14 ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಿದ ಬಲರಾಮ ಇನ್ನಿಲ್ಲ – ಅಚ್ಚು ಮೆಚ್ಚಿನ ಗಜರಾಜನಿಗೆ ಅಂತಿಮ ವಿದಾಯ

14 ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಿದ ಬಲರಾಮ ಇನ್ನಿಲ್ಲ – ಅಚ್ಚು ಮೆಚ್ಚಿನ ಗಜರಾಜನಿಗೆ ಅಂತಿಮ ವಿದಾಯ

ದಸರಾ ಜಂಬೂಸವಾರಿಯ ಮಾಜಿ ಕ್ಯಾಪ್ಟನ್, 14 ಬಾರಿ ಚಿನ್ನದ ಅಂಬಾರಿ ಹೊತ್ತು ರಾಜಬೀದಿಯಲ್ಲಿ ಗಾಂಭೀರ್ಯವಾಗಿ ಸಾಗುತ್ತಿದ್ದ ಸೌಮ್ಯ ಸ್ವಭಾವದ ಬಲರಾಮ ಇನ್ನಿಲ್ಲ. 67 ವರ್ಷದ ಬಲರಾಮ, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಇಹಲೋಕ ತ್ಯಜಿಸಿದ್ದಾನೆ. ಬಲರಾಮಯನ ಬಾಯಲ್ಲಿ ಹುಣ್ಣಾಗಿತ್ತು. ಕಳೆದ ಹತ್ತು ದಿನಗಳಿಂದ ನೋವಿನಿಂದ ಬಳಲುತ್ತಿದ್ದ ಬಲರಾಮನಿಗೆ ಆಹಾರ ಸೇವನೆ ಕಷ್ಟವಾಗುತ್ತಿತ್ತು. ಬಲರಾಮನನ್ನು ಉಳಿಸಿಕೊಳ್ಳಲು ನಾಗರಹೊಳೆ ಉದ್ಯಾನದ ಹುಣಸೂರು ರೇಂಜ್‌ನ ಭೀಮನಕಟ್ಟೆ ಆನೆ ಶಿಬಿರದಲ್ಲಿ ಸಾಕಷ್ಟು ಪ್ರಯತ್ನ ನಡೆಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಭಾನುವಾರ ಕೊನೆಯುಸಿರೆಳೆದಿದ್ದಾನೆ.

ಇದನ್ನೂ ಓದಿ:  ತಾಯಿಯ ಗರ್ಭದಲ್ಲೇ ಮಗುವಿಗೆ ಮೊಟ್ಟ ಮೊದಲ ಮೆದುಳಿನ ಶಸ್ತ್ರ ಚಿಕಿತ್ಸೆ – ವೇನ್ ಆಫ್ ಗ್ಯಾಲೆನ್ ಮಾಲ್ಫಾರ್ಮೇಷನ್ ಎಂದರೇನು?

ವಿಶ್ವ ಪ್ರಸಿದ್ಧ ಮೈಸೂರು ದಸರಾ ಮೆರವಣಿಗೆಯ ಪ್ರಮುಖ ಆನೆಗಳಲ್ಲಿ ಬಲರಾಮನೂ ಒಬ್ಬನಾಗಿದ್ದ. ಬಲರಾಮನನ್ನು 1987ರಲ್ಲಿ ಕರ್ನಾಟಕದ ಕೊಡಗು ಪ್ರದೇಶದ ಸೋಮವಾರಪೇಟೆ ಬಳಿಯ ಕಟ್ಟೆಪುರ ಅರಣ್ಯದಲ್ಲಿ ಸೆರೆಹಿಡಿಯಲಾಗಿತ್ತು. ನಂತರ ಈತನನ್ನು ತರಬೇತಿ ಮೂಲಕ ಪಳಗಿಸಲಾಗಿತ್ತು. ದ್ರೋಣನ ನಂತರ ಅಂಬಾರಿಯನ್ನು ಹೊರಲು ಬಲರಾಮ ಆಯ್ಕೆಯಾದನು. ಆದರೆ ಅಂಬಾರಿ ಹೊರಲು ಬಲರಾಮ ಮೊದಲ ಆಯ್ಕೆಯಾಗಿರಲಿಲ್ಲ. 5,600 ಕಿಲೋ ತೂಕ ಇರುವ ಆನೆ ಅರ್ಜುನ, ಆಕಸ್ಮಿಕವಾಗಿ ಮಾವುತನನ್ನು ಕೊಂದಿದ್ದಕ್ಕಾಗಿ ಅಂಬಾರಿ ಹೊರುವ ಅವಕಾಶದಿಂದ ವಂಚಿತನಾಗಿದ್ದನು. ಹೀಗಾಗಿ ಬಲರಾಮನನ್ನು ಆಯ್ಕೆ ಮಾಡಲಾಯಿತು. ಅದರಂತೆ 1999 ಮತ್ತು 2011 ರ ನಡುವೆ ಒಟ್ಟು 14 ಬಾರಿ ಚಾಮುಂಡೇಶ್ವರಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ಸಾಗಿದ್ದನು. ಬಲರಾಮನನ್ನು ಬದಲಿಸುವ ಮುನ್ನವೇ ಆತ ತನ್ನ ತೂಕವನ್ನು ಕಳೆದುಕೊಂಡಿದ್ದನು. ಹೀಗಾಗಿ ಆತನಿಗೆ ವಿಶ್ರಾಂತಿಯನ್ನು ನೀಡಲಾಗಿತ್ತು. ಪರಿಣಾಮ ಬಲರಾಮನ ನಂತರ ಅಂಬಾರಿ ಹೊರಲು ಅರ್ಜುನ ಆಯ್ಕೆಯಾದನು. ಆದರೂ ಬಲರಾಮ ಮೆರವಣಿಗೆಯಲ್ಲಿ ನಿಶಾನೆ ಆನೆಯಾಗಿ ಮೆರವಣಿಗೆಯನ್ನು ಮುನ್ನಡೆಸುತ್ತಿದ್ದನು. ಮಾವುತನ ಸೂಚನೆಯನ್ನು ಚಾಚು ತಪ್ಪದೇ ಪಾಲಿಸುತ್ತಿದ್ದ ಬಲರಾಮನಿಗೆ ಮಾವುತನೇ ಎಲ್ಲವೂ ಆಗಿದ್ದನು. ಮಾವುತನನ್ನು ಹೊರತುಪಡಿಸಿ ಬೇರೆ ಯಾರೇ ಆಹಾರ ನೀಡಿದರೂ ಸೇವಿಸುತ್ತಿರಲಿಲ್ಲ. ತನ್ನ ಭವ್ಯವಾದ ನೋಟ ಮತ್ತು ಅವನ ಶಾಂತ ಸ್ವಭಾವದಿಂದಲೇ ಜನರ ಹೃದಯವನ್ನು ಗೆದ್ದಿದ್ದನು. ಈತ 2.7 ಮೀಟರ್ ಎತ್ತರ, ಸುಮಾರು 4590 ಕಿಲೋಗ್ರಾಂಗಳಷ್ಟು ಭಾರ ಇದ್ದನು. ಎಲ್ಲರ ನೆಚ್ಚಿನ ಬಲರಾಮ ಇನ್ನು ನೆನಪು ಮಾತ್ರ..

suddiyaana