ದ ಬಾಲಸೋರ್ ಜಿಲ್ಲಾಧಿಕಾರಿ ದತ್ತಾತ್ರಯ ಭೌಸಾಹೇಬ್ ಶಿಂಧೆ, ‘ಶಾಲಾ ಆಡಳಿತ ಸಮಿತಿ ಸದಸ್ಯರು, ಮುಖ್ಯೋಪಾಧ್ಯಾಯಿನಿ, ಇತರೆ ಸಿಬ್ಬಂದಿ ಹಾಗೂ ಸ್ಥಳೀಯರನ್ನು ಭೇಟಿ ಮಾಡಿ, ಹಳೆ ಕಟ್ಟಡವನ್ನು ಕೆಡವಿ ಮಕ್ಕಳಿಗೆ ನವೀಕರಿಸಲು ಮುಂದಾಗಿದ್ದಾರೆ. ಮಕ್ಕಳು ತರಗತಿಗೆ ಬರಲು ಭಯ ವ್ಯಕ್ತಪಡಿಸಿದ ನಂತರ ಇದನ್ನು ಕೆಡವಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ಜೂನ್ 2 ರಂದು ಸಂಭವಿಸಿದ ಭೀಕರ ಅಪಘಾತದಲ್ಲಿ 288 ಜನರು ಸಾವನ್ನಪ್ಪಿದರು ಮತ್ತು 1,100 ಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ಅಪಘಾತದಿಂದಾಗಿ ಜನನಿಬಿಡ ಮಾರ್ಗದಲ್ಲಿ ಸರಕು ಮತ್ತು ಪ್ರಯಾಣಿಕ ರೈಲುಗಳ ಸಂಚಾರಕ್ಕೆ ಅಡ್ಡಿಯುಂಟಾಯಿತು. ಅಪಘಾತದ 51 ಗಂಟೆಗಳ ನಂತರ ಭಾನುವಾರ ತಡರಾತ್ರಿ ರೈಲು ಸಂಚಾರ ಪುನರಾರಂಭವಾಯಿತು.

suddiyaana