ವೇಗವಾಗಿ ಬೈಕ್ ಓಡಿಸಿ ಆಕ್ಸಿಡೆಂಟ್ ಮಾಡಿದ ಮಗ – ಕಂಪ್ಲೇಂಟ್ ಕೊಟ್ಟು ಪಾಠ ಕಲಿಸಿದ ತಾಯಿ..!

ವೇಗವಾಗಿ ಬೈಕ್ ಓಡಿಸಿ ಆಕ್ಸಿಡೆಂಟ್ ಮಾಡಿದ ಮಗ – ಕಂಪ್ಲೇಂಟ್ ಕೊಟ್ಟು ಪಾಠ ಕಲಿಸಿದ ತಾಯಿ..!

ಯುವಕರ ಕೈಗೆ ಬೈಕ್ ಸಿಕ್ಕರೆ ಕೇಳಬೇಕಾ. ಅವ್ರೇ ಭೂಮಿ ಮೇಲೆ ಇದ್ದಾರೋ, ಇಲ್ಲಾ ಭೂಮಿಯೇ ಅವ್ರ ಮೇಲೆ ಇದ್ಯೋ ಅನ್ನುವಂತೆ ವರ್ತಿಸುತ್ತಾರೆ. ರುಂಯ್ ರುಂಯ್ ಅನ್ಕೊಂಡು ಬುಲೆಟ್ ಸ್ಪೀಡ್​ನಲ್ಲಿ ರೈಡ್ ಮಾಡ್ತಾರೆ. ಹೀಗೆ ಇಲ್ಲೊಬ್ಬ ಮಗ ತಾಯಿಯನ್ನ ಬೈಕ್​ನಲ್ಲಿ ಕೂರಿಸಿಕೊಂಡು ಹೋಗುವಾಗ ಎಡವಟ್ಟು ಮಾಡ್ಕೊಂಡಿದ್ದಾನೆ.

ಇದನ್ನೂ ಓದಿ : ಎಂಆರ್ ಐ ಸ್ಕ್ಯಾನ್ ವೇಳೆ ಗುಂಡೇಟು.. ವಕೀಲ ಸಾವು – ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣನಾ..!?

ಗುಜರಾತ್‌ ರಾಜ್ಯದ ನಾಡಿಯಾಡ್‌ ಎಂಬಲ್ಲಿ ನಡೆದಿರೋ ಈ ಘಟನೆಯನ್ನ ಓದಿದ್ರೆ ನಿಮಗೆ ಅಚ್ಚರಿ ಎನ್ನಿಸಬಹುದು. ಆಕೆಗೆ ವಯಸ್ಸು 58. 8 ತಿಂಗಳ ಹಿಂದಷ್ಟೇ ಆಕೆಯ ಪತಿ ಮೃತಪಟ್ಟಿದ್ದರು. ವಿಧವೆಯಾದ ಆಕೆಗೆ 34 ವರ್ಷ ವಯಸ್ಸಿನ ಮಗ ಇದ್ದಾನೆ. ಇದೀಗ ಈ ಮಹಿಳೆ ತನ್ನ ಮಗನ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನ ಮಗ ಅತಿ ವೇಗವಾಗಿ ಬೈಕ್ ಚಾಲನೆ ಮಾಡಿದ ಕಾರಣ ಅಪಘಾತ ಸಂಭವಿಸಿ ತಾನು ಗಾಯಗೊಂಡಿರೋದಾಗಿ ತಾಯಿ ದೂರು ಕೊಟ್ಟಿದ್ದಾರೆ.

ನಾಡಿಯಾಡ್ ನಿವಾಸಿ ಮೀನಾ ಪಟೇಲ್ ಅವರು ತಮ್ಮ ಮಗ ಆನಂದ್ ವಿರುದ್ಧ ಗುಜರಾತ್‌ನ ವಸೋ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ತಮ್ಮ ದೂರಿನಲ್ಲಿ ಪಟೇಲ್ ಅವರು ತಮಗಾದ ನೋವನ್ನು ಸಮಗ್ರವಾಗಿ ತೋಡಿಕೊಂಡಿದ್ದಾರೆ. ಮೀನಾ ಪಟೇಲ್ ಅವರ ಮಗ ಆನಂದ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದಾರೆ. ಈತ ಆಫೀಸ್‌ಗೆ ಹೋಗುವ ದಾರಿಯಲ್ಲೇ ಅವರ ತಾಯಿಗೆ ಸ್ವಲ್ಪ ಕೆಲಸ ಇತ್ತು. ಹೀಗಾಗಿ, ತಮ್ಮನ್ನು ಅಲ್ಲಿಗೆ ಡ್ರಾಪ್ ಮಾಡುವಂತೆ ತಾಯಿ ಮಗನಿಗೆ ಕೇಳಿಕೊಂಡಿದ್ದಾರೆ.

ಆದರೆ, ಅದೇ ದಿನ ಆನಂದ್ ಅವರ ಬೈಕ್ ಕೆಟ್ಟು ಹೋಗಿತ್ತು. ಹೀಗಾಗಿ ಸ್ನೇಹಿತನ ಬೈಕ್ ಪಡೆದುಕೊಂಡ ಆನಂದ್ ತಾಯಿಯನ್ನು ಕರೆದುಕೊಂಡು ಹೊರಟಿದ್ದಾನೆ. ಅತಿ ವೇಗವಾಗಿ ವಾಹನ ಚಾಲನೆ ಮಾಡುವ ಖಯಾಲಿ ಹೊಂದಿದ್ದ ಆನಂದ್, ತನ್ನ ಸ್ನೇಹಿತನ ಬೈಕ್‌ ಸರಿ ಇದೆಯೇ ಎಂದು ಪರೀಕ್ಷೆಯನ್ನೇ ಮಾಡಿರಲಿಲ್ಲ. ಏಕಾಏಕಿ ತಾಯಿಯನ್ನು ಕೂರಿಸಿಕೊಂಡು ಬೈಕ್‌ನಲ್ಲಿ ಅತಿ ವೇಗವಾಗಿ ಹೊರಟಿದ್ದಾನೆ. ಈ ವೇಳೆ ಬೈಕ್‌ನ ಹಿಂಬದಿ ಸೀಟ್‌ನಲ್ಲಿ ಕುಳಿತಿದ್ದ ಆನಂದ್‌ನ ತಾಯಿ ಪದೇ ಪದೇ ನಿಧಾನವಾಗಿ ಬೈಕ್ ಚಲಾಯಿಸುವಂತೆ ಕೇಳಿಕೊಂಡಿದ್ದಾರೆ. ಆದ್ರೆ, ಅಮ್ಮನ ಮಾತು ಕೇಳದ ಮಗ ವೇಗದಲ್ಲಿ ಬೈಕ್ ಓಡಿಸಿಕೊಂಡು ಸಾಗಿದ್ದಾನೆ. ದುರಾದೃಷ್ಟವಶಾತ್ ಆ ಬೈಕ್‌ನಲ್ಲಿ ಬ್ರೇಕ್ ಸರಿ ಇರಲಿಲ್ಲ. ಹೀಗಾಗಿ, ರಸ್ತೆಯ ತಿರುವಿನಲ್ಲಿ ಬೈಕ್ ನಿಯಂತ್ರಣಕ್ಕೆ ಸಿಗದೆ ಪಲ್ಟಿ ಹೊಡೆದಿದೆ. ತಾಯಿ ಹಾಗೂ ಮಗ ಇಬ್ಬರೂ ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದಾರೆ.

ಆನಂದ್‌ಗೆ ತನ್ನ ತಾಯಿಗೆ ಆದಷ್ಟು ಗಂಭೀರ ಸ್ವರೂಪದ ಗಾಯ ಆಗಿರಲಿಲ್ಲ. ಹೀಗಾಗಿ, ಕೂಡಲೇ ಅಮ್ಮನನ್ನು ಆಸ್ಪತ್ರೆಗೆ ಸಾಗಿಸಿದ್ದಾನೆ. ಆನಂದ್‌ನ ತಾಯಿ ಮೀನಾ ಪಟೇಲ್ ಅವರಿಗೆ ತೋಳಿನ ಮೂಳೆ ಮುರಿದಿತ್ತು. ಹೀಗಾಗಿ, ಅವರು ಹಲವು ದಿನಗಳ ಕಾಲ ಆಸ್ಪತ್ರೆಯಲ್ಲೇ ಕಾಲ ಕಳೆಯಬೇಕಾಯ್ತು. ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರೇ ಮನೆಗೆ ಹೋಗದೆ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಮಗನ ವಿರುದ್ಧ ಅತಿ ವೇಗದ ಹಾಗೂ ನಿರ್ಲಕ್ಷ್ಯದ ವಾಹನ ಚಾಲನೆ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ. ಪೊಲೀಸರಿಗೆ ದೂರು ಕೊಡಬೇಡ ಎಂದು ಮಗ ಬೇಡಿಕೊಂಡರೂ ಆಕೆ ಮಗನ ಮಾತನ್ನು ಕೇಳಿಲ್ಲ.

ಮೀನಾ ಪಟೇಲ್ ಅವರ ಮಗ ಆನಂದ್ ವಿರುದ್ಧ ಐಪಿಸಿ ಸೆಕ್ಷನ್ 279ರ ಅಡಿ ಅತಿ ವೇಗದ ವಾಹನ ಚಾಲನೆ, 337ರ ಅಡಿ ಜೀವಕ್ಕೆ ಅಪಾಯ ತಂದ ಆರೋಪ ಹಾಗೂ ಸೆಕ್ಷನ್ 338ರ ಅಡಿ ವೈಯಕ್ತಿಕ ಸುರಕ್ಷತೆ ಕಾಪಾಡಿಕೊಳ್ಳದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಮೂಲಕ ಅತಿ ವೇಗದ ವಾಹನ ಚಾಲನೆ ಮಾಡುವ ಯುವ ಸಮೂಹಕ್ಕೆ ತಕ್ಕ ಪಾಠ ಕಲಿಸುವ ವಿಚಾರದಲ್ಲಿ ಮೀನಾ ಪಟೇಲ್ ಅವರು ಮಾದರಿಯಾಗಿದ್ದಾರೆ.

suddiyaana