ಸೇತುವೆ ಮೇಲೆಯೇ ಭಾಷಣ ಬಿಗಿದ ಎಂಇಎಸ್- ನಿಷೇಧಾಜ್ಞೆ ನಡುವೆಯೂ ನಿಲ್ಲದ ಪುಂಡಾಟಿಕೆ

ಸೇತುವೆ ಮೇಲೆಯೇ ಭಾಷಣ ಬಿಗಿದ ಎಂಇಎಸ್- ನಿಷೇಧಾಜ್ಞೆ ನಡುವೆಯೂ ನಿಲ್ಲದ ಪುಂಡಾಟಿಕೆ

ಬೆಳಗಾವಿ: ಬೆಳಗಾವಿಯಲ್ಲಿ ಎಂಇಎಸ್ ಪುಂಡರು ನಿಷೇಧಾಜ್ಞೆಗೂ ಬಗ್ಗದೇ ಉದ್ಧಟತನ ತೋರಿದ್ದಾರೆ. ವ್ಯಾಕ್ಸಿನ್ ಡಿಪೋ ಬಳಿ ಹೇರಲಾಗಿದ್ದ ನಿಷೇಧಾಜ್ಞೆ ನಡುವೆಯೂ ಎಂಇಎಸ್ ಪುಂಡರು ನಾಡದ್ರೋಹಿ ಘೋಷಣೆ ಕೂಗಿದ್ದಾರೆ. ಅಧಿವೇಶನದ ಹಿನ್ನೆಲೆಯಲ್ಲಿ ಮಹಾಮೇಳಾವ್‌ಗೆ ರಾಜ್ಯಸರ್ಕಾರ ಬ್ರೇಕ್ ಹಾಕಿತ್ತು. ಮಹಾಮೇಳಾವ್‌ಗೆ ಸಿದ್ಧತೆ ಮಾಡಿಕೊಂಡಿರುವ ವಸ್ತುಗಳನ್ನು ಪೊಲೀಸರು ಸೀಜ್ ಮಾಡಿದ್ದರು. ಇಷ್ಟಾದರೂ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್ ಪೋಸ್ಟ್ ಮೂಲಕ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್ ಪಕ್ಷದ ಧ್ವಜ ಹಿಡಿದು ಬಂದ ಕಾರ್ಯಕರ್ತರು ಬೆಳಗಾವಿ ಗಡಿಗೆ ನುಗ್ಗಲು ಯತ್ನಿಸಿದ್ದಾರೆ.

ಇದನ್ನೂ ಓದಿ :  ಬೆಳಗಾವಿಯಲ್ಲಿ ಎಂಇಎಸ್ ಮಹಾಮೇಳಾವ್‌ಗೆ ರಾಜ್ಯಸರ್ಕಾರದಿಂದ ಬ್ರೇಕ್

300ಕ್ಕೂ ಅಧಿಕ ಕಾರ್ಯಕರ್ತರು ಬೆಳಗಾವಿಗೆ ನುಗ್ಗಲು ಯತ್ನಿಸಿದ್ದಾರೆ. ಇದೇ ವೇಳೆ ಗುಂಪಿನ ಪ್ರಮುಖರು ಕರ್ನಾಟಕ ಮಹಾರಾಷ್ಟ್ರದ ಗಡಿಯಲ್ಲಿರುವ ದೂದ್‌ಗಂಗಾ ನದಿ ಸೇತುವೆ ಮೇಲೆ ನಿಂತು ಭಾಷಣ ಮಾಡಿದ್ದು, ಕರ್ನಾಟಕದ ಗಡಿ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ನಗರದ 2ನೇ ರೇಲ್ವೆಗೇಟ್ ಬಳಿಯೂ ಎಂಇಎಸ್ ನಾಯಕರು ಘೋಷಣೆ ಕೂಗಿದ್ದಾರೆ. ಎಂಇಎಸ್ ಮಾಜಿ ಮೇಯರ್ ಸರಿತಾ ಪಾಟೀಲ್, ಉಪಮೇಯರ್ ರೇಣು ಕಿಲ್ಲೇಕರ್, ಶಿವಾನಿ ಪಾಟೀಲ್ ಸೇರಿದಂತೆ ಹಲವು ಕಾರ್ಯಕರ್ತರು ಬೆಳಗಾವಿ, ನಿಪ್ಪಾಣಿ, ಕಾರವಾರ , ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು ಎಂದು ಒತ್ತಾಯಿಸಿದ್ದಾರೆ. ಬೆಳಗಾವಿ ನಮ್ಮ ಹಕ್ಕು ಎಂದು ಘೋಷಣೆ ಕೂಗಿದ್ದಾರೆ.  ವ್ಯಾಕ್ಸಿನ್ ಡಿಪೋಗೆ ನುಗ್ಗಲು ಯತ್ನಿಸಿದ 20ಕ್ಕೂ ಹೆಚ್ಚು ಎಂಇಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವ್ಯಾಕ್ಸಿನ್ ಡಿಪೋ ಮೈದಾನದ ಸುತ್ತಲೂ ಬ್ಯಾರಿಕೇಡ್ ಅಳವಡಿಸಲಾಗಿದೆ. ಓರ್ವ ಎಸಿಪಿ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ. ಒಂದು ಕೆಎಸ್ಆರ್‌ ಪಿ ತುಕಡಿ ಬೀಡುಬಿಟ್ಟಿದೆ. ಡಿಪೋ ಮೈದಾನದ 500 ಮೀಟರ್ ಸುತ್ತ ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

suddiyaana