ಒತ್ತೆಯಾಳುಗಳನ್ನು ಬಿಡುಗಡೆ ಮಾಡದೇ ಇದ್ರೆ ಕದನ ವಿರಾಮ ಇಲ್ಲ – ಬೆಂಜಮಿನ್ ನೆತನ್ಯಾಹು

ಒತ್ತೆಯಾಳುಗಳನ್ನು ಬಿಡುಗಡೆ ಮಾಡದೇ ಇದ್ರೆ ಕದನ ವಿರಾಮ ಇಲ್ಲ – ಬೆಂಜಮಿನ್ ನೆತನ್ಯಾಹು

ಹಮಾಸ್‌ ಹಾಗೂ ಇಸ್ರೇಲ್‌ ನಡುವಿನ ಭೀಕರ ಸಮರ ಆರಂಭವಾಗಿ ಒಂದು ತಿಂಗಳೇ ಕಳೆದಿದೆ. ಯುದ್ಧ ನಿಲ್ಲಿಸುವಂತೆ ಜಾಗತಿಕ ನಾಯಕರು ಒತ್ತಾಯಿಸುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಯಾವುದೇ ಕಾರಣಕ್ಕೂ ಯುದ್ಧ ನಿಲ್ಲಿಸುವುದಿಲ್ಲ ಎಂದು ಇಸ್ರೇಲ್‌ ಪ್ರಧಾನಿ ಹೇಳುತ್ತಲೇ ಬಂದಿದ್ದಾರೆ. ಕದನ ವಿರಾಮದ ಮಾತುಕತೆಗಳ ಮಧ್ಯೆಯೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತೊಮ್ಮೆ ಗಾಜಾದಲ್ಲಿ ಕದನ ವಿರಾಮದ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ. ಒತ್ತೆಯಾಳುಗಳನ್ನು ಬಿಡುಗಡೆ ಮಾಡದ ಹೊರತು ಕದನ ವಿರಾಮ ಇಲ್ಲ ಎಂದು ಖಡಕ್‌ ಆಗಿ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ನೆತನ್ಯಾಹು, ಇತ್ತೀಚಿನ ದಿನಗಳಲ್ಲಿ ನಾವು ಕೇಳುತ್ತಿರುವ ಎಲ್ಲಾ ರೀತಿಯ ಸುಳ್ಳು ವದಂತಿಗಳಿಗೆ ಕೊನೆ ಹಾಡಲು ಬಯಸುತ್ತೇನೆ. ಹಮಾಸ್ ಉಗ್ರರು ಅಪಹರಿಸಿರುವ ಆರು ಮಂದಿ ಅಮೆರಿಕನ್ನರು ಸೇರಿದಂತೆ 12ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಬಿಡುಗಡೆ ಮಾಡದೆ ಯಾವುದೇ ಕದನ ವಿರಾಮ ಇಲ್ಲ ಎಂದು ಸ್ಪಷ್ಟವಾಗಿ ಪುನರುಚ್ಚರಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಣ್ವಸ್ತ್ರ ಪ್ರಯೋಗಕ್ಕೂ ಮುನ್ನ ರಷ್ಯಾ ಮಿಸೈಲ್ ಪರೀಕ್ಷೆ – ಅಮೆರಿಕಕ್ಕೆ ಪುಟಿನ್ ನೇರ ಸವಾಲು?

ನಾವು ಎಲ್ಲಾ ಮೂಲಗಳಿಂದ ಕೇಳುತ್ತಿರುವ ಎಲ್ಲಾ ರೀತಿಯ ಸುಳ್ಳು ವದಂತಿಗಳನ್ನು ಕೊನೆಗೊಳಿಸುತ್ತಿದ್ದೇವೆ. ನಮ್ಮ ಒತ್ತೆಯಾಳುಗಳನ್ನು ಬಿಡುಗಡೆ ಮಾಡದೆ ಕದನ ವಿರಾಮ ಘೋಷಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಹಮಾಸ್ ರಸ್ತೆಗಳನ್ನು ನಿರ್ಬಂಧಿಸಿದೆ. ಪಲಾಯನ ಮಾಡಲು ಪ್ರಯತ್ನಿಸುತ್ತಿರುವ ಪ್ಯಾಲೆಸ್ಟೀನಿಯರ ಮೇಲೆ ಗುಂಡು ಹಾರಿಸಿದೆ. ಹಮಾಸ್ ವಿರುದ್ಧ ಯುದ್ಧದ ನಂತರ ಅನಿರ್ದಿಷ್ಟಾವಧಿಯವರೆಗೆ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಭದ್ರತಾ ಹೊಣೆಗಾರಿಕೆ ಹೊಂದಿರುತ್ತದೆ ಎಂದು ಹೇಳಿದ್ದಾರೆ.

ಈ ನಡುವೆ ಯುದ್ಧದ ಕುರಿತು ಮಾಹಿತಿ ನೀಡಿರುವ ಇಸ್ರೇಲ್ ಸೇನಾಪಡೆ ಹಮಾಸ್ ಅನ್ನು ಗೆಲ್ಲಲು ಬಿಡುವುದಿಲ್ಲ. ನಾವು ದಕ್ಷಿಣ ಇಸ್ರೇಲ್​ನಲ್ಲಿ ನಮ್ಮ ಸಮುದಾಯಗಳನ್ನು ಪುನರ್ನಿರ್ಮಿಸುತ್ತೇವೆ. ನಮ್ಮ ಜೀವನವನ್ನು ಮುಂದುವರಿಸುತ್ತೇವೆ. ಭೂ ಆಕ್ರಮಣದ ಆರಂಭದಿಂದಲೂ ಗಾಜಾದಲ್ಲಿ 130ಕ್ಕೂ ಹೆಚ್ಚು ಹಮಾಸ್ ಸುರಂಗಗಳನ್ನು ನಾಶಪಡಿಸಲಾಗಿದೆ. ಕಮಾಂಡ್ ಸೆಂಟರ್‌ಗಳಂತಹ ಇತರ ಭೂಗತ ಹಮಾಸ್ ಮೂಲಸೌಕರ್ಯಗಳನ್ನೂ ಸಹ ನಾಶಪಡಿಸಲಾಗಿದೆ ಎಂದು ಹೇಳಿದೆ.

ಉತ್ತರ ಗಾಜಾದಿಂದ ದಕ್ಷಿಣ ಭಾಗಕ್ಕೆ ಸಾವಿರಾರು ಪ್ಯಾಲೆಸ್ಟೀನಿಯನ್ನರು ವಲಸೆ ಹೋಗುತ್ತಿದ್ದಾರೆ. ಉತ್ತರ ಗಾಜಾದ ನಿವಾಸಿಗಳಿಗೆ ಹೋರಾಟದಿಂದ ದೂರವಿರಲು ದಕ್ಷಿಣಕ್ಕೆ ತೆರಳುವಂತೆ ತಿಳಿಸಿದೆ. ಏತನ್ಮಧ್ಯೆ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯಗಳ ಸಂಸ್ಥೆ (ಯುಎನ್‌ಆರ್‌ಡಬ್ಲ್ಯೂಎ) ಇಸ್ರೇಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಹಮಾಸ್ ಆರೋಪಿಸಿದೆ.

ಯುಎನ್‌ಆರ್‌ಡಬ್ಲ್ಯೂಎ ಮತ್ತು ಅದರ ಅಧಿಕಾರಿಗಳು ಈ ಮಾನವೀಯ ದುರಂತಕ್ಕೆ ಜವಾಬ್ದಾರರು. ಉತ್ತರದ ಗಾಜಾ ನಗರ ಪ್ರದೇಶದ ನಿವಾಸಿಗಳು ದಕ್ಷಿಣಕ್ಕೆ ಪಲಾಯನ ಮಾಡಲು ಇಸ್ರೇಲ್ ಸೇನೆ ವ್ಯವಸ್ಥೆ ಕಲ್ಪಿಸಿದ ಮಾರ್ಗಗಳಲ್ಲಿ ಹೋಗುತ್ತಿದ್ದಾರೆ ಎಂದು ಹಮಾಸ್ ವಕ್ತಾರ ಸಲಾಮಾ ಮಾರುಫ್ ತಿಳಿಸಿದ್ದಾರೆ.

Shwetha M