‘ಕನ್ನಡ ಪ್ರೇಮ ತೋರಿಸಲು ಕುಮಾರಸ್ವಾಮಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ’ – ಬಿಜೆಪಿ ಟ್ವೀಟ್

‘ಕನ್ನಡ ಪ್ರೇಮ ತೋರಿಸಲು ಕುಮಾರಸ್ವಾಮಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ’ – ಬಿಜೆಪಿ ಟ್ವೀಟ್

ಬೆಂಗಳೂರು: ಸದಾ ಕಾಲ ಸದಾರಮೆ ನಾಟಕವಾಡುವ ಎಚ್.ಡಿ.ಕುಮಾರಸ್ವಾಮಿ ಕನ್ನಡಿಗರ ಬಗ್ಗೆ ಎಷ್ಟು ಕಾಳಜಿ ತೋರಿದ್ದಾರೆ ಅನ್ನೋದು ಎಲ್ಲರಿಗೂ ಅರಿವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ದ ಬಿಜೆಪಿ ವಾಗ್ದಾಳಿ ನಡೆಸಿದೆ.

1975 ರಿಂದ ಕೆಎಂಎಫ್ ಅಭಿವೃದ್ಧಿ ಹೊಂದುತ್ತಿದೆ. ಅಂತೆಯೇ ಗುಜರಾತ್ ಸಹಕಾರ ಒಕ್ಕೂಟವೂ ಪ್ರಗತಿಯ ಹಾದಿಯಲ್ಲಿದೆ. ‘ಅಮುಲ್’ ಹಾಗೂ ‘ನಂದಿನಿ’ ಒಂದಾದರೆ ಹಾಲು ಉತ್ಪಾದಕರಿಗೆ ಇನ್ನಷ್ಟು ಅನುಕೂಲವಾಗುತ್ತದೆ’ ಎಂದು ಅಮಿತ್ ಶಾ ಮಂಡ್ಯದಲ್ಲಿ ಹೇಳಿದ್ದರು. ಶಾ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರೋಧಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿ ನಂದಿನಿ ವಿಚಾರಕ್ಕೆ ಬಂದರೆ ಬಿಜೆಪಿ ಭಸ್ಮವಾಗಲಿದೆ ಎಂದು ಕಿಡಿಕಾರಿದ್ದರು. ಈ ಹಿನ್ನೆಲೆ ರಾಜ್ಯ ಬಿಜೆಪಿ, ಹೆಚ್ ಡಿಕೆ ವಿರುದ್ದ ಸರಣಿ ಟ್ವೀಟ್ ಮಾಡಿದೆ.

‘ಸದಾ ಕಾಲ ಸದಾರಮೆ ನಾಟಕವಾಡುವ  ಎಚ್.ಡಿ.ಕುಮಾರಸ್ವಾಮಿ  ಕನ್ನಡಿಗರ ಬಗ್ಗೆ ಎಷ್ಟು ಕಾಳಜಿ ತೋರಿದ್ದಾರೆ ಅನ್ನೋದು ಎಲ್ಲರಿಗೂ ಅರಿವಿದೆ. ಮಂಡ್ಯದ ಜನತೆಯಂತೂ ಇದಕ್ಕೆ ಖುದ್ದು ಸಾಕ್ಷಿ. ಮಂಡ್ಯದ ಮೈಶುಗರ್ ಮುಚ್ಚಿದ ಕಥೆ, 8,000 ಕೋಟಿ ರೂ.ಗಳ ಮೊತ್ತದ ಯೋಜನೆಗಳ ಗಾಳಿಪಟ ಹಾರಿಸಿದ ಕಥೆ – ಇವುಗಳ ನೈಜ ಚಿತ್ರಣದ ಅರಿವಿರದ ಕನ್ನಡಿಗರೇ ಇಲ್ಲ’ ಎಂದು ಬಿಜೆಪಿ ಟ್ವೀಟ್ ಮಾಡಿ ಕಿಡಿಕಾರಿದೆ.

ಇದನ್ನೂ ಓದಿ: 2030ಕ್ಕೆ ಭಾರತದಲ್ಲಿ ವಿಶ್ವದ ಅತಿದೊಡ್ಡ “ಹಸಿರು ರೈಲ್ವೆ”

ಹಾಸನದಲ್ಲಿ ಅಣ್ಣ, ಮಂಡ್ಯದಲ್ಲಿ ಮಗ, ರಾಮನಗರದಲ್ಲಿ ಖುದ್ದು ದಂಪತಿಗಳು ಕೋಟೆ ಕಟ್ಟಿ ಮೆರೆಯುವ ಹುನ್ನಾರದಲ್ಲಿ, ಕಾರ್ಯಕರ್ತರಿಗೆ ಕ್ಯಾ-ರೇ ಎನ್ನದಿರುವುದು, ಹೆಗಲು ಕೊಟ್ಟ ಕಾರ್ಯಕರ್ತರಿಗೆ ಕೈ ಕೊಟ್ಟಿದ್ದು ಎಲ್ಲವನ್ನು ಜನ ಕಂಡಿದ್ದಾರೆ. ಮಂಡ್ಯ, ರಾಮನಗರದ ಅವರದೆ ಪಕ್ಷದ ಕಾರ್ಯಕರ್ತರು ಕುಮಾರಸ್ವಾಮಿಗೆ ಕನ್ನಡಿಗರಂತೆ ತೋರುವುದಿಲ್ಲವೇ? ಎಂದು ಬಿಜೆಪಿ ಪ್ರಶ್ನಿಸಿದೆ.

ಈ ಮೂರೂ ಜಿಲ್ಲೆಗಳಲ್ಲಿ ಮೆಗಾ ಡೈರಿ ಇದ್ದದ್ದು ಹಾಸನದಲ್ಲಿ ಮಾತ್ರ. ಅದೂ ಬಿಜೆಪಿ ಸರ್ಕಾರದ ಕೊಡುಗೆ. ಮಂಡ್ಯದಲ್ಲಿ ನಮ್ಮ ಸರ್ಕಾರ ಮೊನ್ನೆಯಷ್ಟೇ ಮೆಗಾ ಡೈರಿಯನ್ನು ಉದ್ಘಾಟಿಸಿದೆ. “ನಂದಿನಿ” ವಿಲೀನದ ಬಗ್ಗೆ ಯಾರೂ ಏನು ಹೇಳದಿದ್ದರೂ, ಯಾವತ್ತೂ ಇಲ್ಲದ ಕನ್ನಡ ಪ್ರೇಮ ತೋರಿಸಲು ಕುಮಾರಸ್ವಾಮಿ ಅವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಬಿಜೆಪಿ ಆಕ್ರೋಶ ಹೊರಹಾಕಿದೆ.

MANMULನಲ್ಲಿ ಜೆಡಿಎಸ್ ನಾಯಕರದ್ದೇ ಕಾರುಬಾರಂತೆ! ಅಲ್ಲಿನ ತಾಂಡವವಾಡುತ್ತಿರುವ ಅವ್ಯವಹಾರಗಳ ಬಗ್ಗೆ ಕುಮಾರಸ್ವಾಮಿ ಅವರಿಗೆ ದಿವ್ಯ ಮೌನ ವಹಿಸಿದ್ದಾರೆ. ಮೈಶುಗರ್ ಸಕ್ಕರೆ ಕಾರ್ಖಾನೆಗೆ ಬೀಗ ಜಡಿದು ಮಂಡ್ಯದ ಲಕ್ಷಾಂತರ ಜನರ ಹೊಟ್ಟೆಯ ಮೇಲೆ ಹೊಡೆದವರು ಎಚ್.ಡಿ.ಕುಮಾರಸ್ವಾಮಿ ಅರವರಲ್ಲವೇ? ಎಂದು ಪ್ರಶ್ನಿಸಿದೆ.

2019ರ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಸೋಲುವ ಮುನ್ನ ಚುನಾವಣಾ ಗಿಮಿಕ್ ಆಗಿ ಘೋಷಿಸಿದ್ದ 8,000 ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗಳು ಮಂಡ್ಯದ ಜನರ ದಿಕ್ಕುತಪ್ಪಿಸಲು ಎಚ್.ಡಿ.ಕುಮಾರಸ್ವಾಮಿಯವರು ನೀರಿನ ಮೇಲೆ ಗೀಚಿದ ಅಕ್ಷರಗಳು. ಇದು ಸ್ವಾಭಿಮಾನಿ ಮಂಡ್ಯದ ಕನ್ನಡಿಗರಿಗೆ ಎಚ್.ಡಿ.ಕುಮಾರಸ್ವಾಮಿ ಅವರು ಮಾಡಿದ ಅವಮಾನ ಎಂದು ಟ್ವೀಟ್ ಮಾಡಿದೆ.

ನಮ್ಮ ಸರ್ಕಾರ ರಾಮನಗರಕ್ಕೆ ವಿಶ್ವದರ್ಜೆಯ ರೇಷ್ಮೆ ಮಾರುಕಟ್ಟೆ, ಮಾಗಡಿಯಲ್ಲಿ ಕರ್ನಾಟಕ ಸಂಸ್ಕೃತ ವಿವಿಯ ಹೊಸ ಆವರಣ ಕೊಟ್ಟಿದೆ. ರಾಮನಗರವನ್ನು ಸ್ವಂತ ರಾಜಕೀಯ ಲಾಭಕ್ಕಾಗಿ ಜಿಲ್ಲೆಯೆಂದು ಘೋಷಿಸಿ ಬಿಡದಿಯಲ್ಲಿ ಐಷಾರಾಮಿ ಜೀವನ ಸಾಗಿಸುತ್ತ, ಸ್ವತಃ ದಂಪತಿಗಳೇ ಶಾಸಕರಾಗಿದ್ದಾರೆ ಹೊರತಾಗಿ ಜಿಲ್ಲೆಗೆ ಬೇರೇನು ಮಾಡಿದ್ದೀರಿ? ಎಂದು ಪ್ರಶ್ನಿಸಿದೆ.

ನಮ್ಮ ಸರ್ಕಾರ ರಾಮನಗರದ ರಾಮದೇವರಬೆಟ್ಟದಲ್ಲಿ ಅಯೋಧ್ಯೆ ಮಾದರಿಯಂತೆ ಶ್ರೀ ರಾಮಚಂದ್ರನ ದೇವಸ್ಥಾನವನ್ನು ನಿರ್ಮಿಸಲಿದೆ. ಮಾಗಡಿ ಕೆಂಪಾಪುರದಲ್ಲಿ ಕೆಂಪೇಗೌಡರ ಸ್ಮಾರಕ, ಮಾಗಡಿ ವೀರಾಪುರದಲ್ಲಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಸ್ಮಾರಕ ಮತ್ತು ಮಾಗಡಿ ಬಾನಂದೂರಿನಲ್ಲಿ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಸ್ಮಾರಕ ನಿರ್ಮಿಸಲಿದೆ. ಈ ಮಹನೀಯರನ್ನು ಎಂದಿಗೂ ನೆನೆಯದೆ, ಕನ್ನಡ ದ್ವೇಷಿ ಟಿಪ್ಪು ಸುಲ್ತಾನನ ಹೆಸರಿನಲ್ಲಿ ವಿಶ್ವವಿದ್ಯಾಲಯ ತೆರಿಯಲಿದ್ದೇವೆ ಎಂದು ಘೋಷಿಸುವ ಮೂಲಕ ಕನ್ನಡ ಕುಲ ಕೋಟಿಯ ಭಾವನೆಗಳಿಗೆ ಧಕ್ಕೆ ತಂದಿದ್ದೀರಿ. ಇಷ್ಟೆಲ್ಲಾ ಹಳವಂಡ ಮಾಡಿಕೊಂಡಿರುವ ಎಚ್.ಡಿ.ಕುಮಾರಸ್ವಾಮಿಯವರು ಕಟ್ಟಾಳು ಎಂಬ ಹುಂಬತನದ ಭ್ರಮಾಲೋಕದಿಂದ ವಾಸ್ತವಕ್ಕೆ ಬರಬೇಕು ಎಂದು ಬಿಜೆಪಿ ಟ್ವೀಟ್ ಮಾಡಿದೆ.

suddiyaana