ಕನ್ನಡ ನಾಮಫಲಕ ಕಡ್ಡಾಯಕ್ಕೆ ಕರವೇ ಒತ್ತಾಯ – ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ನಾರಾಯಣ ಗೌಡ ಸೇರಿ ಹಲವರು ವಶಕ್ಕೆ

ಕನ್ನಡ ನಾಮಫಲಕ ಕಡ್ಡಾಯಕ್ಕೆ ಕರವೇ ಒತ್ತಾಯ – ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ನಾರಾಯಣ ಗೌಡ ಸೇರಿ ಹಲವರು ವಶಕ್ಕೆ

ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ 60% ಕನ್ನಡಕ್ಕೆ ಸರ್ಕಾರದ ಸೂಚನೆ ಇದ್ದರೂ ನಿರ್ಲಕ್ಷ್ಯ ಮಾಡುತ್ತಿರುವವರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರು ಇಂಗ್ಲೀಷ್‌ ನಾಮಫಲಕಗಳನ್ನು ಹರಿದುಹಾಕುತ್ತಿದ್ದಾರೆ. ಹಿಂಸಾಚಾರ ತೀವ್ರಗೊಂಡಬೆನ್ನಲ್ಲೇ ಕರವೇ ಅಧ್ಯಕ್ಷ ನಾರಾಯಣ ಗೌಡ ಸೇರಿ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಕೊರೊನಾ ಬಂದಿರೋದು ಮನುಷ್ಯರಿಗಾ.. ವಾಹನಕ್ಕಾ? – ​ ಸ್ಕೂಟರ್‌ ನಂಬರ್‌ ಪ್ಲೇಟ್‌ಗೆ ಮಾಸ್ಕ್‌ ಹಾಕಿದ ಭೂಪ!

ಕನ್ನಡ ನಾಮಫಲಕ ಕಡ್ಡಾಯಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನಾ ರ್ಯಾಲಿಯನ್ನು ನಡೆಸಿದರು. ಬುಧವಾರ ಬೆಳಗ್ಗೆ 11 ಗಂಟೆಗೆ ದೇವನಹಳ್ಳಿಯ ಸಾದಹಳ್ಳಿ ಟೋಲ್​ನಿಂದ ಬೆಂಗಳೂರು ಕಬ್ಬನ್ ಪಾರ್ಕ್​ವರೆಗೆ ಕರವೇ ಕಾರ್ಯಕರ್ತರು ರ್ಯಾಲಿ ಆರಂಭಿಸಿದ್ದರು. ನಗರದ ವಿವಿಧೆಡೆ ವಿಶೇಷವಾಗಿ ವ್ಯಾಪಾರ ಕೇಂದ್ರಗಳಾದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಲ್ಯಾವೆಲ್ಲೆ ರಸ್ತೆ, ಚಾಮರಾಜಪೇಟೆ, ಚಿಕ್ಕಪೇಟೆ, ಕೆಂಪೇಗೌಡ ರಸ್ತೆ, ಗಾಂಧಿ ನಗರ, ಸೇಂಟ್ ಮಾರ್ಕ್ಸ್ ರಸ್ತೆ, ಕನ್ನಿಂಗ್‌ಹ್ಯಾಮ್ ರಸ್ತೆ, ರೆಸಿಡೆನ್ಸಿ ರಸ್ತೆ, ಕೆಆರ್ ಪುರಂ, ಹೆಬ್ಬಾಳದಲ್ಲಿ ರ್ಯಾಲಿ ನಡೆಸಿದರು. ಈ ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

ಕರವೇ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದು, ಇಂಗ್ಲೀಷ್ ನಲ್ಲಿದ್ದ ಕೆಲವು ಬೋರ್ಡ್‌ಗಳಿಗೆ ಕಪ್ಪು ಬಣ್ಣ ಬಳಿದು ಆಕ್ರೋಶ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೇ ಪ್ರಾಣವನ್ನೂ ಲೆಕ್ಕಿಸದೇ ಬೃಹತ್ ಜಾಹೀರಾತು ಫಲಕ ಏರಿ ಇಂಗ್ಲಿಷ್‍ನಲ್ಲಿದ್ದ ಬೋರ್ಡ್ ಅನ್ನು ಹರಿದು ಹಾಕಿದ್ದಾರೆ. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಪೊಲೀಸರು ಕರವೇ ಅಧ್ಯಕ್ಷ ನಾರಾಯಣ ಗೌಡ ಸೇರಿ ಹಲವು ಕಾರ್ಯಕರ್ತರನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ಅವರು ಮಾತನಾಡಿ, ಮಾಲ್ ಆಫ್ ಏಷ್ಯಾ ಮಾಲೀಕರು ಮತ್ತು ಇತರ ಮಾಲ್ ಮಾಲೀಕರು ಶೇ. 60 ಕನ್ನಡ ನಾಮಫಲಕ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಇವರು ಪೊಲೀಸರ ರಕ್ಷಣೆ ತೆಗೆದುಕೊಂಡಿರಬಹುದು. ಆದರೆ, ನಿಯಮಗಳನ್ನು ಪಾಲಿಸದಿದ್ದರೆ, ಕನ್ನಡಕ್ಕೆ ಆದ್ಯತೆ ನೀಡದಿದ್ದರೆ, ಕ.ರಾ.ವೇ ಕಾರ್ಯಕರ್ತರು ಆಸ್ತಿಪಾಸ್ತಿಗಳನ್ನು ನಾಶಪಡಿಸುತ್ತಾರೆಂದು ಎಚ್ಚರಿಸಿದರು.

ಇದೇ ವೇಳೆ ದೇವನಹಳ್ಳಿ ಟೋಲ್ ಗೇಟ್ ಬಳಿ ಪೊಲೀಸರು ನಾರಾಯಣ ಗೌಡ ಮತ್ತು ರಾಜ್ಯ ಕಾರ್ಯದರ್ಶಿ ಸಣ್ಣ ಈರಪ್ಪ ಅವರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದುಕೊಂಡರು.

ನಿನ್ನೆಯಷ್ಟೇ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸಭೆ ನಡೆಸಿ, 15 ದಿನಗಳಲ್ಲಿ ಕನ್ನಡ ನಾಮಫಲಕಗಳ ಹಾಕುವಂತೆ ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ಸೂಚನೆ ನೀಡಿದ್ದರು.

Shwetha M