ನಮ್ಮ ಮೆಟ್ರೋ 118 ಕಿಮೀ ವಿಸ್ತರಣೆ ಚಿಂತನೆ – ಬಿಡ್ ಸಲ್ಲಿಕೆಗೆ ಮಾರ್ಚ್ 26 ಕೊನೆ ದಿನ

ನಮ್ಮ ಮೆಟ್ರೋ 118 ಕಿಮೀ ವಿಸ್ತರಣೆ ಚಿಂತನೆ – ಬಿಡ್ ಸಲ್ಲಿಕೆಗೆ ಮಾರ್ಚ್ 26 ಕೊನೆ ದಿನ

ಟ್ರಾಫಿಕ್ ಸಮಸ್ಯೆಯಿಂದ ಬಳಲುತ್ತಿರುವ ಬೆಂಗಳೂರಿನ ನಮ್ಮ ಮೆಟ್ರೋವನ್ನೇ ಅವಲಂಭಿಸುತ್ತಿದ್ದಾರೆ. ನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮೆಟ್ರೋ ವಿಸ್ತರಣೆ ಮಾಡುತ್ತಲೇ ಇದೆ. ನಮ್ಮ ಮೆಟ್ರೋ 3ನೇ ಹಂತದ ಯೋಜನೆ ಅನುಮೋದನೆಗೆ ಕೇಂದ್ರದ ಅಂತಿಮ ಮುದ್ರೆ ಬೀಳುವ ಮುನ್ನವೇ ಬೆಂಗಳೂರು ಮೆಟ್ರೋ ರೈಲು ನಿಗಮ ಇನ್ನೊಂದು ಹೆಜ್ಜೆ ಇಟ್ಟಿದೆ.  ಬಿಡದಿವರೆಗೆ 118 ಕಿ.ಮೀ. ಉದ್ದದ ಮೆಟ್ರೋ ವಿಸ್ತರಣೆಯ ಕಾರ್ಯಸಾಧ್ಯತಾ ವರದಿ ಪಡೆಯಲು ಮುಂದಾಗಿದೆ.

ಇದನ್ನೂ ಓದಿ: ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯರಿಗೆ ಬಿಡುಗಡೆ ಭಾಗ್ಯ – ವಿದೇಶಾಂಗ ವ್ಯವಹಾರ ಸಚಿವಾಲಯ ಮಾಹಿತಿ

ಹೌದು, ಸಿಟಿಯಲ್ಲಿ ಮಾತ್ರವಲ್ಲದೇ ನಗರದ ಹೊರವಲಯದಲ್ಲೂ ಮೆಟ್ರೋ ವಿಸ್ತರಿಸಲು ಮುಂದಾಗಿದೆ. ಮೆಟ್ರೋ ರೈಲು ಮಾರ್ಗ ವಿಸ್ತರಣೆ ಸಂಬಂಧ ಎರಡು ಪ್ಯಾಕೇಜ್‌ ವಿಂಗಡಿಸಲಾಗಿದೆ. ಒಂದನೇ ಹಂತದ ಪ್ಯಾಕೇಜ್‌ನಲ್ಲಿ 50 ಕಿ.ಮೀ. ಉದ್ದದ ಮೂರು ಕಾರಿಡಾರ್‌ ಅಂದರೆ, ಮೈಸೂರು ರಸ್ತೆಯ ಚಲ್ಲಘಟ್ಟದಿಂದ ಬಿಡದಿ, ಕನಕಪುರ ರಸ್ತೆಯ ರೇಷ್ಮೆ ಸಂಸ್ಥೆಯಿಂದ ಹಾರೋಹಳ್ಳಿ ಮತ್ತು ಬೊಮ್ಮಸಂದ್ರದಿಂದ ಅತ್ತಿಬೆಲೆಗೆ ಮೆಟ್ರೋ ರೈಲು ಸೇವೆ ಕಲ್ಪಿಸಲು ಉದ್ದೇಶಿಸಲಾಗಿದೆ.

ಎರಡನೇ ಹಂತದ ಪ್ಯಾಕೇಜ್‌ನಲ್ಲಿ 68 ಕಿ.ಮೀ. ಮಾರ್ಗ ಒಳಗೊಂಡಿದ್ದು, ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ಜಿಗಣಿ, ಆನೇಕಲ್‌, ಅತ್ತಿಬೆಲೆ, ಸರ್ಜಾಪುರ, ವರ್ತೂರು ಮತ್ತು ಕಾಡುಗೋಡಿ ವೃಕ್ಷ ಉದ್ಯಾನದವರೆಗೆ ಮೆಟ್ರೋ ಮಾರ್ಗ ನಿರ್ಮಿಸಲು ಚಿಂತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯ ಸಾಧ್ಯತಾ ವರದಿ ತಯಾರಿಸಲಾಗುತ್ತಿದೆ. ಈ ಸಂಬಂಧ ಅಧ್ಯಯನ ವರದಿ ಸಿದ್ಧಪಡಿಸಿ ಕೊಡಲು ಬಿಎಂಆರ್‌ಸಿಎಲ್‌ ಟೆಂಡರ್‌ ಆಹ್ವಾನಿಸಿದೆ. ಮಾರ್ಚ್‌ 26 ಬಿಡ್‌ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಬಹುತೇಕ ಜುಲೈನಲ್ಲಿ ಈ ಅಧ್ಯಯನದ ಟೆಂಡರ್ ಆಗಲಿದ್ದು, ಗುತ್ತಿಗೆ ಪಡೆಯುವ ಸಂಸ್ಥೆ ಆರು ತಿಂಗಳಲ್ಲಿ ವರದಿಯನ್ನು ನೀಡಬೇಕಿದೆ.

ಕಾರ್ಯಸಾಧ್ಯತಾ ವರದಿಯಲ್ಲಿ ಮೆಟ್ರೋ ಮಾರ್ಗ ನಿರ್ಮಾಣದ ಅಂದಾಜು ವೆಚ್ಚ, ಸಂಚಾರ ಸರ್ವೆ, ಮೆಟ್ರೋ ಮಾರ್ಗದ ಅಲೈನ್‌ಮೆಂಟ್‌, ಭೂಸ್ವಾಧೀನ, ತೊಡಕುಗಳ ಬಗ್ಗೆ ಅಧ್ಯಯನ ಮಾಡಿ ವರದಿ ನೀಡುವಂತೆ ತಿಳಿಸಲಾಗಿದೆ. ಇದು ಯೋಜನೆಯ ಮೊದಲ ಹಂತವಾಗಿದ್ದು, ಇದಾದ ಬಳಿಕ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ರೂಪಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

Shwetha M