ಇದು ದೇವಾಲಯವಲ್ಲ… ಭೂಲೋಕ ವೈಕುಂಠ! – ಶ್ರೀರಂಗಂ ರಂಗನಾಥಸ್ವಾಮಿ ವಿಶೇಷತೆ ಏನು?

ಇದು ದೇವಾಲಯವಲ್ಲ… ಭೂಲೋಕ ವೈಕುಂಠ! – ಶ್ರೀರಂಗಂ ರಂಗನಾಥಸ್ವಾಮಿ ವಿಶೇಷತೆ ಏನು?

ತಮಿಳುನಾಡಿನ ತಿರುಚಿರಾಪಳ್ಳಿಯ ಶ್ರೀರಂಗಂ ದ್ವೀಪದಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯವು ಭಾರತದ ಪ್ರಸಿದ್ಧ ವೈಷ್ಣವ ಕ್ಷೇತ್ರಗಳಲ್ಲಿ ಒಂದಾಗಿದೆ. ಕಾವೇರಿ ಮತ್ತು ಕೊಳ್ಳಿಡಂ ನದಿಗಳ ನಡುವೆ ಇರುವ ಈ ದೇವಾಲಯವನ್ನು ಭಕ್ತರು ‘ಭೂಲೋಕ ವೈಕುಂಠ’ ಎಂದು ಕರೆಯುತ್ತಾರೆ.

ಇಲ್ಲಿನ ಪ್ರಮುಖ ಆರಾಧ್ಯ ದೈವ ಶ್ರೀ ರಂಗನಾಥಸ್ವಾಮಿ. ಆದಿಶೇಷನ ಮೇಲೆ ಶಯನಿಸಿರುವ ವಿಷ್ಣುವಿನ ರೂಪದಲ್ಲಿ ರಂಗನಾಥಸ್ವಾಮಿಯ ವಿಗ್ರಹವನ್ನು ಇಲ್ಲಿ ಆರಾಧಿಸಲಾಗುತ್ತದೆ. ಈ ಕ್ಷೇತ್ರವು 108 ದಿವ್ಯ ದೇಶಗಳಲ್ಲಿ ಮೊದಲ ಹಾಗೂ ಪ್ರಮುಖ ಕ್ಷೇತ್ರವೆಂದು ಪರಿಗಣಿಸಲಾಗಿದೆ.

ದೇವಾಲಯದ ಮತ್ತೊಂದು ಅದ್ಭುತವೆಂದರೆ ಇದರ ವಿಶಾಲ ವಿನ್ಯಾಸ. ಸುಮಾರು 156 ಎಕರೆ ಪ್ರದೇಶದಲ್ಲಿ ಹರಡಿರುವ ದೇವಾಲಯದ ಸಂಕೀರ್ಣದಲ್ಲಿ ಏಳು ಪ್ರಾಕಾರಗಳು ಹಾಗೂ 21 ಗೋಪುರಗಳಿವೆ. ದ್ರಾವಿಡ ಶೈಲಿಯ ವಾಸ್ತುಶಿಲ್ಪ, ಭವ್ಯ ಗೋಪುರಗಳು, ಕಲ್ಲಿನ ಕೆತ್ತನೆಗಳು ಮತ್ತು ವಿಶಾಲ ಮಂಟಪಗಳು ಇಲ್ಲಿನ ವಿಶೇಷತೆ.

ಇಲ್ಲಿನ ರಾಜಗೋಪುರವು ಸುಮಾರು 72 ಮೀಟರ್ ಎತ್ತರ ಹೊಂದಿದ್ದು, ದೇವಾಲಯದ ಭವ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸಾವಿರ ಕಂಬಗಳ ಮಂಟಪವೂ ಇಲ್ಲಿನ ಪ್ರಮುಖ ವಾಸ್ತುಶಿಲ್ಪದ ಆಕರ್ಷಣೆಗಳಲ್ಲಿ ಒಂದಾಗಿದೆ.

ಶ್ರೀರಂಗಂ ಕೇವಲ ದೇವಾಲಯವಲ್ಲ; ಶತಮಾನಗಳಿಂದ ಧಾರ್ಮಿಕ ಆಚರಣೆ, ವಾಸ್ತುಶಿಲ್ಪ ಮತ್ತು ವೈಷ್ಣವ ಸಂಪ್ರದಾಯವನ್ನು ಜೀವಂತವಾಗಿಟ್ಟಿರುವ ವಿಶಿಷ್ಟ ದೇವಾಲಯ-ನಗರವಾಗಿದೆ.

Kishor KV

Leave a Reply

Your email address will not be published. Required fields are marked *