ಕೋಲ, ನೇಮೋತ್ಸವದ ರೀತಿ ಬಣ್ಣ ಹಚ್ಚಿ ಸಿನಿಮಾ, ಧಾರಾವಾಹಿಯಲ್ಲಿ ಅನುಕರಣೆ – ಕರಾವಳಿ ಭಾಗದ ದೈವಾರಾಧಕರಿಂದ ಹೋರಾಟ

ಕೋಲ, ನೇಮೋತ್ಸವದ ರೀತಿ ಬಣ್ಣ ಹಚ್ಚಿ ಸಿನಿಮಾ, ಧಾರಾವಾಹಿಯಲ್ಲಿ ಅನುಕರಣೆ –  ಕರಾವಳಿ ಭಾಗದ ದೈವಾರಾಧಕರಿಂದ ಹೋರಾಟ

ಕಲೆ, ನಂಬಿಕೆ, ಆರಾಧಾನೆ ಇದೆಲ್ಲವೂ ಮನುಷ್ಯರ ನಿತ್ಯ ಬದುಕಿನಲ್ಲಿ ನೋಡುವಂತದ್ದು. ಆದರೆ, ಇತ್ತೀಚೆಗೆ ಜನರ ಭಾವನೆಗಳ ಜೊತೆ ಕಲೆಗಳನ್ನು ಬೆರೆಸುವ ಸನ್ನಿವೇಶ ಹೆಚ್ಚಾಗುತ್ತಿದೆ. ದೈವಾರಾಧನೆ ಅಂದರೆ ಕರಾವಳಿ ಮಂದಿಯ ನಂಬಿಕೆ, ಶಕ್ತಿ.. ಆದರೆ ಇದನ್ನೇ ಮುಂದಿಟ್ಟುಕೊಂಡು ಸಿನಿಮಾ, ಧಾರಾವಾಹಿಯಲ್ಲಿ ನಟನೆ ಮಾಡುವುದು ಎಷ್ಟು ಸರಿ ಎಂಬ ಚರ್ಚೆ ಶುರುವಾಗಿದೆ.

ಇದನ್ನೂ ಓದಿ:ಅಕಾಲಿಕ ಮರಣ ಹೊಂದಿದ ದೈವ ನರ್ತಕನ ಮಕ್ಕಳಿಗೆ ದೀಕ್ಷೆ – ಭಕ್ತರ ಕಣ್ಮುಂದೆ ಕಾಂತಾರ ಸಿನಿಮಾ ಹೋಲುವ ರಿಯಲ್ ಸನ್ನಿವೇಶ..!

ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾದ ನಂತರ ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಧಾರವಾಹಿಯ ಪ್ರೋಮೋದಲ್ಲಿ ದೈವದಂತೆ ವೇಷ ಭೂಷಣ ಧರಿಸಿ ನಟನೆ ಮಾಡಿರುವುದು ಕರಾವಳಿ ಭಾಗದ ದೈವಾರಾಧಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಧಾರವಾಹಿ, ಸಿನಿಮಾಗಳಲ್ಲಿ ದೈವರಾಧನೆಗೆ ಅಪಮಾನವಾಗುತ್ತಿರುವ ವಿಚಾರವಾಗಿ ಹೋರಾಟಕ್ಕೆ ಇಳಿದಿದ್ದಾರೆ. ಈ ಹೋರಾಟಕ್ಕೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೆಂಬಲ ಸೂಚಿಸಿದೆ. ದೈವರಾಧನೆಗೆ ಅಪಮಾನವಾಗುತ್ತಿರುವ ಸಂಬಂಧ ಕ್ರಮ ಕೈಗೊಳ್ಳಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ತುಳುನಾಡ ದೈವರಾಧನ ಸಂರಕ್ಷಣಾ ವೇದಿಕೆ ಮನವಿ ಮಾಡಿದೆ. ಮುಂದೆ ಸಿನಿಮಾ, ಧಾರಾವಾಹಿ, ನಾಟಕಗಳಲ್ಲಿ ದೈವಾರಾಧನೆಯ ಪ್ರದರ್ಶನವಾಗಬಾರದು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪುವೆಲ್ ಎಚ್ಚರಿಕೆ ನೀಡಿದ್ದಾರೆ.

ಕರಾವಳಿಯಲ್ಲಿ ದೈವರಾಧನೆಗೆ ಆದರದ್ದೆ ಆದ ಮಹತ್ವವಿದೆ. ಆದರೆ ಚಲನಚಿತ್ರ, ಧಾರವಾಹಿ, ನಾಟಕಗಳಲ್ಲಿ ನಮ್ಮ ನಂಬಿಕೆಗೆ ಧಕ್ಕೆ ತರುವಂತಹ ಕೆಲಸ ಆಗುತ್ತಿದೆ. ಇದನ್ನು ವಿಎಚ್‌ಪಿ ಬಜರಂಗದಳ ವಿರೋಧಿಸುತ್ತದೆ. ದೈವರಾಧಕರ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದರು. ಚಲನಚಿತ್ರ ಮಾಡುವ ಬಗ್ಗೆ ನಮ್ಮದೇನು ವಿರೋಧವಿಲ್ಲ. ಸಿನಿಮಾ, ಧಾರವಾಹಿಗಳಲ್ಲಿ ದೈವದ ಕಥೆ, ಇತಿಹಾಸ, ಚರಿತ್ರೆ, ನಂಬಿಕೆ ಹೇಳಲಿ. ಆದರೆ ಕೋಲ, ನೇಮೋತ್ಸವದ ಅನುಕರಣೆ ಮಾಡಬಾರದು. ಕಾಲಿಗೆ ಗಗ್ಗರ ಹಾಕೋದಕ್ಕೆ ಒಂದು ಕ್ರಮ ಹಾಗೂ ಅದರದ್ದೇ ಆದ ರೀತಿ ನೀತಿಗಳು ಇವೆ. ವೇಷಭೂಷಣ ಹಾಕುವುದಾದರೂ ಅದರದ್ದೇ ಆದ ಮಹತ್ವವಿದೆ. ಆದರೆ ಅದೆಲ್ಲಾವನ್ನು ಗಾಳಿಗೆ ತೂರಿ ದಾರಿಗೆ ತರಲಾಗುತ್ತಿದೆ ಎಂದರು. ದುಡ್ಡಿಗೆ, ಪ್ರಚಾರಕ್ಕಾಗಿ ದೈವಾರಾಧನೆಯನ್ನು ಚಲನಚಿತ್ರದಲ್ಲಿ ತೋರಿಸುವುದು ಸರಿಯಲ್ಲ. ಚಲನಚಿತ್ರ ನಿರ್ಮಾಪಕರಿಗೆ ತಾಕತ್ತು ಇದ್ದರೆ ಹಿಂದುಗಳು ಅಲ್ಲದ ಬೇರೆ ಸಮುದಾಯದ ಧಾರ್ಮಿಕ ಆಚರಣೆ ಚಿತ್ರೀಕರಣ ಮಾಡಲಿ. ನಾಟಕ, ಫಿಲ್ಮ್ ತೆಗೆದು ತೋರಿಸಲಿ. ಆ ದೈರ್ಯ ಇದೆಯಾ? ನಾವು ಸುಮ್ಮನೆ ಕುಳಿತುಕೊಳ್ಳುತ್ತೇವೆ ಎಂದು ಈ ರೀತಿ ಮಾಡುವುದು ಸರಿಯಲ್ಲ ಎಂದರು.

ನಟ ರಿಷಬ್ ಶೆಟ್ಟಿ ಅಭಿನಯದ ಸೂಪರ್ ಹಿಟ್ ಕಾಂತರ ಸಿನಿಮಾವು ಬಣ್ಣದ ಲೋಕದಲ್ಲಿ ಧೂಳೆಬ್ಬಿಸಿತ್ತು. ದೈವದ ಕುರಿತ ಈ ಸಿನಿಮಾ ಪ್ರಸಾರದ ನಂತರ ಕೋಲ, ನೇಮೋತ್ಸವದ ರೀತಿ ಬಣ್ಣ ಹಚ್ಚಿ ಅನುಕರಣೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆಯುವ ಗೀಳು ಆರಂಭವಾಯಿತು. ಇದು ದೈವ ಭಕ್ತರ ನಂಬಿಕೆಗೆ ಘಾಸಿ ಉಂಟು ಮಾಡಿದ್ದಲ್ಲದೆ ದೈವಾರಾಧಕರ ಹೋರಾಟಕ್ಕೆ ಕಾರಣವಾಗಿದೆ. ಕಾಂತಾರ ಭಾಗ 2 ರ ಕೆಲಸ ಕಾರ್ಯಗಳು ನಡೆಯುತ್ತಿರುವ ನಡುವೆ ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಧಾರವಾಹಿಯ ಪ್ರೋಮೋದಲ್ಲಿ ದೈವದಂತೆ ವೇಷ ಭೂಷಣ ಧರಿಸಿ ನಟನೆ ಮಾಡಲಾಗಿತ್ತು. ಹೀಗಾಗಿ ದೈವಾರಾಧಕರು ಗರಂ ಆಗಿದ್ದು ಕಾನೂನು ಹೋರಾಟಕ್ಕೆ ಇಳಿದಿದ್ದಾರೆ.

Sulekha