ಲವ್‌ ಆದ ಆರೇ ದಿನಕ್ಕೆ ಮದುವೆ.. ಕೈ ಹಿಡಿದ ಗಂಡ ಒಂದೇ ತಿಂಗಳಲ್ಲಿ ಕೈಕೊಟ್ಟು ಪರಾರಿ!

ಲವ್‌ ಆದ ಆರೇ ದಿನಕ್ಕೆ ಮದುವೆ.. ಕೈ ಹಿಡಿದ ಗಂಡ ಒಂದೇ ತಿಂಗಳಲ್ಲಿ ಕೈಕೊಟ್ಟು ಪರಾರಿ!

ಪ್ರೀತಿ  ಎಲ್ಲಿ, ಯಾವಾಗ, ಯಾರ ಮೇಲೆ ಹುಟ್ಟುತ್ತೆ ಅಂತಾ ಹೇಳೋಕೆ ಆಗಲ್ಲ. ಇತ್ತಿಚೇಗಂತೂ ಸೋಶಿಯಲ್‌ ಮೀಡಿದಲ್ಲೂ ಲವ್‌ ಆಗುತ್ತೆ. ಪ್ರೀತಿಗೆ ಬಿದ್ದವರು ತಾನು ಪ್ರೀತಿಸುತ್ತಿರುವ ವ್ಯಕ್ತಿ ಹಿನ್ನೆಲೆ ಏನು ಅಂತಾ ಕೂಡ ತಿಳಿದುಕೊಳ್ಳಲ್ಲ. ಆತ ನಿಜವಾಗಿಯೂ ತನ್ನನ್ನು ಲವ್‌ ಮಾಡುತ್ತಾನಾ ಅಂತಾ ತಿಳಿದುಕೊಳ್ಳುವಷ್ಟರ ವೇಳೆಗೆ ಪರಿಸ್ಥಿತಿ ಕೈಮೀರಿ ಹೋಗಿರುತ್ತೆ. ಆ ವ್ಯಕ್ತಿ ಹೆಣೆದ ಬಲೆಗೆ ಬಿದ್ದಾಗಿರುತ್ತೆ. ಇದೀಗ ಇಲ್ಲೊಬ್ಬಳು ಯುವತಿ ಸೋಶಿಯಲ್‌ ಮೀಡಿಯಾದಲ್ಲಿ ಪ್ರೀತಿಸಿ ಮದುವೆಯಾಗಿದ್ದಾಳೆ. ವಿವಾಹವಾದ ಕೆಲವೇ ದಿನಗಳಲ್ಲಿ ಒಂದೇ ತಿಂಗಳಲ್ಲಿ ಪರಾರಿಯಾಗಿದ್ದಾನೆ.

ಏನಿದು ಘಟನೆ?

ಮಹಿಳೆಯೊಬ್ಬಳಿಗೆ ಇನ್​ಸ್ಟಾಗ್ರಾಂನಲ್ಲಿ ವ್ಯಕ್ತಿಯೊಬ್ಬ ಪರಿಚಯವಾಗಿದ್ದಾನೆ. ಕೆಲವೇ ದಿನಗಳಲ್ಲಿ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ. ಪ್ರೀತಿ ಹುಟ್ಟಿದ ಆರೇ ದಿನದಲ್ಲಿ ಮದುವೆಯಾಗಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಮಹಿಳೆಗೆ ಕೇವಲ ಒಂದೇ ತಿಂಗಳಲ್ಲಿ ತನ್ನ ವೈವಾಹಿಕ ಜೀವನದಲ್ಲಿ ಬರ ಸಿಡಿಲು ಬಡಿದಿದೆ. ಜೀವಪೂರ್ತಿ ಜೊತೆಯಾಗಿ ಬಾಳೋಣ ಎಂದು ಕೈ ಹಿಡಿದ ಗಂಡ ಇದೀಗ ಕೈಕೊಟ್ಟು ಪರಾರಿಯಾಗಿದ್ದಾನೆ. ಇತ್ತ ಸಂತ್ರಸ್ತೆ ಆತನಿಲ್ಲದೇ ನನಗೆ ಇರಲು ಸಾಧ್ಯ ಇಲ್ಲ ಅಂತಾ ಶೋಕ ಸಾಗರದಲ್ಲಿ ಮುಳುಗಿದ್ದಾಳೆ.

ಬಿಹಾರ‌ ಮೂಲದ ನರಿಜಾ ಬೇಗಮ್​ಗೆ ಬಾಗಲಕೋಟೆ ಮೂಲದ‌ ಮೊಹಮ್ಮದ್​ ಇಮ್ರಾನ್ ಕೆಲಾರಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಬಾಗಲಕೋಟೆಯ ಸೀಗಿಕೇರಿ ಗ್ರಾಮದ ಬಾಡಿಗೆ ಮನೆಯಲ್ಲಿ ಪತ್ನಿಯನ್ನು ಬಿಟ್ಟು ಇಮ್ರಾನ್​ ಎಸ್ಕೇಪ್​ ಆಗಿದ್ದಾರೆ. ಪತಿಯ ಪೋನ್​ ನಂಬರ್ ಕೂಡ ಸ್ವಿಚ್ ಆಫ್​ ಆಗಿದೆ. ಮುಂದೇನು ಮಾಡಬೇಕು ಎಂದು ದಿಕ್ಕು ತೋಚದೆ ರಾತ್ರಿಯಿಡಿ ಮನೆಯಲ್ಲಿ ನರಿಜಾ ಕಣ್ಣೀರು ಹಾಕಿದ್ದಾರೆ. ಒಂದು ತಿಂಗಳ‌ ಹಿಂದಷ್ಟೇ ಇಬ್ಬರು ಬಿಹಾರದಲ್ಲಿ ಮದುವೆಯಾಗಿದ್ದರು. ನರಿಜಾ ಬಿಹಾರದ ಪೂರ್ನಿಯಾ ಜಿಲ್ಲೆಯ ಕರುಣಾಬಾಡೀಜ್ ಮೂಲದವರು.

ಇದನ್ನೂ ಓದಿ: ಕಡಿಮೆ ಅಂಕ ಕೊಟ್ಟಿದ್ದಕ್ಕೆ ಹೀಗಾ ಮಾಡೋದು! – ಶಿಕ್ಷಕಿಯ ವಾಟರ್ ಬಾಟಲ್‌ಗೆ ಮಾತ್ರೆ ಹಾಕಿದ ವಿದ್ಯಾರ್ಥಿನಿಯರು!

ಕಾರು ಚಾಲಕನಾಗಿರುವ ಇಮ್ರಾನ್ ಮತ್ತು ನರಿಜಾ ಈ ಮೊದಲೇ ಬೇರೆ ಬೇರೆ ಮದುವೆಯಾಗಿದ್ದರು. ಇಬ್ಬರು ತಲಾಕ್​​​ನಲ್ಲಿದ್ದರು. ನರಿಜಾ ಬೇಗಮ್‌ ಇನ್​​​ಸ್ಟಾಗ್ರಾಂ ಫೋಟೋ ನೋಡಿ ಸಲಾಂ ವಾಲೆಕುಮ್ ಎಂದು ಇಮ್ರಾನ್​ ಕಾಮೆಂಟ್ ಮಾಡಿದ್ದ. ಇದಕ್ಕೆ‌ ನರಿಜಾ ಕೂಡ ವಾಲೆಕುಮ್‌ ಅಸ್ಸಲಾಂ ಎಂದು ಪ್ರತಿಕ್ರಿಯೆ ನೀಡಿದ್ದಳು.

ಇದಾದ ಬಳಿಕ ಇಬ್ಬರ ನಡುವೆ ಚಾಟಿಂಗ್​ ಆರಂಭವಾಗಿತ್ತು. ಆರಂಭದ ಪರಿಚಯ, ಸ್ನೇಹವಾಗಿ, ನಂತರ ಪ್ರೀತಿಗೆ ತಿರುಗಿತ್ತು. ಬಳಿಕ ಪರಸ್ಪರ ವಿಡಿಯೋ ಕಾಲ್ ಮಾಡುವ ಮೂಲಕ ಮತ್ತಷ್ಟು ಹತ್ತಿರವಾದರು. ಇನ್​ಸ್ಟಾಗ್ರಾಂನಲ್ಲಿ ಪ್ರೀತಿ ಚಿಗುರಿದ ಆರೇ ದಿನದಲ್ಲಿ ಇಬ್ಬರ ಮದುವೆಯಾಗಿತ್ತು. ಬಳಿಕ ಇಬ್ಬರು ಸಂಬಂಧಿಕರನ್ನು ಒಪ್ಪಿಸಿ‌ ಮದುವೆಯಾಗಿದ್ದರು.

ಇಮ್ರಾನ್ ತನ್ನ ಮಾವ ಹಾಗೂ ಕೆಲವರ ಜತೆ ಬಿಹಾರಕ್ಕೆ ಹೋಗಿ ನರಿಜಾ ಸಂಬಂಧಿಕರ ಸಮ್ಮುಖದಲ್ಲಿ‌ ಸರಳವಾಗಿ ನಿಖಾ ಮಾಡಿಕೊಂಡಿದ್ದರು. ನಂತರ ಬಾಗಲಕೋಟೆಗೆ ಕರೆತಂದು ನವನಗರದಲ್ಲಿ ವಾಸವಿದ್ದರು. ಕಳೆದ ಐದು ದಿನದ ಹಿಂದೆ ಸೀಗಿಕೇರಿ ಗ್ರಾಮದಲ್ಲಿ ಬಾಡಿಗೆ ಮನೆಗೆ ಇಬ್ಬರು ಸ್ಥಳಾಂತವಾಗಿದ್ದರು. ಇದೀಗ ಐದನೇ ದಿನಕ್ಕೆ ಪತಿ ಎಸ್ಕೇಪ್​ ಆಗಿದ್ದಾನೆ.

ನನಗೆ ಪತಿ ಬೇಕು, ನಾ ಸತ್ತರೂ ಇಲ್ಲೇ ಸಾಯ್ತಿನಿ ಆದರೆ, ಬಿಹಾರಗೆ ಮಾತ್ರ ವಾಪಸ್​ ಹೋಗುವುದಿಲ್ಲ. ನನ್ನ ಪತಿಯನ್ನು ನನಗೆ ಹುಡುಕಿ ಕೊಡಿ ಎಂದು ನರಿಜಾ ಬಾಗಲಕೋಟೆಯ ಮಹಿಳಾ ಠಾಣೆಯ ಮೆಟ್ಟಿಲೇರಿದ್ದಾರೆ. ಆತನಿಗೆ ಹೊಡಿಬೇಡಿ, ತೊಂದರೆ ಕೊಡಬೇಡಿ, ನನ್ನ ಜೊತೆ ಬದುಕುವಂತೆ ಮಾಡಿ ಎಂದು ಕಣ್ಣೀರು ಹಾಕಿದ್ದಾರೆ.

Shwetha M