ಗಂಡು ಮಕ್ಕಳಿಲ್ಲ ಎಂದು ಜಾತ್ರೆಯಲ್ಲಿ ಮಗುವನ್ನ ಕದ್ದೊಯ್ದ ಮಹಿಳೆ!

ಗಂಡು ಮಕ್ಕಳಿಲ್ಲ ಎಂದು ಜಾತ್ರೆಯಲ್ಲಿ ಮಗುವನ್ನ ಕದ್ದೊಯ್ದ ಮಹಿಳೆ!

ಕಾಲ ಎಷ್ಟು ಮುಂದುವರಿದ್ರೂ ಜನರ ಮನಸ್ಥಿತಿ ಮಾತ್ರ ಬದಲಾಗಲ್ಲ. ಇದಕ್ಕೆ ಬೆಸ್ಟ್‌ ಎಕ್ಸಾಂಪಲ್‌ ಅಂದ್ರೆ ತುಮಕೂರಿನಲ್ಲಿ ನಡೆದ ಘಟನೆ. ಇಲ್ಲೊಬ್ಬಳು ಮಹಿಳೆ ಗಂಡು ಮಕ್ಕಳಿಲ್ಲ ಎಂದು ಜಾತ್ರೆಯಲ್ಲಿ ಮಗುವನ್ನ ಕಿಡ್ನ್ಯಾಪ್‌ ಮಾಡಿದ್ದು, ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಇದನ್ನೂ ಓದಿ: ಆದಿ – ಭಾಗ್ಯ ಪ್ರೇಮ ಪಯಣ ಶುರು! – ತಾಂಡವ್‌ಗೆ ಭಾಗ್ಯಳೇ ಗತಿ!

ತನಗೆ ಇಬ್ಬರು ಹೆಣ್ಣು ಮಕ್ಕಳಿದ್ದರೂ ಗಂಡು ಮಗು ಬೇಕೆಂಬ ದುರಾಸೆಗೆ ಬಿದ್ದ ಮಹಿಳೆಯೊಬ್ಬಳು ಎರಡೂವರೆ ವರ್ಷದ ಮಗುವನ್ನೇ ಅಪರಹಿಸಿದ್ದಾಳೆ. ತುಮಕೂರಿನ ಜಾತ್ರೆಯೊಂದರಲ್ಲಿ ಈ ಘಟನೆ ನಡೆದಿದ್ದು, ಕಿಡ್ನ್ಯಾಪ್‌ ಆಗಿದ್ದ ಮಗುವನ್ನು ಬೆಂಗಳೂರಿನ ಕೊರಮಂಗಲ ಪ್ರದೇಶದಲ್ಲಿ ಪತ್ತೆ ಮಾಡಲಾಗಿದ್ದು, ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರಿಸಲಾಗಿದೆ.

ಏನಿದು ಘಟನೆ?

ಬೆಂಗಳೂರಿನ ಲಗ್ಗೆರೆಯಲ್ಲಿ ವಾಸಿಸುವ ದಂಪತಿಯ ಮಗುವನ್ನು ಫೆಬ್ರವರಿ 1ರಂದು ಶಿರಾ ಜಾತ್ರಾ ಮಹೋತ್ಸವದ ವೇಳೆ ಅಪಹರಿಸಲಾಗಿತ್ತು. ಮಗುವನ್ನು ಅದರ ತಾತ ಪುಟ್ಟರಂಗಯ್ಯ ತಮ್ಮೊಂದಿಗೆ ಜಾತ್ರೆಗೆ ಕರೆತಂದಿದ್ದರು. ಜಾತ್ರೆಯಲ್ಲಿ ಅಂಗಡಿ ಹಾಕಿದ್ದ ತಾತನೊಂದಿಗೆ ಇದ್ದ ಮಗುವನ್ನು ನೋಡಿದ ಆರೋಪಿಗಳು ಚಾಕೊಲೇಟ್ ಕೊಡಿಸುವ ನೆಪದಲ್ಲಿ ಮಗುವನ್ನು ಕರೆದೊಯ್ದಿದ್ದರು. ಮಗು ನಾಪತ್ತೆಯಾಗುತ್ತಿದ್ದಂತೆ ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಿರಾ ಡಿವೈಎಸ್‌ಪಿ ಶೇಖರ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಆಂಧ್ರ ಪ್ರದೇಶ ಸೇರಿದಂತೆ ವಿವಿಧೆಡೆ ಹುಡುಕಾಟ ನಡೆಸಲಾಗಿತ್ತು.

ಕೊನೆಗೆ ಬೆಂಗಳೂರಿನ ಕೊರಮಂಗಲದಲ್ಲಿರುವ ಶಾಂತಮೇರಿ ಎಂಬ ಮಹಿಳೆಯ ಮನೆಯಲ್ಲಿ ಮಗು ಪತ್ತೆಯಾಗಿದೆ. ಆರೋಪಿ ಶಾಂತಮೇರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದರೂ ಗಂಡು ಮಗು ಬೇಕೆಂಬ ಹಂಬಲದಿಂದ ಸಂಬಂಧಿ ನರಸಯ್ಯನೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾತ್ರೆಗೂ ಎರಡು ದಿನ ಮೊದಲು ತುಮಕೂರಿಗೆ ಬಂದಿದ್ದ ಶಾಂತಮೇರಿ ಮತ್ತು ನರಸಯ್ಯ, ಪೂರ್ವ ಯೋಜನೆಯೊಂದಿಗೆ ಮಗುವಿನ ಅಪಹರಣ ನಡೆಸಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಜಾತ್ರೆಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಚಲನವಲನ ಗಮನಿಸಿದ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.

Shwetha M

Leave a Reply

Your email address will not be published. Required fields are marked *