ಅಸುರ ಮಹಿಷಾಸುರ ಜನಿಸಿದ್ದು ಹೇಗೆ ?, ನವರಾತ್ರಿಯ 10ನೇ ದಿನ ಸಂಹಾರ ಆಗಿದ್ದೇಕೆ?

ಅಸುರ ಮಹಿಷಾಸುರ ಜನಿಸಿದ್ದು ಹೇಗೆ ?, ನವರಾತ್ರಿಯ 10ನೇ ದಿನ ಸಂಹಾರ ಆಗಿದ್ದೇಕೆ?

ದುರ್ಗಾ ದೇವಿಯು ಮಹಿಷಾಸುರ ಎನ್ನುವ ಅಸುರನನ್ನು ಸಂಹಾರ ಮಾಡುವುದಕ್ಕಾಗಿ ಅವತರಿಸಿದ್ದಾಳೆ ಎನ್ನುವ ಪೌರಾಣಿಕ ಕಥೆಯಿದೆ. ನವರಾತ್ರಿಯ 10ನೇ ದಿನದಂದು ದುರ್ಗಾ ದೇವಿ ಮಹಿಷಾಸುರ ಎನ್ನುವ ರಾಕ್ಷಸನನ್ನು ಸಂಹಾರ ಮಾಡಿದ ನಂತರ ಮಹಿಷ ಮರ್ದಿನಿ, ಮಹಿಷಾಸುರ ಮರ್ದಿನಿ ಎನ್ನುವ ಹೆಸರುಗಳನ್ನು ಪಡೆದುಕೊಂಡಳು. ದೈತ್ಯ ರಾಕ್ಷಸ ಮಹಿಷಾಸುರ ಯಾರು.? ಮಹಿಷಾಸುರ ಜನಿಸಿದ್ದು ಹೇಗೆ.? ಅನ್ನೋದ್ದನ್ನ ತಿಳಿದುಕೊಳ್ಳಿ.

ದುರ್ಗಾ ದೇವಿಯನ್ನು ಮಹಿಷಾಸುರ ಮರ್ದಿನಿ ಎಂದು ಕರೆಯಲಾಗುತ್ತದೆ. ಯಾಕೆಂದರೆ, ಅವಳು ತ್ರಿಮೂರ್ತಿಗಳಿಂದ ಸೃಷ್ಟಿಯಾಗಿದ್ದೇ ಮಹಿಷಾಸುರನೆಂಬ ದೈತ್ಯ ರಾಕ್ಷಸನನ್ನು ಸಂಹಾರ ಮಾಡುವುದಕ್ಕಾಗಿ. ಪುರಾಣಗಳಲ್ಲಿ, ದೇವಿ ಮಹಾತ್ಮೆಯಲ್ಲಿ ಮಹಿಷಾಸುರನ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ. ಮಹಿಷಾಸುರನೆಂದರೆ ಅವನು ದುರಹಂಕಾರಿ, ಕ್ರೂರಿ, ಅನ್ಯಾಯ ಹಾಗೂ ಅಪರಾಧಗಳ ಸಾಹುಕಾರನಾಗಿದ್ದವನು. ಮಹಿಷಾಸುರನು ಬ್ರಹ್ಮನಿಂದ ತಾನು ದೇವರಿಂದಾಗಲಿ ಅಥವಾ ಮನುಷ್ಯನಿಂದಾಗಲಿ ಮರಣ ಹೊಂದಬಾರದು ಎನ್ನುವ ವರವನ್ನು ಪಡೆದುಕೊಂಡಿದ್ದನು. ಮಹಿಷಾಸುರನು ಮಹಿಳೆಯರನ್ನು ಕೇವಲವಾಗಿ ನೋಡುತ್ತಿದ್ದನು. ದೇವತೆಗಳಿಂದ ನನ್ನನ್ನು ಏನು ಮಾಡಲು ಸಾಧ್ಯವಿಲ್ಲವೆಂಬುದು ಅವನ ತಲೆಯಲ್ಲಿದ್ದ ಕಾರಣ ಅವನು ವರವನ್ನು ಬೇಡಿಕೊಳ್ಳುವಾಗ ದೇವತೆಗಳನ್ನು ಸೇರಿಸಿಕೊಳ್ಳುವುದಿಲ್ಲ. ಮಹಿಷಾಸುರ ಯಾರು.? ಅವನನ್ನು ದುರ್ಗಾ ದೇವಿ ಹೇಗೆ ಸಂಹಾರ ಮಾಡುತ್ತಾಳೆ ಎನ್ನುವ ಕಥೆ ಇಲ್ಲಿದೆ.

 

ಮಹಿಷಾಸುರನ ಅಟ್ಟಹಾಸ ಸ್ವರ್ಗ, ನರಕ, ಭೂಮಿಯ ಮೇಲೆ ಹೆಚ್ಚಾದಾಗ ದೇವರುಗಳು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಈ ಮೂರು ತ್ರಿಮೂರ್ತಿಗಳ ಬಳಿ ರಕ್ಷಣೆಯನ್ನು ಕೇಳಿಕೊಂಡು ಬರುತ್ತಾರೆ. ಈ ಮೂರು ದೇವತೆಗಳ ಸಂಯೋಜಿತ ಶಕ್ತಿಯು ಸಂಪೂರ್ಣ ಸ್ತ್ರೀ ಶಕ್ತಿಯ ಸಾಕಾರವಾದ ದುರ್ಗಾ ದೇವಿಯು ಪ್ರಕಟಗೊಂಡಳು. ದುರ್ಗಾ ಮತ್ತು ಮಹಿಷಾಸುರ ನಡುವೆ ಒಂಬತ್ತು ದಿನಗಳ ಕಾಲ ಭೀಕರ ಯುದ್ಧ ನಡೆಯಿತು ಮತ್ತು ಹತ್ತನೇ ದಿನದಂದು ದುರ್ಗಾ ದೇವಿಯು ಮಹಿಷಾಸುರನನ್ನು ಸಂಹಾರ ಮಾಡುತ್ತಾಳೆ. ಅಂದಿನಿಂದ, ವಿಜಯದಶಮಿ ಹಬ್ಬವು ಅಧರ್ಮದ ಮೇಲೆ ಧರ್ಮದ ವಿಜಯದ ಸಂಕೇತವಾಗಿ ನವರಾತ್ರಿ ಹಬ್ಬದ 10ನೇ ದಿನದಂದು ಆಚರಿಸಲಾಗುತ್ತದೆ.

ಮಹಿಷಾಸುರ ಜನಿಸಿದ್ದು ಹೇಗೆ.?

ದೇವಿ ಭಾಗವತ ಪುರಾಣದಲ್ಲಿನ, ಮಾರ್ಕಂಡೇಯ ಪುರಾಣ ಮತ್ತು ದುರ್ಗಾ ಸಪ್ತಶತಿಗಳಲ್ಲಿನ ಉಲ್ಲೇಖಗಳು ಮಹಿಷಾಸುರ ಜನಿಸಿದ್ದು ಹೇಗೆ ಎಂಬುದನ್ನು ವಿವರಿಸುತ್ತದೆ. ಇವುಗಳಲ್ಲಿನ ಕಥೆಯ ಪ್ರಕಾರ, ರಾಕ್ಷಸ ರಂಭನು ಅಗ್ನಿದೇವನನ್ನು ಸಂತೋಷಪಡಿಸಿದನು ಮತ್ತು ಅಜೇಯ ಮಗನನ್ನು ಅಂದರೆ ಯಾರಿಂದಲೂ ಸೋಲಿಸಲು ಸಾಧ್ಯವಾಗದಂತಹ ಮಗನನ್ನು ಕರುಣಿಸುವಂತೆ ವರವನ್ನು ಪಡೆದನು. ನಂತರ, ಅವನು ಮಹಿಷಿಯೆಂಬ ರಾಕ್ಷಸಿಯ ಮೇಲೆ ಮೋಹಗೊಳ್ಳುತ್ತಾನೆ. ರಾಕ್ಷಸಿ ಮಹಿಷಿ ಮತ್ತು ರಾಕ್ಷಸ ರಂಭನ ನಡುವಿನ ಪ್ರೀತಿಯಿಂದಾಗಿ ಅರ್ಧ ಮನುಷ್ಯಾಕಾರದ ಹಾಗೂ ಇನ್ನರ್ಧ ಎಮ್ಮೆಯಾಕಾರದ ದೇಹವನ್ನು ಹೊಂದಿರುವ ಮಗನನ್ನು ಪಡೆದುಕೊಂಡನು. ಈ ಮಗನ ಹೆಸರೇ ಮಹಿಷಾಸುರ. ಮಹಿಷಾಸುರನು ತನ್ನ ಶಕ್ತಿ ಮತ್ತು ಭ್ರಮೆಗಳಾಗಿ ರೂಪಾಂತರಗೊಳ್ಳುವ ಸಾಮರ್ಥ್ಯದಿಂದಾಗಿ ಬಹಳ ಪ್ರಭಾವಶಾಲಿಯಾದನು. ಅವನು ರಾಕ್ಷಸರ ನಾಯಕತ್ವವನ್ನು ವಹಿಸಿಕೊಂಡನು ಮತ್ತು ರಕ್ತಬೀಜನಂತಹ ರಾಕ್ಷಸರ ಸಹಯೋಗದೊಂದಿಗೆ ದೇವರುಗಳನ್ನು ಸೋಲಿಸಿದನು. ಅದಕ್ಕಾಗಿಯೇ ಅವನನ್ನು ನಾಶಮಾಡಲು ದುರ್ಗಾ ದೇವಿಯು ಅವತರಿಸಬೇಕಾಯಿತು

ಪುರಾಣಗಳಲ್ಲಿ ದುರ್ಗಾ ದೇವಿಯು ಮಹಿಷಾಸುರನನ್ನು ಸಂಹಾರ ಮಾಡುವುದಕ್ಕಾಗಿ ಮಹಿಷಾಸುರ ಮರ್ದಿನಿ ರೂಪವನ್ನು ತೆಗೆದುಕೊಂಡಳು. ದುರ್ಗಾ ದೇವಿಯ ಈ ರೂಪವು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂದೇಶವನ್ನು ನಮಗೆ ನೀಡುತ್ತದೆ. ಮಹಿಷಾಸುರ ಮರ್ದಿನಿ ಎಂದರೆ, ಅಸುರ ಮಹಿಷಾಸುರನನ್ನು ಸಂಹರಿಸುವ ದೇವತೆಯೆಂದು ಪರಿಗಣಿಸಲಾಗುತ್ತದೆ. ದುರ್ಗಾ ದೇವಿಯ ಈ ರೂಪದ ಆಶೀರ್ವಾದವನ್ನು ಪಡೆದುಕೊಳ್ಳಲು ಬಯಸಿದರೆ ನೀವು ‘ಮಹಿಷಾಸುರ ಮರ್ದಿನಿ ಸ್ತೋತ್ರ’ವನ್ನು ಅಂದರೆ, ಆಯಿಗಿರಿ ನಂದಿನಿ ಸ್ತೋತ್ರವನ್ನು ಪಠಿಸಬೇಕು. ಮಹಿಷಾಸುರ ಎಂಬುವವನು ರಾಕ್ಷಸನಾಗಿದ್ದನು. ಅವನು ಅರ್ಧ ಮಾನವ ದೇಹವನ್ನು ಮತ್ತು ಇನ್ನರ್ಧ ಎಮ್ಮೆಯ ದೇಹವನ್ನು ಹೊಂದಿದ್ದನು. ಈತನನ್ನು ಸಂಹಾರ ಮಾಡುವುದಕ್ಕಾಗಿ ದುರ್ಗಾ ದೇವಿ ಮಹಿಷಾಸುರ ಮರ್ದಿನಿಯಾಗಿ ಅವತರಿಸಿದಳು. ಸತತ 9 ದಿನಗಳ ಕಾಲ ಮಹಿಷಾಸುರನೊಂದಿಗೆ ಘೋರ ಯುದ್ಧವನ್ನು ಮಾಡಿದ ನಂತರ 10ನೇ ದಿನದಂದು ದುರ್ಗಾ ದೇವಿ ಆತನನ್ನು ಸಂಹಾರ ಮಾಡುತ್ತಾಳೆ.

 

Kishor KV