ಬೋನಿಗೆ ಬೀಳುತ್ತಿಲ್ಲ, ಬೃಂದಾವನವೂ ತೆರೆಯುತ್ತಿಲ್ಲ – ನಷ್ಟದಲ್ಲೇ ನಡೆಯುತ್ತಿದೆ ಚಿರತೆ ಬಂತು ಚಿರತೆ ಕಥೆ
ಬೃಂದಾವನದಲ್ಲಿ ಮುಂದುವರೆದ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ
![ಬೋನಿಗೆ ಬೀಳುತ್ತಿಲ್ಲ, ಬೃಂದಾವನವೂ ತೆರೆಯುತ್ತಿಲ್ಲ – ನಷ್ಟದಲ್ಲೇ ನಡೆಯುತ್ತಿದೆ ಚಿರತೆ ಬಂತು ಚಿರತೆ ಕಥೆಬೃಂದಾವನದಲ್ಲಿ ಮುಂದುವರೆದ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ](https://suddiyaana.com/wp-content/uploads/2022/11/chirathe.jpg)
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಪ್ರವಾಸಿ ತಾಣವಾಗಿರುವ ಕೆಆರ್ಎಸ್ ಬೃಂದಾವನದಲ್ಲಿ ಕಳೆದ 15 ದಿನಗಳಿಂದ ಚಿರತೆಯದ್ದೇ ಸುದ್ದಿ. ಚಿರತೆ ಇದೆ ಅನ್ನೋ ಕಾರಣಕ್ಕಾಗಿ ನವೆಂಬರ್ 6ರಿಂದ ಬೃಂದಾವನ ಉದ್ಯಾನವನವನ್ನು ಬಂದ್ ಮಾಡಲಾಗಿದೆ. ಇದರಿಂದ ಕಾವೇರಿ ನೀರಾವರಿ ನಿಗಮಕ್ಕೆ ಅಂದಾಜು 50 ಲಕ್ಷ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದೆ. ಬೃಂದಾವನ ಬಂದ್ ಆಗಿ 15 ದಿನಗಳೇ ಕಳೆದರೂ ಚಿರತೆ ಕೂಡಾ ಸೆರೆಸಿಕ್ಕಿಲ್ಲ. ಹೀಗಾಗಿ ಅರಣ್ಯ ಇಲಾಖೆ ವಿರುದ್ಧ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಶಾಂತ ಸ್ವಭಾವದ ದಸರಾ ಆನೆ ಗೋಪಾಲಸ್ವಾಮಿ ಇನ್ನು ನೆನಪು ಮಾತ್ರ
ಅಕ್ಟೋಬರ್ 21ರಿಂದ ಬೃಂದಾವನ ಗಾರ್ಡನ್ನಲ್ಲಿ ನಾಲ್ಕು ಬಾರಿ ಚಿರತೆ ಕಾಣಿಸಿಕೊಂಡಿದೆ. ಹೀಗಾಗಿ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ನವೆಂಬರ್ 6ರಿಂದ ಚಿರತೆ ಸೆರೆ ಹಿಡಿಯುವವರೆಗೂ ಪ್ರವಾಸಿಗರ ಪ್ರವೇಶಕ್ಕೆ ನಿರ್ಭಂಧ ಹೇರಿದ್ದರು. ಆದ್ರೆ ಬೃಂದಾವನ ಬಂದ್ ಮಾಡಿ 15 ದಿನಗಳು ಕಳೆದಿವೆ. ಚಿರತೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಮಾತ್ರ ಸಕ್ಸಸ್ ಆಗಿಲ್ಲ. ಇದರಿಂದ ನಷ್ಟ ಆಗಿದ್ದು ಕಾವೇರಿ ನೀರಾವರಿ ನಿಗಮಕ್ಕೆ. ಯಾಕೆಂದರೆ, ಬೃಂದಾವನಕ್ಕೆ ವಾರದ ದಿನಗಳಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡುತ್ತಾರೆ. ಇನ್ನು ವಾರಾಂತ್ಯ, ಸರ್ಕಾರಿ ರಜಾ ದಿನಗಳಲ್ಲಿ 5 ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದರಿಂದಾಗಿ ಕಳೆದ 15 ದಿನಗಳಿಂದ ಅಂದಾಜು 50 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಬೃಂದಾವನಕ್ಕೆ ತಲಾ 50 ರೂಪಾಯಿ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. 15 ದಿನಗಳಿಂದ ಪ್ರವೇಶ ಬಂದ್ ಆಗಿರುವ ಕಾರಣ ನಿಗಮಕ್ಕೆ ಆದಾಯ ಬರುತ್ತಿಲ್ಲ. ಮತ್ತೊಂದೆಡೆ ಇಷ್ಟು ದಿನ ಕಳೆದರೂ ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಸದ್ಯ ನಿಗಮದ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.