ರಾಜ್ಯದಲ್ಲಿ ಈಗ ಬರದ ಛಾಯೆ.. ಮುಂದೆ ಜಲಪ್ರಳಯ.. – ಕೋಡಿಮಠ ಶ್ರೀಗಳ ಭವಿಷ್ಯ

ರಾಜ್ಯದಲ್ಲಿ ಈಗ ಬರದ ಛಾಯೆ.. ಮುಂದೆ ಜಲಪ್ರಳಯ.. – ಕೋಡಿಮಠ ಶ್ರೀಗಳ ಭವಿಷ್ಯ

ಹುಬ್ಬಳ್ಳಿ: ರಾಜ್ಯಕ್ಕೆ ಮುಂಗಾರು ಇನ್ನೂ ಕಾಲಿಟ್ಟಿಲ್ಲ. ಬರದ ಛಾಯೆ ಮೂಡಿದೆ. ಕುಡಿಯುವ ನೀರಿಗೂ ಅಭಾವ ಉಂಟಾಗಿದೆ. ಸರ್ಕಾರ ಕೂಡ ಬರಗಾಲ ಘೋಷಣೆಗೆ ಸಿದ್ಧತೆ ಮಾಡಿಕೊಂಡಿದೆ ಎಂದು ಸಚಿವ ಸಂತೋಷ್‌ ಲಾಡ್‌ ಕೂಡ ಹೇಳಿದ್ದಾರೆ. ಈ ಬೆನ್ನಲ್ಲೇ ಕೋಡಿಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಆತಂಕರವಾದ ಭವಿಷ್ಯವೊಂದನ್ನು ನುಡಿದಿದ್ದಾರೆ.

ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಲಿದ್ದು, ಜಲಪ್ರಳಯ ಆಗುವ ಲಕ್ಷಣಗಳಿವೆ. ಪ್ರಕೃತಿ ಮುನಿದಿದ್ದು ಸರಿಯಾಗಲಿದೆ. ಜಾಗತಿಕ ಮಟ್ಟದಲ್ಲಿ ದುರಂತ ಆಗುವುದಿದೆ. ಜನರ ಅಕಾಲ ಮೃತ್ಯು ಸಂಭವಿಸುವ ಸಾಧ್ಯತೆ. ಜಲಪ್ರಳಯ ಸಂಭವಿಸಿ ಒಂದೆರಡು ರಾಷ್ಟ್ರಗಳು ಮುಳುಗುವ ಸಾಧ್ಯತೆ ಇದೆ. ಬೇರೆ ಎಲ್ಲೋ ಕಡೆ ಬಾಂಬ್ ಸ್ಫೋಟದಂತಹ ಘಟನೆಗಳು ಸಂಭವಿಸುತ್ತವೆ. ವಿಷಾನಿಲದಿಂದ ಭಾರತದಲ್ಲಿ ಜನರು ಅಕಾಲಿಕವಾಗಿ ಸಾವಿಗೀಡಾಗುವ ಸಂಭವ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬರಗಾಲ ಘೋಷಣೆ ಮಾಡಲು ಸರ್ಕಾರದ ಸಿದ್ಧತೆ – ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್ ಹೇಳಿಕೆ

ವಿಜಯದಶಮಿಯಿಂದ ಸಂಕ್ರಾಂತಿಯೊಳಗೆ ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುವಂತ ದುರ್ಘಟನೆ ರಾಷ್ಟ್ರ ಮಟ್ಟದಲ್ಲಿ ನಡೆಯಲಿದೆ. ಆಳುವವರು ಅರಿತರೆ ಗಂಡಾಂತರದಿಂದ ಪಾರಾಗಬಹುದು. ಇಲ್ಲದಿದ್ದರೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಕರುನಾಡಿಗೂ ಕೆಲವು ಆಪತ್ತುಗಳು ಇದ್ದು, ಸಾವು ನೋವುಗಳು ಸಂಭವಿಸಲಿವೆ. ದೈವಕೃಪೆಯಿಂದ ಇವೆಲ್ಲವುಗಳಿಂದ ಪಾರಾಗಬಹುದು. ಭಾರತದಲ್ಲಿಯೂ ಒಂದು ಘಟನೆ ಆಗುತ್ತೆ. ತಪ್ಪಿಸುವಂತದ್ದು ಆಳುವವರ ಕೈಯಲ್ಲಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಸ್ಥಿರ ಸರ್ಕಾರ ಬರಲಿದೆ ಎಂದು ಆಗ ಹೇಳಿದ್ದೆ. ಅದು ನಿಜವಾಗಿದೆ. ಒಬ್ಬ ವ್ಯಕ್ತಿಯೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಈ ಸರ್ಕಾರ ಸ್ಥಿರವಾಗಿ ಇರುತ್ತದೆಯೇ ಎಂಬುದಕ್ಕೆ, ಬಾಯಿಯ ವಾಸನೆ ಮೂಗಿಗೆ ಬಡಿಯುವುದಿಲ್ಲ. ಆದರೆ, ಊರಿನ ಎಲ್ಲಾ ವಾಸನೆಯನ್ನು ಮೂಗು ಗ್ರಹಿಸುತ್ತದೆ ಎಂದು ಹೇಳಿದರು. ಬಡವರಿಗೆ ಗ್ಯಾರಂಟಿಗಳು ಒಳ್ಳೆಯದೇ. ಯಾವ ಹೆಣ್ಣಿಗೆ ಸ್ವತಂತ್ರ ಇರ್ಲಿಲ್ಲ ಅಂತಹ ಹೆಣ್ಣು ಈಗ ಸ್ವತಂತ್ರವಾಗಿ ಹೊರಗಡೆ ಬಂದಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸತ್ರ ಅಪ್ರಿಯವಾಗಿರುತ್ತದೆ. ಸುಳ್ಳು ಪ್ರಿಯವಾಗಿರುತ್ತದೆ. ನಾನು ಸತ್ಯ ಹೇಳಿದರೆ ಮಠಕ್ಕೆ ಹೋಗುವುದಿಲ್ಲ. ಸಂದರ್ಭ ಬಂದಾಗ ಈ ಬಗ್ಗೆ ಹೇಳುತ್ತೇನೆ ಎಂದು ನುಡಿದ್ದಾರೆ.

suddiyaana