25 ವರ್ಷಗಳ ಹಿಂದೆ ಮೃತಪಟ್ಟಿದ್ದ ವ್ಯಕ್ತಿ ದಿಢೀರ್ ಪ್ರತ್ಯಕ್ಷ – ಆಸ್ತಿ ಮಾರಾಟದ ವೇಳೆ ಗೊತ್ತಾಗಿದ್ದು ಭಯಾನಕ ಸತ್ಯ

25 ವರ್ಷಗಳ ಹಿಂದೆ ಮೃತಪಟ್ಟಿದ್ದ ವ್ಯಕ್ತಿ ದಿಢೀರ್ ಪ್ರತ್ಯಕ್ಷ – ಆಸ್ತಿ ಮಾರಾಟದ ವೇಳೆ ಗೊತ್ತಾಗಿದ್ದು ಭಯಾನಕ ಸತ್ಯ

ಹಣ, ಹೆಣ್ಣು, ಹೊನ್ನು ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತೆ ಅನ್ನೋ ಮಾತಿದೆ. ಜನರ ಮನಸ್ಥಿತಿಯನ್ನ ನೋಡಿಯೇ ಹಿರಿಯರು ಈ ಮಾತು ಲೋಕಾರೂಢಿಯಾಗಿದೆ. ಬೇರೆಯವರ ಸಂಪತ್ತಿನ ಮೇಲೆ ಆಸೆ ಪಡುವ ಮನಷ್ಯ ತನ್ನ ಆಸೆ ಈಡೇರಿಸಿಕೊಳ್ಳಲು ಯಾವ ಮಟ್ಟಕ್ಕೆ ಬೇಕಾದ್ರೂ ಇಳಿಯುತ್ತಾನೆ. ಸದ್ಯ ಯಾದಗಿರಿಯಲ್ಲೂ ಅಂಥಾದ್ದೇ ಘಟನೆ ನಡೆದಿದೆ.

ಆ ವ್ಯಕ್ತಿ ಸಾವನ್ನಪ್ಪಿ ಬರೋಬ್ಬರಿ 25 ವರ್ಷಗಳೇ ಕಳೆದಿತ್ತು. ಆದ್ರೆ ಅದೇ ವ್ಯಕ್ತಿಯ ಹೆಸರಿನ ಮತ್ತೋರ್ವ ವ್ಯಕ್ತಿಯನ್ನ ಹುಟ್ಟು ಹಾಕಿ ಆತನ ಆಸ್ತಿ ಕಬಳಿಸಲು ಯತ್ನಿಸಲಾಗಿದೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಿಂತನಹಳ್ಳಿ ಗ್ರಾಮದ ನಿವಾಸಿ ನರಸಪ್ಪ ಎಂಬಾತ ಕಳೆದ 25 ವರ್ಷಗಳ ಹಿಂದೆ ಮೃತಪಟ್ಟಿದ್ದಾನೆ. ಮೃತ ನರಸಪ್ಪನ ಹೆಸರಿಗೆ ಸುಮಾರು 3 ಎಕರೆ 28 ಗುಂಟೆ ಜಮೀನು ಇದೆ. ಆದರೆ ನರಸಪ್ಪ ಮೃತಪಟ್ಟು 25 ವರ್ಷಗಳಾಗಿದ್ರೂ ಆತನ ಕುಟುಂಬಸ್ಥರು ಆಸ್ತಿ ವರ್ಗಾವಣೆ ಮಾಡಿಸಿಕೊಂಡಿರಲಿಲ್ಲ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿದ್ದ ಅದೇ ಗ್ರಾಮದ ಗಂಗಪ್ಪ ಎಂಬಾತ ನಕಲಿ ವ್ಯಕ್ತಿಯನ್ನ ಸೃಷ್ಟಿಸಿ ಆಸ್ತಿ ವರ್ಗಾವಣೆಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದಾನೆ.

ಇದನ್ನೂ ಓದಿ : ಹಸಿವಾಯ್ತು ಅಂತಾ ಬಾಂಬ್‌ ಕಚ್ಚಿದ! – ಎಣ್ಣೆ ಮತ್ತಲ್ಲಿ ಇದೆಲ್ಲಾ ಬೇಕಿತ್ತಾ?

ಯಾದಗಿರಿಯ ಹೆಡಗಿಮುದ್ರಾ ಗ್ರಾಮದ ನಿವಾಸಿ ನರಸಪ್ಪ ಎಂಬ ನಕಲಿ ವ್ಯಕ್ತಿಯನ್ನ ಸೃಷ್ಟಿಸಿ ಗಂಗಪ್ಪ ನಕಲಿ ದಾಖಲೆಗಳನ್ನ ಸೃಷ್ಟಿ ಮಾಡಿ ಇದೆ ಗ್ರಾಮದ ಸುಭಾಷ್ ಎಂಬಾತನಿಗೆ ಮಾರಾಟ ಮಾಡಿದ್ದಾನೆ. ಹೆಡಗಿಮುದ್ರ ಗ್ರಾಮದ ನರಸಪ್ಪನೇ ಜಮೀನಿನ ಮಾಲೀಕ ಅಂತ ಸುಭಾಷ್‍ಗೆ ನಂಬಿಸಿದ್ದಾನೆ. ಬಳಿಕ ಸುಮಾರು ಮೂರು ಲಕ್ಷ ಹಣವನ್ನ ಪಡೆದು ಸುಭಾಷ್ ಗೆ ಮಾರಾಟ ಮಾಡಿದ್ದಾನೆ. ಆದ್ರೆ ಇಷ್ಟೆಲ್ಲ ನಡೆದ್ರೂ ಮೃತ ನರಸಪ್ಪನ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ಇಲ್ಲ. ಇನ್ನು ಬೆಟ್ಟದ ಮದ್ಯೆ ಜಮೀನು ಇರೋ ಕಾರಣಕ್ಕೆ ನರಸಪ್ಪನ ಕುಟುಂಬಸ್ಥರು ಉಳುಮೆ ಕೂಡ ಮಾಡದೆ ಪಾಳು ಬಿಟ್ಟಿದ್ದಾರೆ. ಯಾವಾಗ ನಕಲಿ ವ್ಯಕ್ತಿ ಸೃಷ್ಟಿ ಮಾಡಿ ಜಮೀನು ಮಾರಾಟ ಮಾಡಿ ರಿಜಿಸ್ಟರ್ ಮಾಡಿ ಬಳಿಕ ಮುಟೇಷನ್ ವೇಳೆ ಅಧಿಕಾರಿಗಳು ಗ್ರಾಮಕ್ಕೆ ಬಂದ ಮೇಲೆ ಗಂಗಪ್ಪನ ಕಳ್ಳಾಟ ಗೊತ್ತಾಗಿದೆ. ಇನ್ನು ಈ ಆಸ್ತಿ ಮೃತ ನರಸಪ್ಪನಿಗೆ 1955 ರಲ್ಲಿ ಸರ್ಕಾರದಿಂದ ನೀಡಲಾಗಿದೆ. ಆದ್ರೆ ನರಸಪ್ಪ ಸತ್ತ ಮೇಲೆ ಈ ಆಸ್ತಿ ಹಿಂದೆ ಕಳ್ಳರು ಬಿದ್ದಿದ್ದಾರೆ.

ಗಂಗಪ್ಪನ ಕಳ್ಳಾಟ ಬಯಲಾಗ್ತಿದ್ದಂತೆ ನರಸಪ್ಪನ ಕುಟುಂಬಸ್ಥರು ಹೌಹಾರಿದ್ದಾರೆ. ಪೊಲೀಸ್ ಠಾಣೆ, ಕಚೇರಿ ಕಚೇರಿ ಅಲೆದಾಡುತ್ತಿದ್ದಾರೆ. ನಕಲಿ ವ್ಯಕ್ತಿಯನ್ನ ಸೃಷ್ಟಿಸಲು ಮಹಾ ಪ್ಲಾನ್ ರೂಪಿಸಿದ ಕಿಲಾಡಿ ಗಂಗಪ್ಪ ಸಿಕ್ಕಿ ಬಿದ್ದಿದೆ ರೋಚಕ ತಿರುವು. ಗ್ರಾಮದಲ್ಲಿ ಯಾರಿಗೂ ಅನುಮಾನ ಬಾರದ ಹಾಗೇ ಹೆಡಗಿಮುದ್ರಾ ಗ್ರಾಮದ ನಕಲಿ ನರಸಪ್ಪ ಎಂಬಾತನನ್ನು ಮಾಡಿ ಗ್ರಾಮದ ಸುಭಾಷ್ ಗೆ 2 ಲಕ್ಷದ 80 ಸಾವಿರಕ್ಕೆ ಆಸ್ತಿ ಮಾರಾಟದ ದಾಖಲೆಗಳನ್ನ ಸಿದ್ದಪಡಿಸಿದ್ದರು. ಅಧಿಕಾರಿಗಳು ಗ್ರಾಮಕ್ಕೆ ಬಂದಾಗ ಆತನ ಕಳ್ಳಾಟ ಬಯಲಾಗಿದೆ.

ಇನ್ನೂ ಈ ಬ್ರೋಕರ್ ಗಂಗಪ್ಪ ಒಂದೇ ಕುಟುಂಬಕ್ಕೇ ಈ ರೀತಿ ವಂಚನೆ ಮಾಡಿಲ್ಲ. ಹತ್ತಾರು ಜನರ ಆಸ್ತಿಯನ್ನ ಅನ್ಯರಿಗೆ ಪರಭಾರೆ ಮಾಡಿಸಿದ್ದಾನೆ ಎಂಬ ಆರೋಪವು ಕೇಳಿ ಬರುತ್ತಿದೆ. ಇನ್ನೂ ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮೃತ ನರಸಪ್ಪನ ಮೊಮ್ಮಗ ಚಂದ್ರಶೇಖರ್ ಪೆಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಯಾದಗಿರಿ ನಗರ ಠಾಣೆಯಲ್ಲಿ ನರಸಪ್ಪನ ಮೊಮ್ಮಗ ಚಂದ್ರಶೇಖರ್ ಆಸ್ತಿ ಕಬಳಿಕೆಗೆ ಯತ್ನಿಸಿದ ಗಂಗಪ್ಪ, ಸುಭಾಷ್, ನರಸಪ್ಪ ಹಾಗೂ ಗ್ಯಾಂಗ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬ್ರೋಕರ್ ಗಂಗಪ್ಪ ಹಾಗೂ ಗ್ಯಾಂಗ್ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ಒತ್ತಾಯ ಮಾಡ್ತಿದ್ದಾರೆ. ಇನ್ನು ಗ್ರಾಮದ ಜನರು ಸಹ ಮೃತ ನರಸಪ್ಪನ ಕುಟುಂಬಸ್ಥರ ಜೊತೆಗೆ ನಿಂತಿದ್ದಾರೆ. ಅನ್ಯಾಯಕ್ಕೆ ಒಳಗಾಗಿ ನ್ಯಾಯಕ್ಕಾಗಿ ಅಲೆಯುತ್ತಿರುವ ನರಸಪ್ಪನ ಕುಟುಂಬಸ್ಥರಿಗೆ ನ್ಯಾಯ ಒದಗಿಸಿ ಅಂತ ಮನವಿ ಮಾಡುತ್ತಿದ್ದಾರೆ.

Shantha Kumari