MSIL ಚಿಟ್ ವ್ಯವಹಾರಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ – 5 ಸಾವಿರ ಕೋಟಿ ರೂ.ಗಳಿಗೆ ವ್ಯವಹಾರ ಏರಿಸುವ ಗುರಿ

ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರನ್ಯಾಷನಲ್ ಲಿಮಿಟೆಡ್(ಎಂಎಸ್ಐಎಲ್) ಸಂಸ್ಥೆಯು ಸುಗಮ ಮತ್ತು ಪಾರದರ್ಶಕ ಚಿಟ್ ಫಂಡ್ ವ್ಯವಹಾರದ ಅನುಕೂಲಕ್ಕೆ ಅಭಿವೃದ್ಧಿ ಪಡಿಸಿರುವ ಸಾಫ್ಟವೇರ್ ಮತ್ತು ಮೊಬೈಲ್ ಆ್ಯಪ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಉದ್ಘಾಟಿಸಿದ್ರು.
ಬಳಿಕ ಮಾತನಾಡಿದ ಅವರು, ಎಂಎಸ್ಐಎಲ್ ಸರ್ಕಾರಿ ಸಂಸ್ಥೆಯಾಗಿರುವುದರಿಂದ ಮೋಸದ ಪ್ರಶ್ನೆ ಬರುವುದಿಲ್ಲ. ಸಂಸ್ಥೆಯ ವಹಿವಾಟು ಈಗ ವರ್ಷಕ್ಕೆ 500 ಕೋಟಿ ರೂ.ಗಿಂತಲೂ ಕಡಿಮೆ ಇದೆ. ಇದನ್ನು ಐದು ವರ್ಷಗಳಲ್ಲಿ 5 ಸಾವಿರ ಕೋಟಿ ರೂ.ಗಳಿಗೆ ಏರಿಸುವ ಗುರಿ ಇದೆ. ಸಾರ್ವಜನಿಕರು ಖಾಸಗಿ ಚಿಟ್ಗಳನ್ನು ನಂಬಿ ಮೋಸ ಹೋಗುವುದಕ್ಕಿಂತ ಇಲ್ಲಿ ಹಣ ಹಾಕುವುದು ಒಳ್ಳೆಯದು ಎಂದರು.
ಇದನ್ನೂ ಓದಿ: T20 ವಿಶ್ವಕಪ್ನಲ್ಲಿ ಮೊದಲ ಪಂದ್ಯದಲ್ಲಿ ಎದ್ದು ಬಿದ್ದು ನೆದರ್ಲ್ಯಾಂಡ್ ವಿರುದ್ಧ ಗೆದ್ದ PAK
ಪಕ್ಕದ ಕೇರಳದಲ್ಲಿ ಅಲ್ಲಿನ ಸರ್ಕಾರಿ ಹಣಕಾಸು ಸಂಸ್ಥೆಯು ವರ್ಷಕ್ಕೆ ಚಿಟ್ ಸಹಿತ 1 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಆರ್ಥಿಕ ವ್ಯವಹಾರ ನಡೆಸುತ್ತಿದ್ದು, 45 ಲಕ್ಷ ಗ್ರಾಹಕರನ್ನು ಹೊಂದಿದೆ. ಅಲ್ಲಿನ ಚಿಟ್ ವ್ಯವಸ್ಥೆಯೊಂದರಲ್ಲೇ ವಾರ್ಷಿಕವಾಗಿ 47 ಸಾವಿರ ಕೋಟಿ ರೂ. ವಹಿವಾಟು ನಡೆಸುತ್ತಿದೆ. ಇದಕ್ಕಾಗಿ ಕೇರಳದಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿದ್ದವರನ್ನೇ ಎಂಎಸ್ಐಎಲ್ ಸಮಾಲೋಚಕರನ್ನಾಗಿ ನೇಮಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಸೇನಾ ಕ್ಯಾಂಟೀನ್ ಮಾದರಿ ಎಂಎಸ್ಐಎಲ್ ಸ್ಟೋರ್: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಸುಗಮ ಮತ್ತು ಪಾರದರ್ಶಕ ವ್ಯವಹಾರಕ್ಕೆಂದೇ ಎಂಎಸ್ಐಎಲ್ ಚಿಟ್ಸ್ ಸಾಫ್ಟ್ವೇರ್ ಮತ್ತು ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಸಂಸ್ಥೆಯು ಈಗ 27 ಶಾಖೆಗಳನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಿಗೂ ಇದನ್ನು ವಿಸ್ತರಿಸಲಾಗುವುದು. ಮುಖ್ಯವಾಗಿ ಗ್ರಾಮೀಣ ಭಾಗ ಮತ್ತು ಮಹಿಳೆಯರ ಉಳಿತಾಯದ ಮೇಲೆ ನಮ್ಮ ಗಮನವಿದೆ. ನಮ್ಮಲ್ಲಿ ಬ್ಯಾಂಕ್ಗಳಲ್ಲಿ ಕೊಡುವುದಕ್ಕಿಂತ ಹೆಚ್ಚಿನ ಲಾಭ ಇದರ ಮೂಲಕ ಸಿಗಲಿದೆ ಎಂದು ತಿಳಿಸಿದರು.

ನೋಡಿರಿ

