ಗಂಡನ ತಂಗಿಯನ್ನೇ ಮದುವೆಯಾದ ಎರಡು ಮಕ್ಕಳ ತಾಯಿ – ‘ಅತ್ತಿಗೆ-ನಾದಿನಿ’ ಕಲ್ಯಾಣದ ಕಹಾನಿ ಏನು?

ಗಂಡನ ತಂಗಿಯನ್ನೇ ಮದುವೆಯಾದ ಎರಡು ಮಕ್ಕಳ ತಾಯಿ – ‘ಅತ್ತಿಗೆ-ನಾದಿನಿ’ ಕಲ್ಯಾಣದ ಕಹಾನಿ ಏನು?

ಕೆಲವೊಮ್ಮೆ ನಮ್ಮ ಸುತ್ತಮುತ್ತ ನಡೆಯುವ ವಿಚಿತ್ರಗಳು ಕುತೂಹಲದ ಜೊತೆ ಅಚ್ಚರಿಯನ್ನೂ ಮೂಡಿಸುತ್ತವೆ. ಸದ್ಯ ಬಿಹಾರದಲ್ಲಿ ನಡೆದಿರೋ ಘಟನೆಯೊಂದು ಏನಪ್ಪಾ ಜನ ಹಿಂಗೂ ಇರುತ್ತಾರಾ ಅಂತಾ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ. ಯಾಕಂದ್ರೆ ಎರಡು ಮಕ್ಕಳ ತಾಯಿಯಾಗಿದ್ದ ಅತ್ತಿಗೆಯೇ ನಾದಿನಿಯನ್ನ ಮದುವೆಯಾಗಿದ್ದಾಳೆ. ಅಯ್ಯೋ ಇದೇನಪ್ಪಾ ನಾನು ಓದಿದ್ದು ಸರಿನಾ ಅಂತಾ ತಲೆಕೆಡಿಸಿಕೊಳ್ಳಬೇಡಿ. ಯಾಕಂದ್ರೆ ನೀವು ಓದಿದ್ದು ಸರಿಯಾಗಿಯೇ ಇದೆ. 10 ವರ್ಷಗಳ ಕಾಲ ತನ್ನ ಗಂಡನ ಜೊತೆ ಸಂಸಾರ ನಡೆಸಿ ಇಬ್ಬರು ಮಕ್ಕಳದ ಬಳಿಕ ಗಂಡನ ತಂಗಿಯನ್ನ ಅಂದ್ರೆ ತನ್ನ ನಾದಿನಿಯನ್ನೇ ಮಹಿಳೆಯೊಬ್ಬಳು ವಿವಾಹವಾಗಿದ್ದಾರೆ.

ಇದನ್ನೂ ಓದಿ : ಎಂಆರ್ ಐ ಸ್ಕ್ಯಾನ್ ವೇಳೆ ಗುಂಡೇಟು.. ವಕೀಲ ಸಾವು – ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣನಾ..!?

32 ವರ್ಷದ ಶುಕ್ಲಾ ದೇವಿ ಎನ್ನುವವರು ಬಿಹಾರದ ಸಮಷ್ಟಿಪುರ ಜಿಲ್ಲೆಯ ನಿವಾಸಿಯಾಗಿರುವ ಪ್ರಮೋದ್ ದಾಸ್‌ನನ್ನು 10 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇಬ್ಬರು ಮಕ್ಕಳು ಜನಿಸಿದ್ದು ದಂಪತಿಯ ಮಧ್ಯೆ ಬಿರುಕು ಮೂಡಿ ಪರಸ್ಪರ ಬೇರೆಯಾಗಿದ್ದಾರೆ. ಆದ್ರೆ ಈಗ ಗಂಡನ ತಂಗಿಯಾಗಿರುವ 18 ವರ್ಷದ ಸೋನು ದೇವಿಯನ್ನು ಮದುವೆಯಾಗಿರೋದಾಗಿ ಶುಕ್ಲಾ ದೇವಿ ಹೇಳಿಕೊಂಡಿದ್ದಾರೆ. ಆರು ತಿಂಗಳ ಹಿಂದೆ ಸ್ವಂತ ನಾದಿನಿಯನ್ನೇ ಶುಕ್ಲಾ ದೇವಿ ವಿವಾಹವಾಗಿ ಪರಸ್ಪರ ಒಟ್ಟಿಗೆ ಬದುಕಲು ಆರಂಭಿಸಿದ್ದಾರೆ. ಶಾಸ್ತ್ರ, ಸಂಪ್ರದಾಯಗಳಿಗೆ ಸೆಡ್ಡು ಹೊಡೆದು ನಮ್ಮ ಬದುಕು ನಮ್ಮ ಇಷ್ಟ ಎಂದು ಬದುಕುತ್ತಿದ್ದಾರೆ.

ನಾದಿನಿ ಜೊತೆಗಿನ ಮದುವೆ ಬಗ್ಗೆ ಮಾತನಾಡಿರುವ ಶುಕ್ಲಾ ದೇವಿ, ‘ನಾವಿಬ್ಬರೂ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದೆವು. ಹೀಗಾಗಿ ನಾವು ಮದುವೆಯಾಗಿದ್ದೇವೆ ಎಂದಿದ್ದಾರೆ. ಅಲ್ಲದೇ, ಈಗಾಗಲೇ ಮದುವೆಯಾಗಿ ಗಂಡ ಇರುವಾಗ ನಾದಿನಿಯನ್ನು ಏಕೆ ಮದುವೆ ಆಗಿದ್ದೀರಿ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ, ‘ಆತ ನನ್ನ ಗಂಡ ಆಗಿದ್ದರೆ ಏನಂತೆ? ಎಲ್ಲಿ ಪ್ರೀತಿ ಇರುತ್ತದೆಯೋ ನಾವು ಅಲ್ಲಿ ಉಳಿದುಕೊಳ್ಳುತ್ತೇವೆ. ನಾವಿಬ್ಬರೂ ಮದುವೆಯಾದ ನಂತರ ಬಹಳ ಖುಷಿಯಾಗಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ.

‘ಪ್ರೀತಿಯ ಮನೆಯೆಂದರೆ ಅದು ಹೃದಯ ಎಂದು ನಂಬಿದ್ದೇನೆ. ನಾವಿಬ್ಬರೂ ನಮ್ಮ ಹೃದಯದ ಆಳದಿಂದ ಪರಸ್ಪರ ಪ್ರೀತಿಸುತ್ತೇವೆ. ನಮ್ಮ ಹೃದಯದಲ್ಲಿ ಪರಿಶುದ್ಧ ಪ್ರೀತಿಯಲ್ಲದೆ ಬೇರೇನೂ ಇಲ್ಲ. ಸೋನಿ ಬಹಳ ಒಳ್ಳೆಯ ಗೆಳತಿ’ ಎಂದು ಶುಕ್ಲಾ ದೇವಿ ತಮ್ಮ ಪ್ರೀತಿಯ ಬಗ್ಗೆ ಖುಷಿಯಿಂದ ಹೇಳಿಕೊಂಡಿದ್ದಾರೆ.

ಇನ್ನು ತನ್ನ ಹೆಂಡತಿ ತನ್ನಿಂದ ಬೇರ್ಪಟ್ಟು ತಂಗಿಯ ಜೊತೆಗೆ ವಿವಾಹ ಆಗಿರುವ ಬಗ್ಗೆ ಪ್ರಮೋದ್ ದಾಸ್ ಮಾತನಾಡಿದ್ದಾರೆ. ‘ನನ್ನ ಪತ್ನಿ ಮತ್ತು ತಂಗಿಯ ಈ ಸಂಸಾರಕ್ಕೆ ತನ್ನ ಆಕ್ಷೇಪವಿಲ್ಲ. ಅವಳು ಖುಷಿಯಾಗಿದ್ದರೆ ನಾನೂ ಸಂತಸದಿಂದ ಇರುತ್ತೇನೆ. ನನ್ನ ಹೆಂಡತಿಗೆ ನನ್ನ ತಂಗಿ ಮೇಲೆ ಪ್ರೀತಿ ಮೂಡಿತ್ತು. ಅದಾದ ಬಳಿಕ ಅವರಿಬ್ಬರೂ ಜತೆಯಾಗಿ ವಾಸಿಸಲು ಆರಂಭಿಸಿದ್ದಾರೆ’ ಎಂದು ಹೇಳಿದ್ದಾರೆ.

ಶುಕ್ಲಾ ದೇವಿ ತನ್ನ ನಾದಿನಿ ಜೊತೆ ವಿವಾಹವಾದ ನಂತರ ತನ್ನ ಜೀವನ ಶೈಲಿಯಲ್ಲೂ ಬದಲಾವಣೆ ಮಾಡಿಕೊಂಡಿದ್ದು, ತನ್ನ ಹೆಸರನ್ನು ಸೂರಜ್ ಕುಮಾರ್ ಎಂದು ಬದಲಿಸಿಕೊಂಡಿದ್ದಾರೆ. ಅಲ್ಲದೇ ಸೋನುಗೆ ತಾನು ಗಂಡನೆಂಬ ಭಾವನೆ ಬರಲು ಶುಕ್ಲಾದೇವಿ ತನ್ನ ತಲೆ ಕೂದಲನ್ನು ಹುಡುಗರಂತೆ ಕತ್ತರಿಸಿಕೊಂಡಿದ್ದಾರೆ. ಜೊತೆಗೆ ಗಂಡಸರಂತೆ ಉಡುಪುಗಳನ್ನು ಧರಿಸಲು ಆರಂಭಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಲಿಂಗ ಪರಿವರ್ತನೆಗೂ ಮುಂದಾಗಿದ್ದ ಶುಕ್ಲಾ ದೇವಿ ಅದಕ್ಕಾಗಿ ಸಿದ್ಧತೆ ಮಾಡಿದ್ದರು. ಈ ಸಂಬಂಧ ಯೂಟ್ಯೂಬ್‌ಗಳಲ್ಲಿ ಹಲವು ವಿಡಿಯೋಗಳನ್ನು ನೋಡಿ ಅಧ್ಯಯನ ಮಾಡಿದ್ದರು. ಆದರೆ ಅದಕ್ಕೆ ಸರ್ಜರಿ ಮಾಡಬೇಕಾಗುತ್ತದೆ ಎಂಬುದು ಅರಿತಾಗ ಭಯದಿಂದ ಲಿಂಗ ಪರಿವರ್ತನೆಯ ಪ್ಲ್ಯಾನ್ ಕೈ ಬಿಟ್ಟಿದ್ದಾರಂತೆ.

ಶುಕ್ಲಾ ದೇವಿ ಮತ್ತು ಸೋನು ಪ್ರತ್ಯೇಕ ಮನೆ ಮಾಡಿ ಒಟ್ಟಿಗೆ ಸಂಸಾರ ನಡೆಸುತ್ತಿದ್ದ ವೇಳೆ ಸೋನುವಿನ ತಂದೆ ತಾಯಿ ಬಂದು ಆಕೆಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿದ್ದಾರೆ ಎಂದು ಶುಕ್ಲಾದೇವಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾದ ನಂತರವೇ ಈ ಘಟನೆ ಬೆಳಕಿಗೆ ಬಂದಿದೆ.

suddiyaana