ಚುನಾವಣಾ ಹೊಸ್ತಿಲಲ್ಲೇ ಐಟಿ, ಲೋಕಾಯುಕ್ತ ರೇಡ್ – ಕಂತೆ ಕಂತೆ ಹಣ, ಚಿನ್ನ, ಬೆಳ್ಳಿ ಪತ್ತೆ!

ಚುನಾವಣಾ ಹೊಸ್ತಿಲಲ್ಲೇ ಐಟಿ, ಲೋಕಾಯುಕ್ತ ರೇಡ್ – ಕಂತೆ ಕಂತೆ ಹಣ, ಚಿನ್ನ, ಬೆಳ್ಳಿ ಪತ್ತೆ!

ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಾವು ರಂಗೇರುತ್ತಿದೆ. ನಾಯಕರ ನಡುವೆ ವಾಗ್ಬಾಣಗಳು ನಡೆಯುತ್ತಿದ್ರೆ ಅಭ್ಯರ್ಥಿಗಳೆಲ್ಲಾ ಮತದಾರರ ಮನ ಗೆಲ್ಲೋಕೆ ನಾನಾ ಕಸರತ್ತು ನಡೆಸುತ್ತಿದ್ದಾರೆ. ಇದರ ನಡುವೆ ರಾಜ್ಯದಲ್ಲಿಂದು ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು, ಲೋಕಾಯುಕ್ತ ಅಧಿಕಾರಿಗಳು ಹಲವರಿಗೆ ಶಾಕ್ ಕೊಟ್ಟಿದ್ದಾರೆ.

ಬೆಂಗಳೂರು, ದಾವಣಗೆರೆ, ಕೋಲಾರ, ಬೀದರ್, ಚಿತ್ರದುರ್ಗ ಸೇರಿದಂತೆ ಅನೇಕ ಕಡೆ ದಾಳಿ ನಡೆದಿದ್ದು ಹಲವು ಅಧಿಕಾರಿಗಳ ಮನೆಯಲ್ಲಿ ಚಿನ್ನ, ನಗದು, ಕಡತ ಸಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂರು ಕಡೆ ಐಟಿ ದಾಳಿ ನಡೆದಿದ್ದು ಬೆಳ್ತಂಗಡಿಯ ಮಾಜಿ ಸಚಿವ, ಕಾಂಗ್ರೆಸ್ ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರಗೌಡ ಮನೆಯಲ್ಲಿ 30 ಲಕ್ಷ ಹಣ ಪತ್ತೆಯಾಗಿದೆ. ಬೆಳ್ತಂಗಡಿ ತಾಲೂಕು ಆಸ್ಪತ್ರೆ ಬಳಿಯಿರುವ ಗಂಗಾಧರ ಗೌಡ ಮನೆ, ಪ್ರಸನ್ನ ಇನ್ಸ್ಟಿಟ್ಯೂಷನ್​​, ಇಂದುಬೆಟ್ಟುವಿನ ಮನೆಯಲ್ಲಿ 20ಕ್ಕೂ ಅಧಿಕ ಐಟಿ ಅಧಿಕಾರಿಗಳ ತಂಡದಿಂದ ಪರಿಶೀಲನೆ ಮುಂದುವರೆದಿದೆ.

ಇದನ್ನೂ ಓದಿ : ರಣಕಣದಲ್ಲಿ ಮತಶಿಕಾರಿಗೆ ಬಿಜೆಪಿ ಮೋದಿ ಅಸ್ತ್ರ – ಎಲ್ಲೆಲ್ಲಿ ಪ್ರಧಾನಿಯ ಪ್ರಚಾರದ ಅಬ್ಬರ?

ಬಿಬಿಎಂಪಿ ಎಡಿಟಿಪಿ ಗಂಗಾಧರಯ್ಯ ಮನೆಯಲ್ಲಿ ಪರಿಶೀಲನೆ ಮುಂದುವರೆದಿದ್ದು ಮಹಾಲಕ್ಷ್ಮಿ ಲೇಔಟ್ ನಿವಾಸದಲ್ಲಿ ನಗದು, ಚಿನ್ನಾಭರಣ,ಬೆಳ್ಳಿ ಆಭರಣಗಳು ಪತ್ತೆಯಾಗಿವೆ. ಲೋಕಾಯುಕ್ತ ತಂಡ ಹಣ ಎಣಿಕೆ ಕಾರ್ಯದಲ್ಲಿ ತೊಡಗಿದೆ. ವಿದೇಶಿ ಕರೆನ್ಸಿ ಕೂಡ ಮನೆಯಲ್ಲಿ ಪತ್ತೆಯಾಗಿದ್ದು 80 ಲಕ್ಷ ನಗದು ಹಣ, 50 ಲಕ್ಷ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ.

ಹಾಗೇ ಕೋಲಾರ ಜಿಲ್ಲೆ ಹಲವೆಡೆ ಲೋಕಾಯುಕ್ತ ದಾಳಿ ನಡೆದಿದೆ. ತಾ.ಪಂ. ಇಒ ವೆಂಕಟೇಶಪ್ಪ ಮನೆಗಳಲ್ಲಿ ಪರಿಶೀಲನೆ ಮುಂದುವರಿದಿದೆ. ಇಓ ವೆಂಕಟೇಶಪ್ಪ ಅವರಿಗೆ ಸೇರಿದ ಮನೆ, ಗೋಡೋನ್, ಹಾರ್ಡ್ ವೇರ್ ಶಾಪ್, ಕೋಳಿಫಾರಂ, ಪಾರ್ಮ್ ಹೌಸ್, ಐದಕ್ಕೂ ಹೆಚ್ಚು ಖಾಲಿ ನಿವೇಶನಗಳು, ಚಿನ್ನದ ಒಡವೆಗಳು, ಸೇರಿದಂತೆ ಮನೆಯಲ್ಲಿ ಸಾವಿರಾರು ರೂಪಾಯಿ ನಗದು ಪತ್ತೆಯಾಗಿದೆ. ನಾಲ್ಕು ಅಧಿಕಾರಿಗಳ ತಂಡದಿಂದ ಪರಿಶೀಲನೆ ಮುಂದುವರೆದಿದೆ.

ಇನ್ನು ಶಿವಮೊಗ್ಗ ನಗರದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವನ್ಯಜೀವಿ ವಿಭಾಗದ ನಿವೃತ್ತ ಡಿಸಿಎಫ್​ ನಾಗರಾಜ್ ಮನೆಗಳ ಮೇಲೆ ರೇಡ್ ಆಗಿದೆ. ಶಿವಮೊಗ್ಗ ನಗರ ಸಾಗರ ರಸ್ತೆಯ ಬಳಿ ಮನೆ, ಫಾರ್ಮ್​ ಹೌಸ್​, ಶಿವಮೊಗ್ಗದ ಗುಡ್ಲಕ್​​ ಸರ್ಕಲ್​ ಬಳಿಯ ವಿಸ್ಮಯ ಕಾಂಪ್ಲೆಕ್ಸ್ ಹಾಗೂ ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿರುವ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗುತ್ತಿದೆ. ವಿಜಯೇಂದ್ರ ನಾಮಪತ್ರ ಸಲ್ಲಿಕೆ ವೇಳೆ ನಾಗರಾಜ್ ಬಿಜೆಪಿ ಸೇರಿದ್ದರು.

suddiyaana