ಚಿನ್ನಯ್ಯನ ಪಾಳ್ಯದಲ್ಲಿ ನಿಗೂಢ ಸ್ಫೋಟ – ಸಿಎಂ ಸಿದ್ದರಾಮಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ

ವಿಲ್ಸನ್ ಗಾರ್ಡ್ನ ಚಿನ್ನಯ್ಯನ ಪಾಳ್ಯದಲ್ಲಿ ನಿಗೂಢ ಸ್ಫೋಟ ಸಂಭವಿಸಿದ್ದು, ಸಿಎಂ ಸಿದ್ದರಾಮಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಫೋಟಕ್ಕೆ ಕಾರಣಗಳು ಇನ್ನೂ ತಿಳಿದು ಬಂದಿಲ್ಲ. ಬೆಂಗಳೂರು ನಗರ ಆಯುಕ್ತ ಸೀಮಂತ್ ಕುಮಾರ್ ಅವರೂ ಭೇಟಿ ನೀಡಿ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಸ್ಫೋಟಗೊಂಡ ಸ್ಥಳದಲ್ಲಿ ಸುಮಾರು 6 ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು ಓರ್ವ 8 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಸುಮಾರು 12 ಕ್ಕೂ ಅಧಿಕ ಜನರಿಗೆ ಗಾಯವಾಗಿದ್ದು, 7 ಜನರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟದ ತೀವ್ರತೆಗೆ ಮೊದಲನೇ ಮಹಡಿಯ ಮನೆ ಗೋಡೆ ಛಾವಣಿ ಕುಸಿದು ಬಿದ್ದಿದೆ. ಕಸ್ತೂರಮ್ಮ(35), ಸರಸಮ್ಮ(50), ಶಬೀರನಾ ಬಾನು(35), ಸುಬ್ರಮಣಿ(62), ಶೇಖ್ ನಜೀದ್ ಉಲ್ಲಾ(37), 8 ವರ್ಷದ ಬಾಲಕಿ ಫಾತಿಮಾ ಸೇರಿ ಹಲವರಿಗೆ ಗಂಭೀರ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿರುವ ಆಡುಗೋಡಿ ಠಾಣೆ ಪೊಲೀಸರು ಮೇಲ್ನೋಟಕ್ಕೆ ಸಿಲಿಂಡರ್ ಸ್ಟೋಟ ಸಂಭವಿಸಿರಬಹುದು ಎಂದು ಹೇಳಿದ್ದರು. ಆದರೆ ಸ್ಫೋಟದ ತೀವ್ರತೆ ನೋಡಿದರೆ ಕಾರಣ ಬೇರೆ ಇರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಏಳು-ಎಂಟು ಗಂಟೆಗೆ ಸ್ಫೋಟ ಸಂಭವಿಸಿತು. ಏನಾಗಿದೆ ಅಂತಾನೆ ಗೊತ್ತಿಲ್ಲ. ದೊಡ್ಡ ಶಬ್ಧ ಬಂದಿತು. ಸಿಲಿಂಡರ್ ಸ್ಫೋಟ ಆಗಿದ್ದರೆ ಬೆಂಕಿ ಬರಬೇಕಿತ್ತು. ಬೆಂಕಿ ಬಂದಿಲ್ಲ ಏಕಾಏಕಿ ಅವಘಡ ಸಂಭವಿಸಿದೆ. ಕರೆಂಟ್ ಶಾಕ್ನಿಂದ ಹೀಗೆ ಆಗಿದ್ಯಾ ಅಥವಾ ಮೆಟ್ರೋ ಕಾಮಗಾರಿ ಇಲ್ಲಿ ನಡೆಯುತ್ತಿದೆ ಅದರಿಂದ ತೊಂದರೆಯಾಗಿದ್ಯಾ ಗೊತ್ತಾಗಿಲ್ಲ ಎಂದು ಜನರು ಅನುಮಾನ ವ್ಯಕ್ತಪಡಿಸಿದ್ದಾರೆ. ನಗರದ ಅನೇಕ ಜನರು ಲಾಲ್ ಬಾಗ್ನಲ್ಲಿ ಕೆಲಸ ಮಾಡುತ್ತಾರೆ. ಒಂದು ವೇಳೆ ಇಂದು ಕೆಲಸಕ್ಕೆ ಹೋಗದೆ ಇದ್ದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಡಿಆರ್ಎಫ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸ್ಥಳೀಯರ ಪ್ರಕಾರ, ಬಲವಾದ ಶಬ್ದ ಕೇಳಿ ಬಂದಿದ್ದು, ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ನಮಗೆ ಏನಾಗಿದೆ ಎನ್ನುವುದೇ ಮೊದಲು ತಿಳಿದಿರಲಿಲ್ಲ, ಏಕಾಏಕಿ ಭಾರೀ ಪ್ರಮಾಣದ ಶಬ್ದ ಕೇಳಿ ಬಂತು. ಭೂಕಂಪವಾದರೂ ಆಗಿರಬಹುದು ಎಂದು ಕೂಡಲೇ ಮನೆಯಿಂದ ಹೊರಗೆ ಓಡಿ ಬಂದೆವು ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.

ನೋಡಿರಿ

