ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಚ್‌ ಡಿ ಕುಮಾರಸ್ವಾಮಿ –  ಬಿ.ವೈ. ವಿಜಯೇಂದ್ರ ಅಧಿಕೃತ ಘೋಷಣೆ

ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಚ್‌ ಡಿ ಕುಮಾರಸ್ವಾಮಿ –  ಬಿ.ವೈ. ವಿಜಯೇಂದ್ರ ಅಧಿಕೃತ ಘೋಷಣೆ

ಮಂಡ್ಯ ಲೋಕಸಭೆ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿ ಯಾರು ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹೆಚ್‌ ಡಿ ಕುಮಾರಸ್ವಾಮಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಘೋಷಣೆ ಮಾಡಿದ್ದಾರೆ.

ಬಿಜೆಪಿ-ಜೆಡಿಎಸ್ ನಾಯಕರ ಸಭೆ ಬಳಿಕ ಮಾತನಾಡಿರುವ ಬಿ.ವೈ.ವಿಜಯೇಂದ್ರ, ಜನರಿಗಾಗಿ ಪ್ರಾಣ ಮುಡಿಪಾಗಿಡುವ ಜನನಾಯಕ ಕುಮಾರಣ್ಣ ಸಂಸದರಾಗಬೇಕು. ರಾಜ್ಯದ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಲಿದ್ದಾರೆ. ಎರಡು ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿದ್ದಾರೆ. ಕಾಂಗ್ರೆಸ್ ಪಕ್ಷ ದೂಳಿಪಟ ಮಾಡುವ ಕೆಲಸ ಮಾಡ್ತಾರೆ. ಕುಮಾರಸ್ವಾಮಿ, ದೇವೇಗೌಡರು ರಾಜ್ಯ ಪ್ರವಾಸ ಮಾಡ್ತಾರೆ. ಚುನಾವಣೆಯನ್ನು ಚುನಾವಣೆ ರೀತಿ ಮಾಡೋಣ ಮೈಮರೆಯುವುದು ಬೇಡ. ರಾಜ್ಯದ ಮೊದಲ ಫಲಿತಾಂಶ ಮಂಡ್ಯದ್ದಾಗಿರಬೇಕು. ಕುಮಾರಸ್ವಾಮಿ ಅತಿ ಹೆಚ್ಚು ಅಂತರದಿಂದ ಗೆಲ್ಲಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ! – ನಿರ್ಮಲಾ ಸೀತಾರಾಮನ್‌ ಈ ನಿರ್ಧಾರಕ್ಕೆ ಕಾರಣವೇನು?

ದೇಶದ ಭವಿಷ್ಯ ರೂಪಿಸುವ ಚುನಾವಣೆ ಇದು. ಕಾಂಗ್ರೆಸ್ ಅಧಿಕಾರದ ಅಮಲಿನಲ್ಲಿದೆ. ರಾಜ್ಯಕ್ಕೆ ದಾರುಣ ಪರಿಸ್ಥಿತಿ ಬಂದಿದೆ. ಬರಗಾಲ ಇದೆ, ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. ಜನ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಸಿಎಂ ಸಿದ್ದರಾಮಯ್ಯ ಜನರ ಸಮಸ್ಯೆಗಳಿಗೆ ಎಳ್ಳಷ್ಟು ಸ್ಪಂದಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇಂತಹ ಮುಖ್ಯಮಂತ್ರಿ ಪಡೆದದ್ದು ನಮ್ಮ ದುರಾದೃಷ್ಟಕರ. ಜಾತಿ-ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವುದೇ ಕಾಂಗ್ರೆಸ್ ಸಾಧನೆ. ಮೂರನೇ ಬಾರಿಗೆ ಮೋದಿ ಪ್ರಧಾನಿಮಂತ್ರಿ ಮಾಡುವ ಸಂಕಲ್ಪ ನಮ್ಮದು. ಬಿಜೆಪಿ ಜೆಡಿಎಸ್‌ ಮೈತ್ರಿ ಕಾಂಗ್ರೆಸ್ ನಿದ್ದೆಗೆಡಿಸಿದೆ. ಸಚಿವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಯೋಜನೆಯಲ್ಲಿ ಕಾಂಗ್ರೆಸ್ ಇತ್ತು‌. ಯಾವುದೇ ಒಬ್ಬ ಮಂತ್ರಿ ಅಭ್ಯರ್ಥಿ ಆಗುವ ಧೈರ್ಯ ಮಾಡಲಿಲ್ಲ. ಕಾರಣ ಮೋದಿ ಜನಪ್ರಿಯತೆ, ಬಿಜೆಪಿ ಜೆಡಿಎಸ್‌ ಮೈತ್ರಿ ಎಂದು ಹೇಳಿದ್ದಾರೆ.

Shwetha M