ಎಣ್ಣೆ ಮತ್ತಿನಲ್ಲಿ ಹಾವಿಗೆ ಕಿಸ್‌ ಕೊಟ್ಟ! – ಹಾವಿನ ಕೋಪಕ್ಕೆ ಶಿವನ ಪಾದ ಸೇರಿಬಿಟ್ಟ!

ಎಣ್ಣೆ ಮತ್ತಿನಲ್ಲಿ ಹಾವಿಗೆ ಕಿಸ್‌ ಕೊಟ್ಟ! – ಹಾವಿನ ಕೋಪಕ್ಕೆ ಶಿವನ ಪಾದ ಸೇರಿಬಿಟ್ಟ!

ಕುಡಿದ ಮತ್ತಿನಲ್ಲಿದ್ದವರು ತಾನೇ ಊರಿನ ರಾಜ.. ತನ್ನದೇ ಸಾಮ್ರಾಜ್ಯ.. ತಾನು ಏನು ಮಾಡಿದ್ರೂ ನಡೆಯುತ್ತೆ ಅನ್ನೋ ಭ್ರಮೆಯಲ್ಲಿರುತ್ತಾರೆ. ಮದ್ಯದ ಅಮಲಿನಲ್ಲಿರುವವರು ಮಾಡಿದ ಕಿತಾಪತಿಗಳು ಎಲ್ಲರನ್ನೂ ಬೆಚ್ಚಬೀಳಿಸುವಂತೆ ಮಾಡುತ್ತೆ. ಕೆಲವರು ಮಾಡುವ ಕಿತಾಪತಿಗಳು ಜೀವಕ್ಕೆ ಸಂಚಕಾರ ತರುತ್ತವೆ. ಇಲ್ಲೊಬ್ಬ ಕುಡಿದ ಮತ್ತಿನಲ್ಲಿ ಹಾವಿಗೆ ಕಿಸ್‌ ಕೊಡಲು ಹೋಗಿ ಜೀವ ಕಳೆದುಕೊಂಡಿದ್ದಾನೆ.

ಏನಿದು ಘಟನೆ?

ಯುವಕರ ಗುಂಪೊಂದು ಕಂಠಪೂರ್ತಿ ಕುಡಿದಿದ್ದಾರೆ. ಬಳಿಕ ಹಾವಿನೊಂದಿಗೆ ಹುಚ್ಚುತನ ತೋರಿದ್ದಾರೆ. ಈ ವೇಳೆ ಕುಡಿದ ಮತ್ತಿನಲ್ಲಿ ಹಾವಿಗೆ ಮುತ್ತು ಕೊಡಲು ಹೋಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ. ಹಾವಿನ ಜತೆ ಚಿತ್ರೀಕರಣ ಮಾಡುವಾಗ ಹಾವು ಕಚ್ಚಿದೆ. ಅಹಿರೌಲಿ ಗ್ರಾಮದ ರೋಹಿತ್ ಜೈಸ್ವಾಲ್ ಎಂಬ ಯುವಕ ಮದ್ಯದ ಅಮಲಿನಲ್ಲಿ ಹಾವಿನೊಂದಿಗೆ ಆಟವಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು.

ಇದನ್ನೂ ಓದಿ: ಕೆಲಸಕ್ಕಾಗಿ ಕಾಲು ಹಿಡಿದ ಪಾಪಿಯಿಂದಲೇ ಕೊಲೆ – ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಆರೋಪಿ ಬಂಧನ

ವೈರಲ್‌ ಆದ ವಿಡಿಯೋದಲ್ಲಿ ಜೈಸ್ವಾಲ್ ಶಿವನ ರೂಪವಾದ ಮಹಾಕಾಲ್ ಆಗಿ ನಟಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ಹಾವಿಗೆ ತನ್ನನ್ನು ಕಚ್ಚುವಂತೆ ಸವಾಲು ಹಾಕಿದ್ದಾನೆ. ಬಳಿಕ ಹಾವನ್ನು ಕುತ್ತಿಗೆ ಹಾಗೂ ಕೈಗೆ ಸುತ್ತಿಕೊಂಡಿದ್ದಾನೆ. ಬಳಿಕ ನಾಲಿಗೆ ತೆರೆದು ನಾಲಿಗೆಗೆ ಕಚ್ಚುವಂತೆ ಹಾವಿಗೆ ಹೇಳಿದ್ದಾನೆ. ಸಿಗರೇಟ್​ ಸೇದುವುದು ಹಾಗೂ ಹಾವಿಗೆ ಹೊಡೆಯುವುದು ಹೀಗೆ ಮಾನಸಿಕ ಅಸ್ವಸ್ಥನಂತೆ ಆಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಕ್ರೈಟ್​ ಎಂಬ ಹಾವು ಜೈಸ್ವಾಲ್​ಗೆ ಕಚ್ಚಿದೆ. ಹಾವು ಕಚ್ಚಿದ ಕೆಲವೇ ಹೊತ್ತಲ್ಲಿ ಆತ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

ಈ ಪ್ರಕರಣ ಖುಖುಂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಠಾಣೆ ಪ್ರಭಾರಿ ಸಂತೋಷ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

Shwetha M