ಮುಂಜಾನೆಯನ್ನು ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಅತ್ಯಂತ ಪವಿತ್ರ ಮತ್ತು ಶಕ್ತಿಯುತ ಸಮಯವೆಂದು ಪರಿಗಣಿಸಲಾಗುತ್ತದೆ. ಹಿರಿಯರು ಸದಾ ಬೇಗ ಎದ್ದು ದಿನವನ್ನು ಸಕಾರಾತ್ಮಕ ಕಾರ್ಯಗಳಿಂದ ಆರಂಭಿಸಲು ಸಲಹೆ ನೀಡುತ್ತಾರೆ. ಬೆಳಗಿನ ಸಮಯದಲ್ಲಿ ಪ್ರಕೃತಿಯಲ್ಲಿಯೂ ಧನಾತ್ಮಕ ಶಕ್ತಿಗಳು ಹೆಚ್ಚಾಗಿರುತ್ತವೆ ಎಂದು ನಂಬಲಾಗುತ್ತದೆ. ಆದ್ದರಿಂದ ದಿನದ ಆರಂಭವನ್ನು ಒಳ್ಳೆಯ ಅಭ್ಯಾಸಗಳಿಂದ ಪ್ರಾರಂಭಿಸಿದರೆ ಜೀವನದಲ್ಲಿ ಯಶಸ್ಸು, ಸಂಪತ್ತು ಮತ್ತು ಮನಶಾಂತಿ ದೊರೆಯುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹಾಗಿದ್ರೆ ಬೆಳಗ್ಗೆ ಏನ್ ಮಾಡಬೇಕು ಅನ್ನೋದ್ದನ್ನ ನೋಡೋಣ.
ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮತ್ತು ಪೂಜೆ
ಸೂರ್ಯೋದಯಕ್ಕೂ ಸುಮಾರು 1.5 ಗಂಟೆಗಳ ಮುಂಚಿನ ಸಮಯವನ್ನು ಬ್ರಹ್ಮ ಮುಹೂರ್ತ ಎಂದು ಕರೆಯುತ್ತಾರೆ. ಇದನ್ನು ದೇವರ ಆರಾಧನೆಗೆ ಅತ್ಯುತ್ತಮ ಸಮಯವೆಂದು ಶಾಸ್ತ್ರಗಳು ಹೇಳುತ್ತವೆ. ಮುಂಜಾನೆ ಸ್ನಾನ ಮಾಡಿ ಸ್ವಚ್ಛವಾದ ಬಟ್ಟೆ ಧರಿಸಿ ದೇವರನ್ನು ಭಕ್ತಿಯಿಂದ ಪೂಜಿಸಿದರೆ ಮನಶಾಂತಿ, ಆರೋಗ್ಯ ಮತ್ತು ಆತ್ಮಶಕ್ತಿ ಹೆಚ್ಚುತ್ತದೆ ಎಂದು ನಂಬಲಾಗುತ್ತದೆ. ಧ್ಯಾನ, ಜಪ ಅಥವಾ ಪ್ರಾರ್ಥನೆ ಮಾಡುವುದರಿಂದ ಮನಸ್ಸು ಶಾಂತವಾಗಿದ್ದು ದಿನದ ಕೆಲಸಗಳನ್ನು ಉತ್ತಮವಾಗಿ ನಿರ್ವಹಿಸಲು ಸಹಾಯವಾಗುತ್ತದೆ.
ಅಂಗೈ ನೋಡುವುದು ಶುಭಕರ
ಬೆಳಗ್ಗೆ ನಿದ್ರೆಯಿಂದ ಎದ್ದ ತಕ್ಷಣ ಎರಡು ಕೈಗಳನ್ನು ಒದ್ದೆ ಮಾಡಿ ಅಂಗೈಗಳನ್ನು ನೋಡುವುದು ಒಂದು ಪ್ರಾಚೀನ ಸಂಪ್ರದಾಯ. ನಮ್ಮ ಅಂಗೈಗಳಲ್ಲಿ ಲಕ್ಷ್ಮೀ ದೇವಿ, ಸರಸ್ವತಿ ದೇವಿ ಹಾಗೂ ವಿಷ್ಣುವಿನ ಕೃಪೆ ನೆಲೆಸಿದೆ ಎಂಬ ನಂಬಿಕೆ ಇದೆ. ಆದ್ದರಿಂದ ಬೆಳಗ್ಗೆ ಮೊದಲು ಅಂಗೈಗಳನ್ನು ನೋಡಿದರೆ ದಿನದ ಕೆಲಸಗಳು ಯಶಸ್ವಿಯಾಗುತ್ತವೆ ಹಾಗೂ ಜೀವನದಲ್ಲಿ ಸಮೃದ್ಧಿ ಬರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಕೆಲವು ಮಂದಿ ಈ ಸಮಯದಲ್ಲಿ ಕರಾಗ್ರೇ ವಸತೇ ಲಕ್ಷ್ಮೀ ಎಂಬ ಶ್ಲೋಕವನ್ನು ಪಠಿಸುವ ಅಭ್ಯಾಸವನ್ನೂ ಪಾಲಿಸುತ್ತಾರೆ.
ಮನೆಗೆ ಪವಿತ್ರ ಜಲ ಸಿಂಪಡಿಸುವುದು
ಸ್ನಾನ ಮಾಡಿದ ನಂತರ ಮನೆಯ ದೇವರ ಕೋಣೆ ಮತ್ತು ಮನೆಯ ಪ್ರಮುಖ ಸ್ಥಳಗಳಲ್ಲಿ ಗಂಗಾಜಲವನ್ನು ಸಿಂಪಡಿಸುವುದು ಶುಭಕರ ಎಂದು ಪರಿಗಣಿಸಲಾಗಿದೆ. ಗಂಗಾಜಲವನ್ನು ಅತ್ಯಂತ ಪವಿತ್ರವೆಂದು ಭಾವಿಸಲಾಗುತ್ತದೆ. ಇದು ಮನೆಯ ವಾತಾವರಣವನ್ನು ಶುದ್ಧಗೊಳಿಸಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಇದೆ. ಗಂಗಾಜಲ ಲಭ್ಯವಿಲ್ಲದಿದ್ದರೆ ಗೋಮೂತ್ರವನ್ನೂ ಸಿಂಪಡಿಸಬಹುದು ಎಂದು ಕೆಲವು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಎಂದು ನಂಬಲಾಗುತ್ತದೆ.
ಗೋಮಾತೆಗೆ ಆಹಾರ ನೀಡುವುದು
ಹಿಂದೂ ಧರ್ಮದಲ್ಲಿ ಹಸುಗಳನ್ನು ಗೋಮಾತೆ ಎಂದು ಗೌರವಿಸಲಾಗುತ್ತದೆ. ಬೆಳಗಿನ ಪೂಜೆಯ ನಂತರ ಹಸುಗಳಿಗೆ ರೊಟ್ಟಿ, ಹುಲ್ಲು ಅಥವಾ ಇತರ ಆಹಾರ ನೀಡುವುದು ಪುಣ್ಯದ ಕೆಲಸವೆಂದು ಪರಿಗಣಿಸಲಾಗಿದೆ. ಶಾಸ್ತ್ರಗಳ ಪ್ರಕಾರ ಗೋಮಾತೆಯ ಸೇವೆಯಿಂದ ದೇವರ ಕೃಪೆ ದೊರೆಯುತ್ತದೆ ಹಾಗೂ ಲಕ್ಷ್ಮೀ ದೇವಿಯ ಆಶೀರ್ವಾದ ಮನೆಗೆ ಬರುತ್ತದೆ ಎಂಬ ನಂಬಿಕೆ ಇದೆ. ಇದರಿಂದ ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂದು ಹಿರಿಯರು ಹೇಳುತ್ತಾರೆ.

ನೋಡಿರಿ


