MI ಚಾಯ್ಸ್ ರೋಹಿತ್ Or ಪಾಂಡ್ಯ? – ಸೂರ್ಯ Vs ಹಾರ್ದಿಕ್ EGO ಫೈಟ್
ಅಂಬಾನಿ ಬ್ರಿಗೇಡ್ ಗೆ ಕ್ಯಾಪ್ಟನ್ಸಿ ಕಂಟಕ

MI ಚಾಯ್ಸ್ ರೋಹಿತ್ Or ಪಾಂಡ್ಯ? – ಸೂರ್ಯ Vs ಹಾರ್ದಿಕ್ EGO ಫೈಟ್ಅಂಬಾನಿ ಬ್ರಿಗೇಡ್ ಗೆ ಕ್ಯಾಪ್ಟನ್ಸಿ ಕಂಟಕ

2025ರ ಐಪಿಎಲ್​ಗೆ ಆಕ್ಷನ್ ರೂಲ್ಸ್ ರಿಲೀಸ್ ಆಗಿದ್ದೇ ಆಗಿದ್ದು. ಎಲ್ಲಾ ಫ್ರಾಂಚೈಸಿಗಳಲ್ಲೂ ಲೆಕ್ಕಾಚಾರಗಳು ಜೋರಾಗಿವೆ. ರೀಟೇನ್ ಮಾಡಿಕೊಳ್ಳಬೇಕಾದ ಆಟಗಾರರು ಹಾಗೇ ಹರಾಜಿಗೆ ಬಿಡುವ ಆಟಗಾರರ ಬಗ್ಗೆ ಲಿಸ್ಟ್ ಕೂಡ ರೆಡಿ ಮಾಡಿದ್ದಾರೆ. ಬಟ್ ಎಲ್ಲಾ ಫ್ರಾಂಚೈಸಿಗಳಿಗಿಂತ ಮುಂಬೈ ಇಂಡಿಯನ್ಸ್ ಮಾಲೀಕರಿಗೆ ಸಾಕಷ್ಟು ಕನ್ಫ್ಯೂಷನ್ಸ್ ಇದೆ. ಯಾಕಂದ್ರೆ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಕ್ಯಾಪ್ಟನ್ಸಿ ಟಾಸ್ಕ್ ಕೂಡ ಇದೆ. ತಂಡಕ್ಕೆ ಐದೈದು ಟ್ರೋಫಿ ಗೆದ್ದು ಕೊಟ್ಟ ಯಶಸ್ವೀ ನಾಯಕನಿಗೆ ಮತ್ತೆ ಪಟ್ಟ ಕಟ್ಟಬೇಕಾ ಅಥವಾ ಕೊಟ್ಟ ಮಾತು ಉಳಿಸಿಕೊಳ್ಬೇಕಾ ಅನ್ನೋದು. ಅಷ್ಟಕ್ಕೂ ಅಂಬಾನಿ ಬ್ರಿಗೇಡ್​ನ ಫಸ್ಟ್ ಚಾಯ್ಸ್​ ಯಾರು? ನಾಯಕತ್ವ ಬದಲಾವಣೆ ಆಗುತ್ತಾ? ಯಾರನ್ನೆಲ್ಲಾ ಉಳಿಸಿಕೊಳ್ಬೋದು..? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ :  ದೊಡ್ಮನೆಯಲ್ಲಿ ಗುದ್ದಾಡಿಕೊಂಡ ಸ್ಪರ್ಧಿಗಳು!! – ಧನರಾಜ್ ಆಚಾರ್ ಡೈಲಾಗ್ ಗೆ ವೀಕ್ಷಕರು ಫಿದಾ

18ನೇ ಸೀಸನ್ ಐಪಿಎಲ್​ ಹಿಂದೆಂದಿಗಿಂತ್ಲೂ ಜಾಸ್ತಿನೇ ಕ್ಯೂರಿಯಾಸಿಟಿ ಹುಟ್ಟಿಸಿದೆ. ಹರಾಜು ನಿಮಯಗಳನ್ನ ಬಿಡುಗಡೆ ಮಾಡಿರೋ ಬಿಸಿಸಿಐ ಅಕ್ಟೋಬರ್ 31ರೊಳಗೆ ಫ್ರಾಂಚೈಸಿಗಳು ಉಳಿಸಿಕೊಳ್ಳುವ ಹಾಗೇ ರಿಲೀಸ್ ಮಾಡುವ ಆಟಗಾರರ ಪಟ್ಟಿಯನ್ನ ರಿಲೀಸ್ ಮಾಡುವಂತೆ ಸೂಚನೆ ನೀಡಿದೆ. ಸೋ ಆಯಾ ತಂಡಗಳ ಮಾಲೀಕರು ಕೂಡ ಈಗಾಗ್ಲೇ ಲಿಸ್ಟ್ ರೆಡಿ ಮಾಡಿದ್ದಾರೆ. ಬಟ್ ಮುಂಬೈ ಇಂಡಿಯನ್ಸ್ ಮಾಲೀಕರಿಗೆ ಮಾತ್ರ ಫೈನಲ್ ಆಗಿ ಯಾರನ್ನ ಉಳಿಸಿಕೊಳ್ಳೋದು, ಯಾರನ್ನ ರಿಲೀಸ್ ಮಾಡೋದು ಅನ್ನೋದೇ ತಲೆಬಿಸಿ ತಂದಿಟ್ಟಿದೆ. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್​ರಂಥ ಸೂಪರ್ ಸ್ಟಾರ್ ಇದ್ದಾರೆ. ಅದ್ರಲ್ಲೂ ಕ್ಯಾಪ್ಟನ್ಸಿ ವಿಚಾರ ಕಗ್ಗಂಟಾಗಿ ಪರಿಣಮಿಸಿದೆ.

5 ಬಾರಿ ಟ್ರೋಫಿ ಗೆದ್ದುಕೊಟ್ಟ ನಾಯಕನನ್ನು ಕಳ್ಕೊಳ್ತಾರಾ?

ಇದೇ ವರ್ಷದ ಕೊನೆಯಲ್ಲಿ ಅಥವಾ ಜನವರಿ ತಿಂಗಳಲ್ಲಿ ಮುಂದಿನ ಐಪಿಎಲ್​ಗೆ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಮೆಗಾ ಆಕ್ಷನ್​ನಲ್ಲಿ ಒಂದಷ್ಟು ಸ್ಟಾರ್ ಆಟಗಾರರು ಕೂಡ ಕಾಣಿಸಿಕೊಳ್ಳೋದು ಫಿಕ್ಸ್ ಆಗಿದೆ. ಅದ್ರಲ್ಲೂ ಮುಂಬೈ ಇಂಡಿಯನ್ಸ್ ತಂಡಕ್ಕೆ 5 ಬಾರಿ ಟ್ರೋಫಿ ಗೆದ್ದುಕೊಟ್ಟ ಶ್ರೇಷ್ಠ ನಾಯಕ ರೋಹಿತ್ ಶರ್ಮಾ ಕೂಡ ಮುಂಬೈ ತಂಡವನ್ನ ಬಿಡೋ ಚಿಂತನೆಯಲ್ಲಿದ್ದಾರೆ. ಈ ಬಗ್ಗೆ ಕೆಲವರ ಬಳಿ ಪ್ರಸ್ತಾಪ ಕೂಡ ಮಾಡಿದ್ದಾರೆ.  2024ರಲ್ಲಿ ರೋಹಿತ್ ಶರ್ಮಾರನ್ನ ನಾಯಕತ್ವದಿಂದ ದಿಢೀರ್ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಲಾಗಿತ್ತು. ಆದ್ರೆ ಪಾಂಡ್ಯ ಕ್ಯಾಪ್ಟನ್ಸಿಯಲ್ಲಿ ಮುಂಬೈ ತಂಡ ಆಡಿದ 14 ಪಂದ್ಯಗಳಲ್ಲಿ 10 ರಲ್ಲಿ ಸೋಲು ಕಂಡಿತು. ಇದಲ್ಲದೆ, ಕೆಟ್ಟ ದಾಖಲೆಗಳನ್ನು ಸಹ ಸೃಷ್ಟಿಸಿತು. ಹೀಗಾಗಿ ಮುಂದಿನ ಬಾರಿಗೆ ಒಂದಷ್ಟು ಬದಲಾವಣೆ ಮಾಡುವ ಚಿಂತನೆಯಲ್ಲಿದೆ.

ಹಾರ್ದಿಕ್ ಪಾಂಡ್ಯಗೆ ನಾಯಕತ್ವ ಮುಂದುವರಿಸಬೇಕಾ?

ಮುಂಬೈ ಫ್ರಾಂಚೈಸಿಯನ್ನ ಕಾಡ್ತಿರೋ ಮಿಲಿಯನ್ ಡಾಲರ್ ಪ್ರಶ್ನೆ ಇದು. ಕಳೆದ ಬಾರಿ ಪಾಂಡ್ಯಗೆ ಸಾರಥ್ಯ ನೀಡಿದ್ರೂ ಏನೂ ಯೂಸ್ ಆಗಿಲ್ಲ. ಅತ್ತ ರೋಹಿತ್ ಶರ್ಮಾ ತಮ್ಮ ನಾಯಕತ್ವದಲ್ಲಿ ಭಾರತವನ್ನ ವಿಶ್ವಚಾಂಪಿಯನ್ ಪಟ್ಟಕ್ಕೇರಿಸಿದ್ರು. ಮತ್ತೊಂದೆಡೆ ಸೂರ್ಯಕುಮಾರ್ ಯಾದವ್ ಟಿ-20 ತಂಡಕ್ಕೆ ನಾಯಕರಾಗಿದ್ದಾರೆ. ಹೀಗಾಗಿ ರೋಹಿತ್ ಮತ್ತು ಸೂರ್ಯ ಇಬ್ಬರೂ ಪಾಂಡ್ಯ ಕ್ಯಾಪ್ಟನ್ಸಿಯಡಿ ಆಡ್ತಾರಾ ಅನ್ನೋ ಪ್ರಶ್ನೆ ಇದೆ. ಹೀಗಿದ್ರೂ ಮುಂಬೈ ಫ್ರಾಂಚೈಸಿ ಉಳಿಸಿಕೊಳ್ಳೋ ಮೊದಲ ಆಟಗಾರ ಹಾರ್ದಿಕ್ ಪಾಂಡ್ಯರೇ ಆಗಿದ್ದಾರೆ. ಇದಕ್ಕೆ ಕಾರಣ ರೋಹಿತ್ ಶರ್ಮಾ. ಕಳೆದ ಬಾರಿ ಆಗಿರೋ ಅವಮಾನದಿಂದ ಬೇಸತ್ತಿರೋ ರೋಹಿತ್ ಶರ್ಮಾ ಮುಂಬೈ ಬಿಡೋ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ದೇ ಪಂಜಾಬ್, ಆರ್‌ಸಿಬಿ, ಲಖನೌ ತಂಡಗಳು ರೋಹಿತ್​ರನ್ನ ನಾಯಕರನ್ನಾಗಿ ಮಾಡಿಕೊಳ್ಳಲು ಆಸಕ್ತಿ ತೋರಿಸಿವೆ. ಹೀಗಾಗಿ ಮುಂಬೈ ಇಂಡಿಯನ್ಸ್ ಬಿಟ್ಟು ಬೇರೆ ತಂಡ ಸೇರೋ ನಿರೀಕ್ಷೆಯಲ್ಲಿದ್ದಾರೆ.

ರೋಹಿತ್ ಹೊರ ಬಂದ್ರೆ ಸೂರ್ಯ, ಬುಮ್ರಾ ಕೂಡ ಗುಡ್ ಬೈ?

ರೋಹಿತ್ ಶರ್ಮಾ ಲೆಜೆಂಡರಿ ಆಟಗಾರ. ಅವ್ರು ಹರಾಜಿಗೆ ಬಂದ್ರೆ ಪ್ರತಿಯೊಂದು ತಂಡವೂ ಖರೀದಿಗೆ ಪೈಪೋಟಿ ನಡೆಸುತ್ತಿದೆ. ಒಂದು ವೇಳೆ ರೋಹಿತ್ ಶರ್ಮಾ ಅವರನ್ನು ಉಳಿಸಿಕೊಳ್ಳದಿದ್ದರೆ, ಮುಂಬೈ ಇಂಡಿಯನ್ಸ್ ತಂಡದಲ್ಲಿ ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಅವರನ್ನು ಉಳಿಸಿಕೊಳ್ಳೋದು ಕಷ್ಟವಾಗುತ್ತೆ. ಯಾಕಂದ್ರೆ ಬುಮ್ರಾ ಮತ್ತು ಸೂರ್ಯನಿಗೂ ಹಾರ್ದಿಕ್ ಪಾಂಡ್ಯ ನಾಯಕತ್ವದಡಿ ಆಡೋದು ಇಷ್ಟ ಇಲ್ಲ. ಕಳೆದ ಬಾರಿಯ ಟೂರ್ನಿಯಲ್ಲೇ ಇದು ಸಾಬೀತಾಗಿತ್ತು.

ಸೂರ್ಯ ಮತ್ತು ಪಾಂಡ್ಯ ನಡುವೆ ಕ್ಯಾಪ್ಟನ್ ಪೈಪೋಟಿ!

ಟೀಮ್​ ಇಂಡಿಯಾದ ಟಿ20 ಕ್ಯಾಪ್ಟನ್ ಸೂರ್ಯಕುಮಾರ್​ ಯಾದವ್​, ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋದು ಸ್ಪಷ್ಟವಾಗ್ತಿದೆ. ಐಪಿಎಲ್​ನಿಂದ ಶುರುವಾಗಿ ಟೀಮ್​ ಇಂಡಿಯಾವರೆಗೆ ಹಲವು ವಿಚಾರಗಳಲ್ಲಿ ಇಬ್ಬರ ನಡುವೆ ಈಗೋ ಫೈಟ್​​ ಶುರುವಾಗಿದೆ. ಇದು ಡ್ರೆಸ್ಸಿಂಗ್​ರೂಮ್​ ಮೇಲೆ ನೇರವಾದ ಪರಿಣಾಮ ಬೀರೋ ಸಾಧ್ಯತೆ ಇದೆ. ಅಲ್ದೇ ಭಾರತ ತಂಡದ ಟಿ20 ನಾಯಕನಾಗಿರುವ ಸೂರ್ಯ, ಮುಂಬರುವ ಐಪಿಎಲ್​ಗೂ ಮುನ್ನ ಮುಂಬೈ ಇಂಡಿಯನ್ಸ್​ಗೆ ಗುಡ್​​ ಬೈ ಹೇಳಲು ಸಜ್ಜಾಗಿದ್ದಾರೆ. ಕೊಲ್ಕತ್ತಾ ನೈಟ್​ ರೈಡರ್ಸ್​ ಸೇರಿದಂತೆ ಹಲವು ಫ್ರಾಂಚೈಸಿಗಳು ಈಗಾಗಲೇ ಸೂರ್ಯನನ್ನ ಸಂಪರ್ಕಿಸಿವೆ. ಹರಾಜಿನಲ್ಲಿ ಸೂರ್ಯನ ಖರೀದಿ ಮಾಡೋ ಮಾತನ್ನೂ ನೀಡಿರೋ ವರದಿಯಾಗಿದೆ. ಅಂದ್ಹಾಗೆ ಸೂರ್ಯ ಮುಂಬೈಗೆ ಟಾಟಾ ಮಾಡಲು ಮೇನ್​ ರೀಸನ್​​ ಹಾರ್ದಿಕ್​ ಪಾಂಡ್ಯ. ಪಾಂಡ್ಯ ನಾಯಕತ್ವದಡಿ ಆಡಲು ಸೂರ್ಯನಿಗೆ ಇಷ್ಟವಿಲ್ಲ.

ರೋಹಿತ್ ಶರ್ಮಾ ಜೊತೆ ಉತ್ತಮ ಬಾಂಧವ್ಯ!

ಕಳೆದ ಸೀಸನ್​ ಐಪಿಎಲ್​ಗೂ ಮುನ್ನ ರೋಹಿತ್​ ಶರ್ಮಾನ ಕೆಳಗಿಳಿಸಿ, ಹಾರ್ದಿಕ್​ ಪಾಂಡ್ಯನ ಕರೆ ತಂದು ಮುಂಬೈ ಇಂಡಿಯನ್ಸ್​ ನಾಯಕನ ಪಟ್ಟ ಕಟ್ಟಿತ್ತು. ಆಗಲೇ ಸೂರ್ಯಕುಮಾರ್​​, ಹಾರ್ದಿಕ್​ರಿಂದ ಅಂತರ ಕಾಯ್ದುಕೊಂಡು ರೋಹಿತ್​ ಜೊತೆ ಗುರುತಿಸಿಕೊಂಡಿದ್ರು. ಇದೀಗ ಭಾರತ ಟಿ20 ತಂಡಕ್ಕೆ ಸೂರ್ಯನೇ ನಾಯಕನಾಗಿದ್ದಾರೆ. ಈ ಹಿಂದಿನಿಂದ ಹಾರ್ದಿಕ್​ ವಿಚಾರದಲ್ಲಿ ವೈಮನಸ್ಸು ಹೊಂದಿರೋ ಸೂರ್ಯನಿಗೆ ಭಾರತ ತಂಡದ ನಾಯಕತ್ವ ಸಿಕ್ಕಿದೆ. ಹೀಗಾಗಿ ಹಾರ್ದಿಕ್​ ನಾಯಕತ್ವದಡಿ ಆಡಲು ಹಿಂದೇಟು ಹಾಕ್ತಿದ್ದಾರೆ ಎನ್ನಲಾಗ್ತಿದೆ. ಕಳೆದ ಟಿ20 ವಿಶ್ವಕಪ್​​ಗೂ ಮುನ್ನ ಹಾರ್ದಿಕ್​ ಪಾಂಡ್ಯ ಭವಿಷ್ಯದ ಟೀಮ್​ ಇಂಡಿಯಾ ನಾಯಕ ಎಂದೇ ಬಿಂಬಿತವಾಗಿದ್ರು. ಅಧಿಕೃತವಾಗಿ ತಂಡದ ಉಪನಾಯಕನ ಹುದ್ದೆಯನ್ನೂ ಅಲಂಕರಿಸಿದ್ರು. ಟಿ20 ವಿಶ್ವಕಪ್​​ ಅಂತ್ಯದ ಬೆನ್ನಲ್ಲೇ ಬಿಸಿಸಿಐ ಹಾರ್ದಿಕ್​ಗೆ ಶಾಕ್​ ನೀಡಿತ್ತು. ರೋಹಿತ್​ ಶರ್ಮಾ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಸೂರ್ಯಕುಮಾರ್​​ನ ತಂದು ಕೂರಿಸಿದೆ. ಹಾರ್ದಿಕ್​ ಪಾಂಡ್ಯನ ಉಪನಾಯಕನ ಸ್ಥಾನದಿಂದಲೂ ಕೊಕ್ ನೀಡಲಾಗಿದೆ. ಇದೂ ಕೂಡ ಇಬ್ಬರ ನಡುವೆ ವೈಮನಸ್ಸು ಬೆಳೆಯಲು ಕಾರಣ ಎಂಬ ಸುದ್ದಿಯಿದೆ.

ಒಟ್ನಲ್ಲಿ ಹರಾಜು ವೇಳೆ 6 ಜನ್ರನ್ನ ಉಳಿಸಿಕೊಳ್ಳೋ ಅವಕಾಶ ಇರೋದ್ರಿಂದ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ಇಶಾನ್ ಕಿಶನ್ ಹಾಗೇ ಹಾರ್ದಿಕ್ ಪಾಂಡ್ಯ ಹೀಗೆ ಐವರನ್ನೂ ಉಳಿಸಿಕೊಳ್ಳೋಕೆ ಯತ್ನಿಸುತ್ತಿದೆ. ಆದ್ರೆ ಆಟಗಾರರ ನಿರ್ಧಾರ ಏನು ಅನ್ನೋದೇ ಈಗಿರೋ ಕುತೂಹಲ.

Shwetha M

Leave a Reply

Your email address will not be published. Required fields are marked *