ಮಂಗಳೂರು ರಿಕ್ಷಾ ಸ್ಫೋಟ ಪ್ರಕರಣ- ಮನೆಯ ಹಿಂಭಾಗದಲ್ಲೇ ರೂಮ್ ಬಾಡಿಗೆ ಪಡೆದಿದ್ದ ಆರೋಪಿ

ಮಂಗಳೂರು ರಿಕ್ಷಾ ಸ್ಫೋಟ ಪ್ರಕರಣ- ಮನೆಯ ಹಿಂಭಾಗದಲ್ಲೇ ರೂಮ್ ಬಾಡಿಗೆ ಪಡೆದಿದ್ದ ಆರೋಪಿ

ಮಂಗಳೂರು: ನಾಗುರಿ ಬಳಿ ಆಟೋದಲ್ಲಿ ಲಘು ಸ್ಫೋಟ ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಗುತ್ತಿದೆ. ಈ ಸ್ಫೋಟ ಪ್ರಕರಣದ ಗಾಯಾಳು ಮೊಹಮ್ಮದ್​ ಶಾರಿಕ್ ಎಂಬುದು ದೃಢಪಟ್ಟಿದ್ದು, ಶಾರಿಕ್ ಜೊತೆಗೆ ನಿರಂತರ ಸಂಪರ್ಕ ಇದ್ದ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಶಾರಿಕ್ ಜೊತೆಗೆ ಈ ಮೂವರು ಯಾಕೆ ನಿರಂತರ ಸಂಪರ್ಕದಲ್ಲಿದ್ದರು? ಬೇರೆ ಬೇರೆ ಆಯಾಮದಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮಂಗಳೂರಿನಲ್ಲಿ ಗೋಡೆಬರಹ ಪ್ರಕರಣದಲ್ಲಿ ಆರೋಪಿಯಾಗಿರುವ ಶಾರಿಕ್​​, ಮಂಗಳೂರಿನಲ್ಲಿ ಬಾಂಬ್​​ ಸ್ಫೋಟಿಸಲು ಹೊರಟಿದ್ದ. ಈಗ ಘಟನೆಯಲ್ಲಿ ಗಾಯಗೊಂಡಿರುವ ಆರೋಪಿ ಶಾರಿಕ್ ಒಬ್ಬ ಆಟೋ ಬಾಂಬರ್ ಎಂಬುವುದನ್ನು ತನಿಖೆ ವೇಳೆ ಪೊಲೀಸರು ದೃಢಪಡಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ಸ್ಪೋಟ ಸ್ಥಳದಲ್ಲಿ ‘ಪ್ರೇಮರಾಜ್‌’ ಆಧಾರ್ ಕಾರ್ಡ್ – ಯಾರೀತ.. ಏನು ಲಿಂಕ್‌?

ಮನೆಯ ಹಿಂಭಾಗದಲ್ಲೇ ರೂಮ್ ಬಾಡಿಗೆ ಪಡೆದಿದ್ದ ಆರೋಪಿ

ಸ್ಫೋಟಕ್ಕೆ ಸಂಚು ರೂಪಿಸಿದ್ದ ಆರೋಪಿ ಮೊಬೈಲ್ ಬಗ್ಗೆ ತರಬೇತಿ ಪಡೆಯಲು ಮೈಸೂರಿಗೆ ಭೇಟಿ ನೀಡಿದ್ದ ಎಂಬ ಬಗ್ಗೆ ಮಂಗಳೂರು, ಮೈಸೂರು ಪೊಲೀಸರು ನಡೆಸಿದ ಜಂಟಿ ತನಿಖೆ ವೇಳೆ ತಿಳಿದುಬಂದಿದೆ. ಆರೋಪಿ ಕುಕ್ಕರ್​ ಬಾಂಬ್ ತಯಾರಿಸುವ ಮುನ್ನ ಮೈಸೂರಿನಲ್ಲಿ ಮೊಬೈಲ್ ರಿಪೇರಿ ಸೆಂಟರ್​​ನಲ್ಲಿ ಕೆಲಸಕ್ಕೆ ಸೇರಿದ್ದ. ಮೊಬೈಲ್​ ಕಾರ್ಯನಿರ್ವಹಣೆ ಬಗ್ಗೆ ಅಧ್ಯಯನ ನಡೆಸಿದ್ದ. ಮೈಸೂರಿನ ಲೋಕನಾಯಕ ನಗರದಲ್ಲಿರುವ ತನ್ನ ಕೊಠಡಿಯಲ್ಲಿ ಕುಳಿತು ಕುಕ್ಕರ್ ಬಾಂಬ್​ ತಯಾರಿಸುವ ಬಗ್ಗೆ ಅಭ್ಯಾಸ ಮಾಡಿದ್ದ. ಯಾರಿಗೂ ಅನುಮಾನ ಬಾರದಂತೆ ಆರೋಪಿ ಪ್ಲ್ಯಾನ್​ ಮಾಡಿಕೊಂಡಿದ್ದ. ಮನೆಯ ಹಿಂಭಾಗದಲ್ಲೇ ರೂಮ್ ಬಾಡಿಗೆ ಪಡೆದಿದ್ದ ಎಂಬ ಬಗ್ಗೆ ತನಿಖೆ ವೇಳೆ ಬಯಲಾಗಿದೆ.

ಬಸ್​​ನಲ್ಲೇ ಶಾರಿಕ್​​ ಕುಕ್ಕರ್​ ಬಾಂಬ್​ ಸಾಗಿಸಿದ್ದ
ಶಾರಿಕ್ ಬಸ್ ನಲ್ಲಿ ಬಾಂಬ್ ತಂದಿದ್ದಾನೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಮೈಸೂರು, ಕುಶಾಲನಗರ, ಮಡಿಕೇರಿ, ಸುಳ್ಯ, ಪುತ್ತೂರು ಮಾರ್ಗವಾಗಿ ಆರೋಪಿ ಶಾರಿಕ್ ಮಂಗಳೂರಿಗೆ ಬಂದಿದ್ದಾನೆ ಎನ್ನಲಾಗಿದ್ದು, ಮಂಗಳೂರಿನ ಪಂಪ್​​ವೆಲ್​​ ಬಳಿ ಬಸ್​​ನಿಂದ​ ಇಳಿದಿದ್ದಾನೆ.

ಶಿವಮೊಗ್ಗ ಹೊರವಲಯದ ತುಂಗಾ ತೀರದಲ್ಲಿ ಸ್ಫೋಟದ ಶಂಕಿತ ಉಗ್ರರು ರಿಹರ್ಸಲ್ ಮಾಡುತ್ತಿದ್ದರು. ಯಾಸೀನ್ ಮತ್ತು ಶಾರಿಕ್ ಟ್ರಯಲ್ ಬ್ಲಾಸ್ಟ್ ಕೂಡಾ ಮಾಡಿದ್ದರು. ಈ ಮೂಲಕ ಮಂಗಳೂರು, ಮಲೆನಾಡು ಮತ್ತು ರಾಜ್ಯದಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎಂಬ ಬಗ್ಗೆ ಪೊಲೀಸರಿಗೆ ಉಳಿವು ಸಿಕ್ಕಿದೆ.

ಇದನ್ನೂ ಓದಿ: ಮಂಗಳೂರು ರಿಕ್ಷಾ ಸ್ಫೋಟ ಪ್ರಕರಣ- ಇದೊಂದು ಭಯೋತ್ಪಾದನೆ ಕೃತ್ಯ

ಇನ್ನು ಶಿವಮೊಗ್ಗ ಮಾಜ್ ಮತ್ತು ಯಾಸೀನ್ ಬಂಧನ ಬಳಿಕ ನಾಪತ್ತೆಯಾಗಿದ್ದು, ಈ ಇಬ್ಬರ ಬಂಧನದ ಬಳಿಕವೂ ಶಾರಿಕ್ ಭಯ ಪಟ್ಟಿರಲಿಲ್ಲ. ಜಿಹಾದ್ ಕಾರ್ಯಕ್ಕೆ ಮುಂದಾಗಿದ್ದ. ಶಿವಮೊಗ್ಗದಿಂದ ಎಸ್ಕೇಪ್ ಆಗಿ ಶಾರಿಕ್ ಮತ್ತೆ ಸ್ಫೋಟಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದ. ಶಾರಿಕ್​ಗೆ ಉಗ್ರ ಸಂಘಟನೆಯ ಸಂಪರ್ಕ ಇತ್ತು ಎಂಬ ಬಗ್ಗೆ ತಿಳಿದು ಬಂದಿದೆ. ಇದರ ನಡುವೆ ತುಂಗಾ ತೀರದಲ್ಲಿ ಪತ್ತೆಯಾದ ಸ್ಫೋಟಕ ವಸ್ತುಗಳೇ ಆಟೋ ಬ್ಲಾಸ್ಟ್​ನಲ್ಲೂ ಪತ್ತೆಯಾಗಿದೆ. ಶಂಕಿತ ಉಗ್ರ ಶಾರಿಕ್ ಇನ್ನೇನು ಸಂಚು ರೂಪಿಸಿದ್ದ ಎಂಬ ಬಗ್ಗೆ ಪೊಲೀಸರಿಗೆ ಆತಂಕ ಹೆಚ್ಚಾಗಿದೆ.

ಆಸ್ಪತ್ರೆಗೆ ಆರೋಪಿ ಶಾರಿಕ್​ ಕುಟುಂಬಸ್ಥರನ್ನು ಕರೆತಂದ ಪೊಲೀಸರು

ಮಂಗಳೂರಿನ ಕಂಕನಾಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಶಾರಿಕ್​ನ ಚಿಕ್ಕಮ್ಮ, ಸಹೋದರಿಯನ್ನು ಪೊಲೀಸರು ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಗಾಯಾಳು ಶಾರಿಕ್​ ಎಂಬುದನ್ನು ಕುಟುಂಬಸ್ಥರು ಖಚಿತಪಡಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ಪೋಷಕರು ಶಾರಿಕ್​ ಗುರುತು ಪತ್ತೆಹಚ್ಚಿದ್ದಾರೆ.

ಶಾರಿಕ್​, ಮಾಜ್​ ಮನೆ ಮೇಲೆ ತೀರ್ಥಹಳ್ಳಿ ಪೊಲೀಸರ ದಾಳಿ

ಮಂಗಳೂರು ಬಾಂಬ್​ ಸ್ಫೋಟದಲ್ಲಿ ಶಾರಿಕ್​ ಪಾತ್ರ ಹಿನ್ನೆಲೆ ತೀರ್ಥಹಳ್ಳಿ ಪಟ್ಟಣದ ಟಾಕೀಸ್ ರಸ್ತೆಯ 4 ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ತೀರ್ಥಹಳ್ಳಿ ಇನ್ಸ್​ಪೆಕ್ಟರ್ ಅಶ್ವತ್ಥ್ ಗೌಡ, ಮಾಳೂರು ಸಿಪಿಐ ಪ್ರವೀಣ್, ಆಗುಂಬೆ ಪಿಎಸ್ ಐ ಶಿವಕುಮಾರ್​, ಮಾಳೂರು ಪಿಎಸ್ ಐ ನೇತೃತ್ವದಲ್ಲಿ ಸರ್ಚ್​ ವಾರಂಟ್​ ಪಡೆದು ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಖಾಸಗಿ ಶಾಲಾ ಶಿಕ್ಷಕನೊಬ್ಬನ ಹೆಸರಲ್ಲಿ ಸಿಮ್​ ಪಡೆದಿದ್ದ ಶಾರಿಕ್​, ಕೊಯಮತ್ತೂರು ಬಾಂಬ್ ಸ್ಫೋಟಕ್ಕೂ ಮುನ್ನ ತಮಿಳುನಾಡು ಭೇಟಿ ನೀಡಿದ್ದ. ಶಾರಿಕ್ ಸೆಪ್ಟೆಂಬರ್​ನಲ್ಲಿ ಕೊಯಮತ್ತೂರು ಬಳಿಯ ಸಿಂಗನಲ್ಲೂರಿಗೆ ಭೇಟಿ ನೀಡಿದ್ದ. ಅ.23ರಂದು ಕೊಯಮತ್ತೂರು ಸಂಗಮೇಶ್ವರ ದೇಗುಲ ಬಳಿ ಸ್ಫೋಟ ಸಂಭವಿಸಿತ್ತು. ಸ್ಫೋಟದಲ್ಲಿ ಐಸಿಸ್ ನಂಟಿದ್ದ ಉಗ್ರ ಮುಬೀನ್ ಮೃತಪಟ್ಟಿದ್ದ. ಬಳಿಕ ಸೆಪ್ಟೆಂಬರ್​ನಲ್ಲೇ ತೀರ್ಥಹಳ್ಳಿಯಿಂದ ಶಾರಿಕ್ ನಾಪತ್ತೆಯಾಗಿದ್ದ. ​ ಗೋಡೆ ಬರಹ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಶಾರಿಕ್​, ಮಾಜ್​ ಜತೆ ಸೇರಿ ಶಿವಮೊಗ್ಗ, ಬಂಟ್ವಾಳದಲ್ಲಿ ಟ್ರಯಲ್ ಬ್ಲಾಸ್ಟ್​ ಮಾಡಿದ್ದ. ಆನ್​​ಲೈನ್​ನಲ್ಲಿ ವಸ್ತುಗಳನ್ನು ಖರೀದಿಸಿ ಬಾಂಬ್​ ತಯಾರಿಸುತ್ತಿದ್ದ ಎನ್ನಲಾಗಿದೆ.

suddiyaana