ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ವಿನೂತನ ಅಭಿಯಾನ! – ಪ್ರಯಾಣಿಕರ ಜೀವ ರಕ್ಷಣೆಗೆ ಹೊಸ ಪ್ಲ್ಯಾನ್!

ನಮ್ಮ ಮೆಟ್ರೋ ಸಿಲಿಕಾನ್ ಸಿಟಿ ಮಂದಿಯ ಸಾರಿಗೆ ಜೀವನಾಡಿಯಾಗಿದೆ. ನಿತ್ಯ ಲಕ್ಷಾಂತರ ಮಂದಿ ನಮ್ಮ ಮೆಟ್ರೋದಲ್ಲೇ ಪ್ರಯಾಣಿಸುತ್ತಿದ್ದಾರೆ. ಆದ್ರೆ ಇತ್ತೀಚೆಗೆ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನ ತಪ್ಪಿಸಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬಿಎಂಆರ್ಸಿಎಲ್ ವಿನೂತನ ಅಭಿಯಾನ ಆರಂಭಿಸಿದೆ.
ಇದನ್ನೂ ಓದಿ: ಮೊಟ್ಟೆ ಸೇವಿಸಿದ ನಂತರ ಈ ಆಹಾರಗಳನ್ನು ಸೇವಿಸ್ತೀರಾ? – ಹಾಗಾದ್ರೆ ಈ ವಿಚಾರ ತಿಳಿದುಕೊಳ್ಳಿ!
ನಮ್ಮ ಮೆಟ್ರೋದಲ್ಲಿ ಒಂದ್ಕಡೆ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮತ್ತೊಂದ್ಕಡೆ ಆತ್ಮಹತ್ಯೆಗೆ ಯತ್ನಿಸುತ್ತಿರುವ ಘಟನೆಗಳು ಕೂಡ ಬೆಳಕಿಗೆ ಬರುತ್ತಿದೆ. ಬೆಂಗಳೂರಲ್ಲಿ 2024 ರಿಂದ ಇಲ್ಲಿವರೆಗೆ ಒಟ್ಟು 9 ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ಸುಮಾರು 5 ಜನ ಮೃತಪಟ್ಟದ್ದರೆ, ಉಳಿದ ಪ್ರಕರಣಗಳಲ್ಲಿ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂಥಹ ಘಟನೆಗಳಿಂದ ನಮ್ಮ ಮೆಟ್ರೋ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಸಿಬ್ಬಂದಿಯನ್ನ ನೇಮಕ ಮಾಡಲಾಗುತ್ತಿದೆ. ಇದರ ಜೊತೆಗೆ ಕೆಲ ನಿಲ್ದಾಣದಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ.
ಮೆಟ್ರೋ ನಿಲ್ದಾಣಗಳಲ್ಲಿ ಜನರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಬ್ರೇಕ್ ಹಾಕಲು ಸಿಬ್ಬಂದಿ ಅಣಿ ಆಗಿದ್ದಾರೆ. ಮೆಟ್ರೋ ನಿಲ್ದಾಣಗಳನ್ನು ಸುರಕ್ಷಿತವಾಗಿಸಲು ಮುಂದಾದ ಬಿಎಂಆರ್ಸಿಎಲ್, ಜನರ ಮನಸ್ಥಿತಿ ಬದಲಾಯಿಸಲು ನಿಮ್ಹಾನ್ಸ್ ಸಂಸ್ಥೆಯೊಂದಿಗೆ ಕೈಜೋಡಿಸಿದೆ. ಆ ಮೂಲಕ ಬಿಎಂಆರ್ಸಿಎಲ್ ವಿಶೇಷ ಜಾಗೃತಿ ಅಭಿಯಾನವನ್ನು ಆರಂಭಿಸಿದೆ. ಈಗ ನಮ್ಮ ಮೆಟ್ರೋ ಈ ರೀತಿ ಪ್ರಾಣ ಕಳೆದುಕೊಳ್ಳೋರಿಗೆ ಬದುಕಿನ ಬಗ್ಗೆ ಜಾಗೃತಿ ಮೂಡಿಸಲು ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ವಿಶೇಷ ಡಿಜಿಟಲ್ ಡಿಸ್ಪ್ಲೇ ಮತ್ತು ಸೈನ್ ಬೋರ್ಡ್ಗಳನ್ನು ಅಳವಡಿಸಿದೆ. ಬದುಕಿನ ಮೌಲ್ಯದ ಜೊತೆಗೆ ಸಾವಿನಿಂದ ದೂರ ಇರುವಂತೆ ಕರೆ ನೀಡುತ್ತಿದೆ.
ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ನಮ್ಮ ಮೆಟ್ರೋದಿಂದ ಜಾಗೃತಿ ಮೂಡಿಸುತ್ತಿದ್ದು, ಯೋಚನೆ ಬೇಡ, ಚಿಂತೆ ಬಿಡಿ, ಮಾತ್ನಾಡಿ ದಣಿವಾಗೋದು ಸಹಜ, ಸಹಾಯ ಕೇಳೋದು ಸಹಜ ಎಂದು ಬೋರ್ಡ್ ಹಾಕಿದ್ದಾರೆ. ನಿಮ್ಹಾನ್ಸ್ ಜೊತೆ ಸೇರಿ ಆತ್ಮಹತ್ಯೆಯ ಬಗ್ಗೆ ಜಾಗೃತಿ ಮೂಡಿಸೋ ಕಾರ್ಯ ಮಾಡ್ತಿದ್ದು, ಡಿಸ್ಪ್ಲೇ ಬೋರ್ಡ್ನಲ್ಲಿ ಸಹಾಯವಾಣಿ ನಂಬರ್ ಹಾಕಿದ್ದಾರೆ. ಯಾವುದೇ ವ್ಯಕ್ತಿ ಮಾನಸಿಕ ಒತ್ತಡದಲ್ಲಿದ್ದರೆ ಅಥವಾ ದುಡುಕಿನ ನಿರ್ಧಾರ ತೆಗೆದುಕೊಳ್ಳುವ ಆಲೋಚನೆ ಬರುತ್ತಿದ್ದರೆ, ತಕ್ಷಣವೇ ಈ ಸಂಖ್ಯೆಗಳಿಗೆ ಕರೆ ಮಾಡಿ ತಜ್ಞರಿಂದ ಉಚಿತ ಆಪ್ತ ಸಮಾಲೋಚನೆ ಹಾಗೂ ಸಹಾಯ ಪಡೆಯುವಂತೆ ಮನವಿ ಮಾಡಲಾಗುತ್ತಿದೆ.

ನೋಡಿರಿ

