ಪ್ರೇಮಿ ಜೊತೆ ಜೀವನ ನಡೆಸಲು ಒಪ್ಪದ ಪ್ರಿಯತಮೆಯ ಪತಿ- ಬೆಂಕಿ ಹಚ್ಚಿಕೊಂಡು ಲವರ್ಸ್ ಸಜೀವ ದಹನ..!

ಪ್ರೇಮಿ ಜೊತೆ ಜೀವನ ನಡೆಸಲು ಒಪ್ಪದ ಪ್ರಿಯತಮೆಯ ಪತಿ- ಬೆಂಕಿ ಹಚ್ಚಿಕೊಂಡು ಲವರ್ಸ್ ಸಜೀವ ದಹನ..!

ಆಕೆಗೆ ಇನ್ನೂ ಇಪ್ಪತ್ತರ ಹರೆಯ. ನರ್ಸಿಂಗ್ ಓದುತ್ತಿರುವಾಗಲೇ ಮದುವೆ ಬೇರೆ ಆಗಿತ್ತು. ನರ್ಸಿಂಗ್ ಓದುತ್ತಲೇ ಪಾರ್ಟ್‌ಟೈಮ್ ಕೆಲಸ ಬೇರೆ ಮಾಡಿಕೊಂಡಿದ್ದಳು. ಆಗಲೇ ಈಕೆಯ ಜೀವನ ಹಳಿ ತಪ್ಪಿದ್ದು. ಅಲ್ಲೊಬ್ಬ ಪ್ರೇಮಿಸಿಕ್ಕಿದ್ದ. ಅದು ಕೂಡಾ ಇಬ್ಬರೂ ಒಬ್ಬರಿಗೊಬ್ಬರು ಪ್ರಾಣ ನೀಡುವ ಪ್ರೇಮಿಗಳಾದರು. ಕೊನೆಗೂ ಇಬ್ಬರಿಗೂ ಜೊತೆಯಲ್ಲೇ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಅಂತಾ ಗೊತ್ತಾದ ಕೂಡಲೇ ಪ್ರೇಮಿಗಳಿಬ್ಬರೂ ಬೆಂಕಿಯಲ್ಲಿ ಜೊತೆಯಲ್ಲೇ ಬೆಂದು ಹೋಗಿದ್ದಾರೆ.

ಇದನ್ನೂ ಓದಿ: ಕೆಲಸಕ್ಕಾಗಿ ಕಾಲು ಹಿಡಿದ ಪಾಪಿಯಿಂದಲೇ ಕೊಲೆ – ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಆರೋಪಿ ಬಂಧನ

20 ವರ್ಷದ ಸೌಮಿನಿ ದಾಸ್. 29 ವರ್ಷದ ಅಬಿಲ್ ಅಬ್ರಾಹಂ. ಸೌಮಿನಿ ದಾಸ್ ಪಶ್ಚಿಮ ಬಂಗಾಳ ರಾಜ್ಯದವಳು. ಅಬಿಲ್ ಅಬ್ರಾಹಂ ಕೇರಳದವನು. ಬೆಂಗಳೂರಿನ ಕರಿಯಮ್ಮ ಆಗ್ರಹಾರ ಸಮೀಪದ ಖಾಸಗಿ ಕಾಲೇಜಿನಲ್ಲಿ 2ನೇ ವರ್ಷದ ನರ್ಸಿಂಗ್ ಓದುತ್ತಿದ್ದಳು ಸೌಮಿನಿ ದಾಸ್. ಎರಡು ವರ್ಷಗಳ ಹಿಂದೆಯೇ ಸೌಮಿನಿಗೆ ವಿವಾಹವಾಗಿತ್ತು. ಇನ್ನು ಸೌಮಿನಿ ದಾಸ್ ಓದುತ್ತಲೇ ನರ್ಸ್ ಸರ್ವೀಸ್ ಏಜೆನ್ಸಿಯಲ್ಲೂ ಕೆಲಸ ಮಾಡುತ್ತಿದ್ದಳು. ಇದೇ ವೇಳೆ ಈ ಏಜೆನ್ಸಿ ನಡೆಸುತ್ತಿದ್ದ ಕೇರಳ ಮೂಲದ ಅಬ್ರಾಹಂಗೆ ಕೆಲ ತಿಂಗಳ ಹಿಂದೆ ಸೌಮಿನಿಯ ಪರಿಚಯವಾಗಿತ್ತು. ರಜೆ ಇದ್ದಂತಹ ಸಂದರ್ಭದಲ್ಲಿ ಮತ್ತು ಬಿಡುವಿನಲ್ಲಿ ಸೌಮಿನಿ ಅಬ್ರಾಹಂ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದಳು. ಹಾಗೆ ಇಬ್ಬರೂ ಕೂಡಾ ಸ್ನೇಹಿತರಾಗಿದ್ದರು. 3 ತಿಂಗಳ ಹಿಂದೆ ಅಬ್ರಾಹಂನನ್ನು ತನ್ನ ಪತಿಗೆ ಸೌಮಿನಿ ಪರಿಚಯ ಮಾಡಿಸಿದ್ದಳು. ದಿನಗಳು ಕಳೆಯುತ್ತಾ ಇವರಿಬ್ಬರ ಪರಿಚಯ ಪ್ರೇಮಕ್ಕೆ ತಿರುಗಿತ್ತು ಕೆಲ ದಿನಗಳ ಹಿಂದೆ ಸೌಮಿನಿ ಕೋಲ್ಕತ್ತಾಗೆ ಹೋಗಿದ್ದಳು. ಇದಾದ ಬಳಿಕ ಬೆಂಗಳೂರಿಗೆ ಬಂದಿದ್ದಳು. ನಂತರ ಇಬ್ಬರೂ ಫ್ಲ್ಯಾಟ್‌ವೊಂದನ್ನು ಬಾಡಿಗೆಗೆ ಪಡೆದಿದ್ದರು. ಬಳಿಕ ಸೌಮಿನಿ ಪ್ರೇಮದ ವಿಚಾರವನ್ನು ತನ್ನ ಪತಿಗೆ ತಿಳಿಸಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದೆ ಎನ್ನಲಾಗಿದೆ. ಈ ವಿಚಾರಕ್ಕೆ ಸೌಮಿನಿ ಹಾಗೂ ಅಬ್ರಾಹಂ ಇಬ್ಬರೂ ಸಾಯಲು ತೀರ್ಮಾನ ಮಾಡಿದ್ದಾರೆ. ಭಾನುವಾರ ಮಧ್ಯಾಹ್ನ ವೇಳೆಗೆ ಬಾಡಿಗೆ ಪಡೆದಿದ್ದ ಅಪಾರ್ಟ್ಮೆಂಟ್ನಲ್ಲಿ ಪೆಟ್ರೋಲ್  ಸುರಿದುಕೊಂಡು ಪ್ರೇಮಿಗಳಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಫ್ಲ್ಯಾಟ್‌ನಲ್ಲಿ ಬೆಂಕಿ ಕಂಡು ಅಪಾರ್ಟ್ಮೆಂಟ್ ನಿವಾಸಿಗಳು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಬೆಂಕಿಯಲ್ಲಿ ಬೆಂದು ಸೌಮಿನಿ ಕೊನೆಯುಸಿರೆಳೆದಿದ್ದಾಳೆ. ಭಾಗಶಃ ಸುಟ್ಟು ಹೋಗಿದ್ದ ಅಬ್ರಾಹಂನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅಬ್ರಾಹಂ ಕೂಡಾ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Sulekha