ಅಯೋಧ್ಯೆ ರಾಮಮಂದಿರದ ಮೆರುಗು ಹೆಚ್ಚಿಸಲು ನಿಡ್ಡೋಡಿಯ ನಾಗಲಿಂಗ ಪುಷ್ಪ ಗಿಡಗಳ ರವಾನೆ!

ಅಯೋಧ್ಯೆ ರಾಮಮಂದಿರದ ಮೆರುಗು ಹೆಚ್ಚಿಸಲು ನಿಡ್ಡೋಡಿಯ ನಾಗಲಿಂಗ ಪುಷ್ಪ ಗಿಡಗಳ ರವಾನೆ!

ಹಿಂದೂಗಳ ಬಹು ವರ್ಷಗಳ ಕನಸಾದ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ 2024 ರ ಜನವರಿ 21, 22 ಮತ್ತು 23 ರಂದು ರಾಮ ಲಾಲಾ ವಿಗ್ರಹದ ಜೀವನ ಪ್ರತಿಷ್ಠಾಪನೆಗೆ ದಿನಾಂಕವನ್ನು ನಿಗದಿಪಡಿಸಿದೆ. ಇದೀಗ ಭವ್ಯ ರಾಮಮಂದಿರದ ಮೆರುಗು ಹೆಚ್ಚಿಸಲು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ನಿಡ್ಡೋಡಿ ಎಂಬಲ್ಲಿನ ನಾಗ ಲಿಂಗ ಗಿಡಗಳನ್ನು ಕಳುಹಿಸಿಕೊಡಲಾಗಿದೆ ಎಂದು ವರದಿಯಾಗಿದೆ.

ನಿಡ್ಡೋಡಿಯ ವಿನೇಶ್‌ ಪೂಜಾರಿ ಎಂಬುವವರು ಅಭಿವೃದ್ಧಿ ಪಡಿಸಿದ ನಾಗ ಲಿಂಗ ಗಿಡಗಳನ್ನು ಅಯೋಧ್ಯೆಗೆ ಕೊರಿಯರ್‌ ಕಳುಹಿಸಿಕೊಡಲಾಗಿದೆ. ಗಿಡಗಳು ಅಯೋಧ್ಯೆ ರಾಮ ಮಂದಿರದ ಆಡಳಿತ ಮಂಡಳಿಗೆ ದೊರಕಿದ್ದು, ಅಧಿಕಾರಿಗಳಿಂದ ದೂರವಾಣಿ ಮೂಲಕ ಪ್ರಶಂಸೆ ಬಂದಿದೆ. ಜೊತೆಗೆ ನಾಗಲಿಂಗ ಗಿಡವನ್ನು ನೂತನ ರಾಮ ಮಂದಿರದ ಬದಿಯಲ್ಲಿ ನೆಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಾಂಕ ನಿಗದಿ – ಜನವರಿಯಲ್ಲೇ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠಾಪನೆ

ಕಿನ್ನಿಗೋಳಿ ಸಮೀಪದ ನಿಡ್ಡೋಡಿಯಲ್ಲಿ ವಿನೇಶ್‌ ಪೂಜಾರಿ ವೃಕ್ಷ ಪ್ರೇಮಿ. ವಿವಿಧ ರೀತಿಯ ಗಿಡಗಳ ಬೀಜಗಳು ಹಾಗೂ ಗಿಡಗಳನ್ನು ತಂದು ತಮ್ಮ ಜಾಗದಲ್ಲಿ ಪೋಷಿಸಿ ಅವಶ್ಯಕತೆಯಿರುವವರಿಗೆ ನೀಡುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಅವಿಭಜಿತ ದ.ಕ. ಜಿಲ್ಲೆಯ ಹಲವಾರು ದೇವಸ್ಥಾನಗಳ ವಠಾರದಲ್ಲಿ ಗಿಡಗಳನ್ನು ನೆಡುವ ಕಾರ್ಯ ಮಾಡುತ್ತಿದ್ದಾರೆ.

ಹಲವಾರು ಜಾತಿಯ ಗಿಡಗಳು ಅವರಲ್ಲಿದ್ದು ದಕ್ಷಿಣ ಅಮೇರಿಕಾದಲ್ಲಿ ಬೆಳೆಯುವಂತಹ ನಾಗಲಿಂಗ ವೃಕ್ಷದ ಬೀಜವನ್ನು ಮಂಗಳೂರಿನಿಂದ ತಂದು ಅವರು ಗಿಡಗಳನ್ನು ಅಭಿವೃದ್ಧಿ ಪಡಿಸಿದ್ದರು. ನಾಗಲಿಂಗ ವೃಕ್ಷವು ನಾಗಲಿಂಗದ ರೀತಿಯ ಹೂವು ಬಿಡುವ ದೊಡ್ಡ ವೃಕ್ಷವಾಗಿದ್ದು ಅಯೋಧ್ಯೆಯಲ್ಲಿ ನೆಡಬೇಕೆಂಬ ಆಶಯವನ್ನು ಅವರು ಹೊಂದಿದ್ದರು. ಈ ಬಗ್ಗೆ ಅಂತರ್ಜಾಲ ಸಹಾಯದಿಂದ ಅಯೋಧ್ಯ ದೇವಸ್ಥಾನ ಆಡಳಿತ ಮಂಡಳಿಯನ್ನು ಅವರು ಸಂಪರ್ಕಿಸಿದಾಗ, ಅಯೋಧ್ಯೆಯಿಂದ ಗಿಡಗಳನ್ನು ಕಳುಹಿಸಲು ಸೂಚನೆ ಬಂದಿತ್ತು. ಅದರಂತೆ ಸೆ. 5 ರಂದು 5 ಗಿಡಗಳನ್ನು ಕೊರಿಯರ್‌ ಮೂಲಕ ಕಳುಹಿಸಿದ್ದರು.

Shwetha M