ಋತುಮತಿಯಾಗಿದ್ದ ಬಾಲಕಿಯೊಬ್ಬಳನ್ನು ಶಾಲೆಯ ಹೊರಗೆ ಕೂರಿಸಿ ಪರೀಕ್ಷೆ- ತಮಿಳುನಾಡಿನಲ್ಲಿ ಅಮಾನವೀಯ ಘಟನೆ

ತಮಿಳುನಾಡಿನಲ್ಲಿ ಸಮಾಜವೇ ತಲೆ ತಗ್ಗಿಸುವ ಘಟನೆ ನಡೆದಿದೆ. ಋತುಮತಿಯಾಗಿದ್ದ ಬಾಲಕಿಯೊಬ್ಬಳನ್ನು ಶಾಲೆಯ ಹೊರಗೆ ಕೂರಿಸಿ ಪರೀಕ್ಷೆ ಬರೆಸಿದ ಘಟನೆ ತಮಿಳು ನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಕೊಯಮತ್ತೂರಿನ ಖಾಸಗಿ ಶಾಲೆಯಲ್ಲಿ ಬುಧವಾರ ಎಂಟನೇ ತರಗತಿಯ ಪರಿಶಿಷ್ಟ ಜಾತಿ (SC) ವಿದ್ಯಾರ್ಥಿನಿ ಋತುಮತಿಯಾಗಿದ್ದಳು ಎಂಬ ಕಾರಣಕ್ಕೆ ತರಗತಿಯ ಹೊರಗೆ ಕೂರಿಸಿ ವಾರ್ಷಿಕ ಪರೀಕ್ಷೆ ಬರೆಸಿದ್ದಾರೆ. ತರಗತಿಯ ಹೊರಗೆ ಪರೀಕ್ಷೆ ಬರೆಯುತ್ತಿರುವ ಬಾಲಕಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಶಾಲಾ ಆಡಳಿತದ ವಿರುದ್ಧ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕ ಎ. ಪಳನಿಸಾಮಿ ಅವರನ್ನು ಸಂಪರ್ಕಿಸಿದಾಗ, ಶಿಕ್ಷಣ ಅಧಿಕಾರಿಗಳಿಗೆ ವಿಚಾರಣಾ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ, ಶಾಲೆಗೆ ಶೋಕಾಸ್ ನೋಟಿಸ್ ನೀಡುವಂತೆ ಕೇಳಲಾಗಿದೆ ಎಂದು ವರದಿಯಾಗಿದೆ. ಭವಿಷ್ಯದಲ್ಲಿ ಶಾಲೆಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೊರಡಿಸುವಂತೆ ಕೇಳಲಾಗಿದೆ ಎಂದು ಹೇಳಿದರು. ಕೊಯಮತ್ತೂರು ಮುಖ್ಯ ಶಿಕ್ಷಣಾಧಿಕಾರಿ ಆರ್. ಬಾಲಮುರಳಿ ಮತ್ತು ಖಾಸಗಿ ಶಾಲೆಗಳ ಜಿಲ್ಲಾ ಶಿಕ್ಷಣಾಧಿಕಾರಿ ಪುನಿತಾ ಅಂತೋಣಿಯಮ್ಮಳ್ ಅವರು ಇಂದು ಶಾಲೆಗೆ ಭೇಟಿ ನೀಡಿ ಶಾಲಾ ಆಡಳಿತ ಅಧಿಕಾರಿಗಳೊಂದಿಗೆ ಘಟನೆಯ ಬಗ್ಗೆ ವಿಚಾರಿಸಿದರು.