ಧಾರ್ಮಿಕ ಸ್ಥಳ, ಸ್ಮಶಾನದ ಬಳಿ ಇನ್ನು ಮುಂದೆ ಮಾಂಸ ಮಾರಾಟ ಮಾಡುವಂತಿಲ್ಲ! – ಏನಿದು ಹೊಸ ರೂಲ್ಸ್‌?

ಧಾರ್ಮಿಕ ಸ್ಥಳ, ಸ್ಮಶಾನದ ಬಳಿ ಇನ್ನು ಮುಂದೆ ಮಾಂಸ ಮಾರಾಟ ಮಾಡುವಂತಿಲ್ಲ! – ಏನಿದು ಹೊಸ ರೂಲ್ಸ್‌?

ಇನ್ನು ಮುಂದೆ ಯಾವುದೇ ಧಾರ್ಮಿಕ ಸ್ಥಳ, ಸ್ಮಶಾನದ ಬಳಿ ಮಾಂಸ ಮಾರಾಟ ಮಾಡುವಂತಿಲ್ಲ ಎಂದು ದಿಲ್ಲಿ ಮುನ್ಸಿಪಲ್‌ ಕಾರ್ಪೊರೇಷನ್‌ (ಎಂಸಿಡಿ) ಹೊಸ ನೀತಿಯೊಂದನ್ನು ಅಂಗೀಕರಿಸಿದೆ. ಇದೀಗ ಹೊಸ ನಿಯಮಕ್ಕೆ ಅಂಗಡಿ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ದಿಲ್ಲಿಯ ಪಶು ವೈದ್ಯಕೀಯ ಇಲಾಖೆಯು ಧಾರ್ಮಿಕ ಸ್ಥಳದ ಬಳಿ ಯಾವುದೇ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಬೇಕು ಅಂತಾ ಪ್ರಸ್ತಾಪವನ್ನು ಹಿಂದೆಯೇ ಸರಕಾರಕ್ಕೆ ಸಲ್ಲಿಸಿತ್ತು. ಇದೀಗ ಎಂಸಿಡಿ ಧಾರ್ಮಿಕ ಸ್ಥಳ, ಸ್ಮಶಾನದ ಬಳಿ ಮಾಂಸ ಮಾರಾಟ ಮಾಡುವಂತಿಲ್ಲ ಎಂಬ ಹೊಸ ನೀತಿಯನ್ನು ಅಂಗೀಕರಿಸಿದೆ. ನೂತನ ನೀತಿಯಲ್ಲಿ ಮಾಂಸದ ಅಂಗಡಿಯು ಧಾರ್ಮಿಕ ಸ್ಥಳ ಅಥವಾ ಸ್ಮಶಾನಕ್ಕಿಂತಲೂ ಕನಿಷ್ಠ 150 ಮೀಟರ್‌ ದೂರ ಇರಬೇಕು ಎಂದು ಉಲ್ಲೇಖವಾಗಿದೆ. ಹೊಸ ನೀತಿಗೆ ವ್ಯಾಪಾರಿಗಳ ಸಂಘಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಪರಿಷ್ಕೃತ ನೀತಿಯನ್ನು ವಾಪಸ್‌ ತೆಗೆದುಕೊಳ್ಳದಿದ್ದರೆ ನಾವು ಕೋರ್ಟ್‌ ಮೊರೆ ಹೋಗುತ್ತೇವೆ ಎಂದು ಮಾಂಸದ ಅಂಗಡಿ ವ್ಯಾಪಾರಿಗಳು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚಿದ ವಾಯು ಮಾಲಿನ್ಯ – ಶಾಲೆಗಳಿಗೆ 2 ದಿನ ರಜೆ, ನಿರ್ಮಾಣ ಕೆಲಸಕ್ಕೆ ನಿಷೇಧ

ಹೊಸ ನೀತಿಯಲ್ಲಿನ ಮತ್ತೊಂದು ಅಂಶವೆಂದರೆ ಮಾಂಸದಂಗಡಿಗಳಿಗೆ ಪರವಾನಗಿ ನೀಡಲು ಮತ್ತು ನವೀಕರಿಸಲು ಉತ್ತರ, ದಕ್ಷಿಣ, ಪೂರ್ವದ ಪಾಲಿಕೆಗಳು 18 ಸಾವಿರ ಹಾಗೂ ಮಾಂಸದ ಸಂಸ್ಕರಣಾ ಘಟಕಗಳಿಗೆ 1.5 ಲಕ್ಷ ರೂ.ಗೆ ನಿಗದಿಪಡಿಸಿವೆ. ಪರವಾನಗಿ ನೀಡಿದ ದಿನಾಂಕದಿಂದ ಪ್ರತಿ ಮೂರು ಹಣಕಾಸು ವರ್ಷಗಳ ನಂತರ ಶುಲ್ಕ ಮತ್ತು ದಂಡವನ್ನು ಶೇ. 15 ರಷ್ಟು ಹೆಚ್ಚಿಸಲಾಗುವುದು ಎಂದು ನೀತಿಯಲ್ಲಿ ತಿಳಿಸಲಾಗಿದೆ.

ಈ ನೀತಿ ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸುತ್ತದೆ. ಕೇವಲ 2,700 ರೂ. ಕೂಡ ಪಾವತಿಸಲು ಕಷ್ಟಪಡುತ್ತಿರುವ ಅಂಗಡಿ ಮಾಲೀಕರು ಈಗ ಪರವಾನಗಿ ನವೀಕರಿಸಲು ಹೊಸದಿಲ್ಲಿ ಪಾಲಿಕೆಗೆ 7,000 ರೂ. ಪಾವತಿಸಬೇಕಾಗಿದೆ. ಆದರೆ, ಪರ್ಯಾಯವಾಗಿ ಪೊಲೀಸರಿಗೆ ಸ್ವಲ್ಪ ಭಕ್ಷೀಸು ಕೊಟ್ಟರೆ ಸಾಕು ಎಂದು ಅಂಗಡಿ ಮಾಲೀಕರು ವಾಮಮಾರ್ಗ ಕಂಡುಕೊಳ್ಳುತ್ತಿದ್ದಾರೆ. ಇದರಿಂದ ಪಾಲಿಕೆಗಳಿಗೆ ನಷ್ಟವಾಗುತ್ತದೆ ಎಂದು ಮಾಲೀಕರ ಸಂಘದ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.

Shwetha M