ಶುಕ್ರವಾರ ಮನೆಯಲ್ಲಿ ಜಗಳ ಆಡ್ತೀರಾ? – ಲಕ್ಷ್ಮಿ ದೇವಿ ಮುನಿಸಿಗೆ ಕಾರಣವಾಗುತ್ತೆ ಈ ಸಣ್ಣ ತಪ್ಪು

ಶುಕ್ರವಾರವನ್ನು ಸಂಪತ್ತಿನ ಅಧಿದೇವತೆಯಾದ ಮಹಾಲಕ್ಷ್ಮಿಗೆ ಸಮರ್ಪಿತವಾದ ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯು ಸ್ವಚ್ಛತೆ ಎಲ್ಲಿರುತ್ತದೆಯೋ ಅಲ್ಲಿ ನೆಲೆಸುತ್ತಾಳೆ ಎಂಬ ನಂಬಿಕೆಯಿದೆ. ಆದ್ದರಿಂದ ಶುಕ್ರವಾರ ಮುಂಜಾನೆ ಬೇಗ ಎದ್ದು ಅಭ್ಯಂಜನ ಸ್ನಾನ ಮಾಡಿ, ಮನೆಯನ್ನು ಶುದ್ಧಗೊಳಿಸಬೇಕು. ಮನೆಯ ಮುಖ್ಯ ದ್ವಾರಕ್ಕೆ ಅರಿಶಿನ-ಕುಂಕುಮ ಹಚ್ಚಿ, ತೋರಣ ಕಟ್ಟುವುದು ಶುಭದಾಯಕ. ಸಂಜೆ ಸಮಯದಲ್ಲಿ ತುಳಸಿ ಗಿಡದ ಮುಂದೆ ಮತ್ತು ದೇವರ ಕೋಣೆಯಲ್ಲಿ ತುಪ್ಪದ ದೀಪವನ್ನು ಹಚ್ಚಬೇಕು. ಈ ದಿನ ದಾರಿದ್ರ್ಯ ನೀಗಲು ಲಕ್ಷ್ಮಿ ಅಷ್ಟೋತ್ತರ ಅಥವಾ ಕನಕಧಾರಾ ಸ್ತೋತ್ರವನ್ನು ಪಠಿಸುವುದು ಅತ್ಯಂತ ಶ್ರೇಷ್ಠ. ಸುಮಂಗಲಿಯರಿಗೆ ಅಥವಾ ಬಡವರಿಗೆ ಬಿಳಿ ಬಣ್ಣದ ವಸ್ತುಗಳನ್ನು (ಹಾಲು, ಮೊಸರು, ಸಕ್ಕರೆ) ದಾನ ಮಾಡುವುದರಿಂದ ಶುಕ್ರ ಗ್ರಹದ ಬಲ ಹೆಚ್ಚಿ ಧನಾಗಮನವಾಗುತ್ತದೆ.
ಇದನ್ನೂ ಓದಿ: ದೇವರಿಗೆ ಇಟ್ಟ ಹೂವುಗಳನ್ನ ಕಸದ ಬುಟ್ಟಿಗೆ ಹಾಕ್ತೀರಾ? – ದೈವಕ ಶಕ್ತಿ ಇರೋ ಹೂವು ಒಣಗಿದ ನಂತ್ರ ಹೀಗೆ ಮಾಡಿ
ನಮ್ಮ ಸಣ್ಣ ತಪ್ಪುಗಳು ಲಕ್ಷ್ಮಿ ದೇವಿಯ ಮುನಿಸಿಗೆ ಕಾರಣವಾಗಬಹುದು. ಶುಕ್ರವಾರದಂದು ಅಪ್ಪಿತಪ್ಪಿಯೂ ಮನೆಯಲ್ಲಿ ಜಗಳ ಅಥವಾ ಕೌಟುಂಬಿಕ ಕಲಹಗಳು ನಡೆಯಬಾರದು. ಯಾರನ್ನೂ ನಿಂದಿಸುವುದು ಅಥವಾ ಅವಮಾನಿಸುವುದು ದಾರಿದ್ರ್ಯಕ್ಕೆ ನಾಂದಿಯಾಗುತ್ತದೆ. ಮುಖ್ಯವಾಗಿ ಈ ದಿನ ಮಾಂಸಾಹಾರ ಮತ್ತು ಮದ್ಯಪಾನದಿಂದ ದೂರವಿರಬೇಕು. ಶಾಸ್ತ್ರಗಳ ಪ್ರಕಾರ, ಈ ದಿನ ಸಾಲ ನೀಡುವುದು ಅಥವಾ ಸಾಲ ಪಡೆಯುವುದು ಎರಡೂ ಅಶುಭ. ಮನೆಯಲ್ಲಿ ಕತ್ತಲು ಇರಬಾರದು, ವಿಶೇಷವಾಗಿ ಸಂಧ್ಯಾಕಾಲದಲ್ಲಿ ಮಲಗುವುದು ಅಥವಾ ಕಸ ಗುಡಿಸುವುದು ಲಕ್ಷ್ಮಿಯನ್ನು ಮನೆಯಿಂದ ಹೊರಹಾಕಿದಂತೆ ಎಂದು ಹೇಳಲಾಗುತ್ತದೆ.
ಶುಕ್ರವಾರದ ಲಕ್ಷ್ಮಿ ಆರಾಧನೆಯಲ್ಲಿ ಕೆಂಪು ಬಣ್ಣದ ಹೂವುಗಳು, ವಿಶೇಷವಾಗಿ ಕಮಲ ಅಥವಾ ಗುಲಾಬಿಯನ್ನು ಅರ್ಪಿಸುವುದು ಅತ್ಯಂತ ಪ್ರಶಸ್ತ. ಜ್ಯೋತಿಷ್ಯದ ಪ್ರಕಾರ, ಶುಕ್ರವಾರದಂದು “ಓಂ ಶ್ರೀಂ ಮಹಾಲಕ್ಷ್ಮ್ಯೈ ನಮಃ” ಮಂತ್ರವನ್ನು 108 ಬಾರಿ ಜಪಿಸುವುದರಿಂದ ಜಾತಕದಲ್ಲಿರುವ ಶುಕ್ರ ಗ್ರಹದ ದೋಷಗಳು ನಿವಾರಣೆಯಾಗಿ ಐಶ್ವರ್ಯ ವೃದ್ಧಿಯಾಗುತ್ತದೆ. ಅಲ್ಲದೆ, ಈ ದಿನ ಸಂಜೆ ವೇಳೆ ಮನೆಯ ಹೊಸ್ತಿಲಿಗೆ ದೀಪವಿಟ್ಟು, ಕಪಾಟಿನಲ್ಲಿ ಅಥವಾ ಧನ ಸಂಗ್ರಹಿಸುವ ಜಾಗದಲ್ಲಿ ಶ್ರೀಯಂತ್ರ ಅಥವಾ ಗೋಮತಿ ಚಕ್ರವನ್ನು ಇರಿಸುವುದು ಆರ್ಥಿಕ ಸ್ಥಿರತೆಗೆ ಸಹಕಾರಿ. ಹೆಣ್ಣುಮಕ್ಕಳನ್ನು ಗೌರವದಿಂದ ಕಾಣುವುದು ಮತ್ತು ಅವರಿಗೆ ಸಿಹಿ ಪದಾರ್ಥಗಳನ್ನು ನೀಡುವುದು ಲಕ್ಷ್ಮಿ ದೇವಿಯನ್ನು ಪ್ರಸನ್ನಗೊಳಿಸುವ ಸುಲಭ ಮಾರ್ಗವಾಗಿದೆ.

ನೋಡಿರಿ

