ಮನೆಯೊಳಗೆ ವಿಷಸರ್ಪ ಬಿಟ್ಟು ಎರಡು ಕೊಲೆ – ಹೆಂಡತಿ ಮತ್ತು 2 ವರ್ಷದ ಮಗುವನ್ನು ಕೊಂದೇ ಬಿಟ್ಟ ಕಟುಕ

ಮನೆಯೊಳಗೆ ವಿಷಸರ್ಪ ಬಿಟ್ಟು ಎರಡು ಕೊಲೆ – ಹೆಂಡತಿ ಮತ್ತು 2 ವರ್ಷದ ಮಗುವನ್ನು ಕೊಂದೇ ಬಿಟ್ಟ ಕಟುಕ

ಗಂಡ ಹೆಂಡತಿ ಮುದ್ದಾದ ಹೆಣ್ಣು ಮಗು. ಸುಂದರ ಸಂಸಾರಕ್ಕೆ ಇನ್ನೇನು ಬೇಕು. ಆದರೆ, ಮದುವೆಯಾಗಿ ಮಗು ಆಗುವ ತನಕ ಎಲ್ಲವೂ ಚೆನ್ನಾಗಿಯೇ ಇತ್ತು. ನಂತರ ಶುರುವಾಗಿದ್ದೇ ಗಂಡನ ಪಾಪದ ಕೆಲಸ. ಪ್ರೀತಿಯ ಪತ್ನಿ ಮೇಲೆ ಪಾಪಿಗೆ ಅದ್ಯಾಕೆ ಅಷ್ಟು ದ್ವೇಷ ಬಂದಿತ್ತೋ. ಪತ್ನಿ ಮತ್ತು ಸ್ವಂತ ಮಗುವನ್ನು ಕೊಲ್ಲಲು ಆತ ಮಾಡಿದ್ದು ವಿಷಕಾರಿ ಸಂಚು.

ಇದನ್ನೂ ಓದಿ: 350 ರೂಪಾಯಿಗಾಗಿ 60 ಬಾರಿ ಚುಚ್ಚಿ ಕೊಂದ ಅಪ್ರಾಪ್ತ! – ಹೆಣದ ಮೇಲೆ ಕುಣಿದು ವಿಕೃತಿ!

ಅಂದು ಅಕ್ಟೋಬರ್ 7. ಮನೆಯಲ್ಲಿದ್ದ ಅಮ್ಮ ಮತ್ತು ಮುದ್ದಾದ 2 ವರ್ಷದ ಹೆಣ್ಣು ಮಗಳಿಗೆ ನಾಗರಹಾವು ಕಚ್ಚಿತ್ತು. ಅಯ್ಯಯ್ಯೋ ಹಾವು ಮನೆಯಲ್ಲಿ ಹಾವು ಎಂದು ಬೊಬ್ಬೆ ಹಾಕುವುದರೊಳಗೆ ಅಮ್ಮ ಮಗಳಿಗೆ ಆ ನಾಗರದ ವಿಷ ಏರಿತ್ತು. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅಮ್ಮ ಮತ್ತು ಮಗಳು ಉಳಿಯಲೇ ಇಲ್ಲ. ನನ್ನ ಹೆಂಡತಿ ಮತ್ತು ಮಗುವಿಗೆ ಹಾವು ಕಚ್ಚಿ ಸತ್ತೇ ಹೋದರಲ್ಲಾ ಎಂದು ಆ ದಿನವಿಡೀ ಜೋರಾಗಿ ಅತ್ತಿದ್ದು ಮತ್ಯಾರು ಅಲ್ಲ. ಆಕೆಯ ಗಂಡ ಕೆ.ಗಣೇಶ್ ಪಾತ್ರ. ಆತನ ಆಕ್ರಂದನ ನೋಡಿ ಮೊದಲು ಮಾವನಿಗೆ ಅನುಮಾನ ಬಂದಿತ್ತು. ಮನೆಗೆ ಬಂದ ಹಾವು ನನ್ನ ಮಗಳನ್ನು ಕಚ್ಚಿದ್ದು ಹೇಗೆ ಎಂದು ಚಿಂತೆಯಲ್ಲಿ ಮುಳುಗಿದ್ದ ತಂದೆಗೆ ಅಳಿಯನ ವರ್ತನೆಯಲ್ಲಿ ಅನುಮಾನ ಬಂದಿತ್ತು. ಮಗಳು ಮತ್ತು ಮೊಮ್ಮಗಳ ಅಂತಿಮ ವಿಧಿ ವಿಧಾನ ಮುಗಿದ ಮೇಲೆ ತಂದೆ ಪೊಲೀಸರ ಬಳಿ ತನ್ನ ಅಳಿಯ ಗಣೇಶ್ ಪಾತ್ರ ವಿರುದ್ಧ ಅನುಮಾನವಿರುವುದಾಗಿ ದೂರು ನೀಡಿಯೇ ಬಿಟ್ಟರು. ಆಗಲೇ ಹೊರಬಂದಿದ್ದು ಭಯಾನಕ ಕೊಲೆಯ ಸಂಚಿನ ವಿಚಾರ. ಇಂಥಾ ಒಂದು ಭಯಾನಕ ಘಟನೆ ನಡೆದಿದ್ದು ಒಡಿಶಾದ ಗಂಜಾಂ ಜಿಲ್ಲೆಯಲ್ಲಿ.

ಆರೋಪಿ ಕೆ ಗಣೇಶ್ ಪಾತ್ರ ಹಾಗೂ ಹೆಂಡತಿ ಮಧ್ಯೆ ಜಗಳ ನಡೆದಿತ್ತು. ನಂತರ ಗಣೇಶ್ ತನ್ನ ಪತ್ನಿಗೆ ವರದಕ್ಷಿಣೆಗಾಗಿ ಹಿಂಸೆ ಕೊಡಲು ಶುರುಮಾಡಿದ್ದನಂತೆ. ಇದೇ ವಿಚಾರವಾಗಿ ಪತ್ನಿ ಗಂಡನ ವಿರುದ್ಧ ದೂರು ಕೂಡಾ ನೀಡಿದ್ದಳು. ನಂತರ ಗಂಡ ಹೆಂಡತಿ ಇಬ್ಬರೂ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ನಂತರ ಗಂಡ ಒಳ್ಳೆಯವನ ಥರಾ ನಾಟಕವಾಡಿ ಮತ್ತೆ ಜೊತೆಯಲ್ಲೇ ಇರಲು ಆರಂಭಿಸಿದ್ದರು. ಆದರೆ, ಪತ್ನಿಯ ಮೇಲೆ ಒಳಗೊಳಗೆ ಸೇಡು ತುಂಬಿಕೊಂಡೇ ಇದ್ದನು. ನಂತರ ಹೇಗಾದರೂ ಮಾಡಿ ಹೆಂಡತಿ ಮತ್ತು ಮಗಳನ್ನು ಕೊಲ್ಲಲೇಬೇಕು ಎಂದು ಹಾವಾಡಿಗರ ಬಳಿ ನಾಗರಹಾವನ್ನು ಖರೀದಿಸಿದ್ದಾನೆ. ಅಕ್ಟೋಬರ್ 7 ರಂದು ತನ್ನ ಹೆಂಡತಿ ಮತ್ತು 2 ವರ್ಷ ಮಗಳು ಕೋಣೆಯಲ್ಲಿರುವುದನ್ನು ನೋಡಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ತಂದಿದ್ದ ಹಾವನ್ನು ಬಿಟ್ಟಿದ್ದಾನೆ. ಮೊದಲೇ ಬಂಧಿಯಾಗಿದ್ದ ಸಿಟ್ಟಲ್ಲಿದ್ದ ನಾಗರಹಾವು ಹೊರ ಬಂದ ತಕ್ಷಣವೇ ತಾಯಿ-ಮಗಳನ್ನು ಕಚ್ಚಿತ್ತು. ಇದು ಸಹಜವಾಗಿಯೇ ಹಾವು ಕಚ್ಚಿದ್ದಲ್ಲ ಎಂಬ ಅನುಮಾನದ ಮೇಲೆ ಮೃತಳ ತಂದೆ ಪೋಲೀಸರಿಗೆ ದೂರು ನೀಡಿದ್ದರು. ಪ್ರಕರಣದ ವಿವರವಾದ ತನಿಖೆ ನಡೆಸಿದ ಪೊಲೀಸರು ಆರೋಪಿ ಗಣೇಶ್ ನನ್ನು ಬಂಧಿಸಿದ್ದಾರೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ.

Sulekha