ಕ್ಯಾಪ್ಟನ್ ಆಗಿ KL ಕಮ್​ಬ್ಯಾಕ್ – ಲಂಕಾ ಸರಣಿಗೆ ಕನ್ನಡಿಗನೇ ಸಾರಥಿ
ರಾಹುಲ್​ಗೆ ಸಿಕ್ಕಿತಾ ಗಂಭೀರ್ ಅಭಯ?

ಕ್ಯಾಪ್ಟನ್ ಆಗಿ KL ಕಮ್​ಬ್ಯಾಕ್ – ಲಂಕಾ ಸರಣಿಗೆ ಕನ್ನಡಿಗನೇ ಸಾರಥಿರಾಹುಲ್​ಗೆ ಸಿಕ್ಕಿತಾ ಗಂಭೀರ್ ಅಭಯ?

ಟಿ-20 ವಿಶ್ವಕಪ್​ನಲ್ಲಿ ಭಾರತ ಗೆದ್ದಾಗಿದೆ. 20 ತಂಡಗಳ ಜಿದ್ದಾಜಿದ್ದಿನ ಫೈಟ್​ನಲ್ಲಿ ದಶಕದ ಬಳಿಕ ಚಾಂಪಿಯನ್ ಪಟ್ಟಕ್ಕೇರಿದೆ. ಇದರ ಬೆನ್ನಲ್ಲೇ ಶುರುವಾಗಿರೋ ಜಿಂಬಾಬ್ವೆ ವಿರುದ್ಧದ ಟಿ-20 ಸರಣಿಯಲ್ಲೂ ಭಾರತದ ಯಂಗ್ ಟೈಗರ್ಸ್ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. 5 ಪಂದ್ಯಗಳ ಸಿರೀಸ್​ನಲ್ಲಿ ಈಗಾಗಲೇ 3 ಮ್ಯಾಚ್​ಗಳು ಮುಗಿದಿದ್ದು, ಈ ಪೈಕಿ ಭಾರತ 2 ಪಂದ್ಯ ಗೆದ್ದಿದ್ರೆ ಜಿಂಬಾಬ್ವೆ ಒಂದು ಪಂದ್ಯ ಗೆದ್ದಿದೆ. ಸೋ ಇನ್ನು ಎರಡು ಪಂದ್ಯಗಳು ಬಾಕಿ ಇದ್ದು ಟೀಂ ಇಂಡಿಯಾ ಸರಣಿ ಗೆಲ್ಲೋ ಜೋಶ್​ನಲ್ಲಿದೆ. ಜಿಂಬಾಬ್ವೆ ವಿರುದ್ಧದ ಸರಣಿ ಬಳಿಕ ಭಾರತ ಮತ್ತೊಂದು ಪ್ರವಾಸಕ್ಕೆ ಸಜ್ಜಾಗಬೇಕಿದೆ.. ಇದೇ ತಿಂಗಳಾಂತ್ಯದಲ್ಲಿ ಶುರುವಾಗಲಿರೋ ಶ್ರೀಲಂಕಾ ಸರಣಿಗೆ ಈಗ ಅಚ್ಚರಿಯ ಕ್ಯಾಪ್ಟನ್ ಅನೌನ್ಸ್ ಆಗಿದೆ. ಅದೂ ಕೂಡ ನಮ್ಮ ಕನ್ನಡಿಗ ಕೆ.ಎಲ್ ರಾಹುಲ್​ಗೆ ಅದೃಷ್ಟ ಒಲಿದಿದೆ. ಟೀಂ ಇಂಡಿಯಾದಲ್ಲಿ ಸೈಡ್​ಲೈನ್ ಆಗ್ತಿದ್ದಾರೆ ಅಂತಾ ಫ್ಯಾನ್ಸ್ ಕಿಡಿ ಕಾರುತ್ತಿರುವ ಹೊತ್ತಲ್ಲೇ ರಾಹುಲ್​ಗೆ ಅವಕಾಶ ಸಿಕ್ಕಿದ್ದೇಗೆ? ರಾಹುಲ್ ಆಯ್ಕೆ ಹಿಂದಿನ ಶಕ್ತಿ ಯಾರು? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪಾಂಡ್ಯ- ಪ್ರಾಚಿ LOVE ಹೌದಾ? – ಹಾರ್ದಿಕ್ ಮನೆಗೆ ಬಂದಿದ್ದೇಕೆ ಗೆಳತಿ?

ಕೆ.ಎಲ್ ರಾಹುಲ್. ಟೀಂ ಇಂಡಿಯಾದ ಪ್ರತಿಭಾವಂತ ವಿಕೆಟ್ ಕೀಪರ್ ಬ್ಯಾಟರ್. ಆದ್ರೆ ಇತ್ತೀಚೆಗೆ ಕೆ.ಎಲ್ ರಾಹುಲ್ ಟೀಂ ಇಂಡಿಯಾದಲ್ಲಿ ಸೈಡ್​ಲೈನ್ ಆದ್ರಾ ಎಂಬ ಗುಮಾನಿ ಶುರುವಾಗಿತ್ತು. ಕಳೆದ ಏಕದಿನ ವಿಶ್ವಕಪ್ ನಲ್ಲಿ ವಿಕೆಟ್ ಕೀಪರ್ ಆಗಿ, ಬ್ಯಾಟಿಗನಾಗಿ ಉತ್ತಮ ಪ್ರದರ್ಶನ ನೀಡಿದ್ದ ರಾಹುಲ್​ರನ್ನ ಬಿಸಿಸಿಐ ಕಡೆಗಣಿಸ್ತಿದೆ ಅನ್ನೋ ಆರೋಪ ಕೇಳಿ ಬಂದಿತ್ತು. ಐಪಿಎಲ್​ನಲ್ಲಿ ಆದ ಅವಮಾನ, ಟಿ-20 ವರ್ಲ್ಡ್​ಕಪ್​ಗೆ ಸೆಲೆಕ್ಟ್ ಆಗ್ಲಿಲ್ಲ ಅನ್ನೋ ಬೇಸರ ರಾಹುಲ್​ರನ್ನ ಕಾಡಿತ್ತು.. ಬಟ್ ಈಗ ರಾಹುಲ್​ರ ವನವಾಸ ಅಂತ್ಯವಾದಂತೆ ಕಾಣ್ತಿದೆ. ಮತ್ತೆ ಬ್ಲೂ ಜೆರ್ಸಿಯಲ್ಲಿ ಮೆರೆಯೋ ಕಾಲ ಹತ್ತಿರವಾಗಿದೆ. ಅದೂ ಕೂಡ ಕ್ಯಾಪ್ಟನ್ ಆಗಿ ಟೀಂ ಇಂಡಿಯಾಗೆ ಕನ್ನಡಿಗ ಕೆ.ಎಲ್ ರಾಹುಲ್​ ಕಮ್ ಬ್ಯಾಕ್ ಮಾಡ್ತಿದ್ದಾರೆ. ಅದೆಲ್ಲಕ್ಕಿಂಥ ಮುಖ್ಯವಾಗಿ ಹೆಡ್​​ಕೋಚ್ ಗೌತಮ್ ಗಂಭೀರ್ ಅವ್ರ ಬಲವೂ ರಾಹುಲ್​ಗೆ ಸಿಕ್ಕಿದೆ. ಹಾಗಾದ್ರೆ ರಾಹುಲ್ ಯಾವಾಗ ಕಣಕ್ಕಿಳಿತಾರೆ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಕೆಎಲ್ ವನವಾಸ ಅಂತ್ಯ!  

ಭಾರತ ಮತ್ತು ಝಿಂಬಾಬ್ವೆ ನಡುವಣ ಟಿ20 ಸರಣಿ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ ಸರಣಿ ಆಡಲಿದೆ. ಈ ಸರಣಿಯಲ್ಲಿ ಭಾರತ ತಂಡವು ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನಾಡಲಿದೆ. ಇಲ್ಲಿ ಏಕದಿನ ತಂಡದ ನಾಯಕರಾಗಿ ಕೆಎಲ್ ರಾಹುಲ್ ಕಾಣಿಸಿಕೊಳ್ಳಲಿದ್ದಾರೆ. ಭಾರತ ತಂಡದ ನೂತನ ಕೋಚ್ ಆಗಿ ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ನೇಮಕದ ಬೆನ್ನಲ್ಲೇ ಗಂಭೀರ್ ಸಾರಥ್ಯದಲ್ಲಿ ಕೆಎಲ್ ರಾಹುಲ್ ನಾಯಕರಾಗಲಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಯೊಂದಿಗೆ ಗಂಭೀರ್ ಕೂಡ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ. ಆದರೆ ಈ ಸರಣಿಗೆ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾ ಇರೋದಿಲ್ಲ. ಈ ಮೂವರು ಆಟಗಾರರು ವಿಶ್ರಾಂತಿ ಬಯಸಿದ್ದು, ಹೀಗಾಗಿ ಲಂಕಾ ವಿರುದ್ಧದ ಸರಣಿಯಿಂದ ಹೊರಗುಳಿಯಲು ಬಯಸಿದ್ದಾರೆ.ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್​ಗೆ ಕೆಎಲ್ ರಾಹುಲ್ ಆಯ್ಕೆಯಾಗಿರಲಿಲ್ಲ. ಇದೀಗ ಕ್ಯಾಪ್ಟನ್ ಆಗಿ ಮತ್ತೆ ಬ್ಲೂ ಜೆರ್ಸಿಯಲ್ಲಿ ಕಣಕ್ಕಿಳಿಯಲು ರಾಹುಲ್ ಸಜ್ಜಾಗಿದ್ದಾರೆ. ಅಲ್ದೇ ರಾಹುಲ್​ಗೆ ಶಕ್ತಿಯಾಗಿ ಹಿಂದೆ ನಿಂತಿರೋದೇ ನೂತನ ಕೋಚ್ ಗೌತಮ್ ಗಂಭೀರ್. ಕೆ.ಎಲ್​ ರಾಹುಲ್​​ ಮತ್ತು ಗೌತಮ್​ ಗಂಭೀರ್​​ ಮಧ್ಯೆ ಆರಂಭದಿಂದಲೂ ಒಳ್ಳೆ ಬಾಂಡಿಂಗ್ ಇದೆ. ಇಬ್ಬರು ಒಟ್ಟಿಗೆ 2022-23ರ ಐಪಿಎಲ್​ನಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ತಂಡದಲ್ಲಿ ಕೆಲಸ ಮಾಡಿದ್ದಾರೆ. ಗಂಭೀರ್​​ ಲಕ್ನೋ ತಂಡದ ಮೆಂಟರ್​ ಆಗಿದ್ದಾಗ ಕ್ಯಾಪ್ಟನ್​ ರಾಹುಲ್​​ ನೇತೃತ್ವದಲ್ಲಿ ತಂಡ ಸೆಮಿ ಫೈನಲ್​ ಹೋಗಿತ್ತು. ರಾಹುಲ್​ ಅವರೇ ಲಕ್ನೋ ತಂಡದ ಕ್ಯಾಪ್ಟನ್​ ಆಗಲಿ ಎಂದು ಪಂಜಾಬ್​ ತಂಡದಿಂದ ಗಂಭೀರ್ ಕರೆದುಕೊಂಡು ಬಂದಿದ್ರು. ಹಾಗಾಗಿ ಗಂಭೀರ್​ ಒಲವು ರಾಹುಲ್​ ಪರವಾಗಿ ಇರುತ್ತದೆ ಎಂಬುದು ತಜ್ಞರ ಅಭಿಪ್ರಾಯ.

ಬಟ್ ಇಷ್ಟು ದಿನ ಕೆ.ಎಲ್ ರಾಹುಲ್ ಟಿಂ ಇಂಡಿಯಾಗೆ ಸೆಲೆಕ್ಟ್ ಆಗದೆ ಇರೋದಕ್ಕೆ ಅದೊಂದು ವಿಚಾರ ಕಾರಣ ಎನ್ನಲಾಗಿದೆ. 2024ರ ಐಪಿಎಲ್​ ವೇಳೆ ಲಕ್ನೋ ಸೂಪರ್ ಜೇಂಟ್ಸ್ ಕೋಚ್ ಜಸ್ಟಿನ್ ಲ್ಯಾಂಗರ್ ಒಂದು ಮಾತನ್ನ ಹೇಳಿದ್ರು. ಟೀಂ ಇಂಡಿಯಾ ಕೋಚ್​ಗೆ ಅರ್ಜಿ ಸಲ್ಲಿಸುವ ವಿಚಾರವಾಗಿ ಮಾತನಾಡುವಾಗ ಕೆ.ಎಲ್ ರಾಹುಲ್ ನೀಡಿದ್ದ ಸಲಹೆಯೊಂದನ್ನ ಬಹಿರಂಗಪಡಿಸಿದ್ದರು. ಟೀಂ ಇಂಡಿಯಾ ಕೋಚ್ ಆಗಬೇಕೆಂದರೆ ಸಾಕಷ್ಟು ರಾಜಕೀಯ ಒತ್ತಡ ಎದುರಿಸಬೇಕಾಗುತ್ತದೆ ಎಂದು ರಾಹುಲ್ ಹೇಳಿದ್ದಾಗಿ ಲ್ಯಾಂಗರ್ ಹೇಳಿಕೆ ನೀಡಿದ್ರು. ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿತ್ತು. ಹೀಗಾಗಿ ಕೆ.ಎಲ್ ರಾಹುಲ್ ಟೀಂ ಇಂಡಿಯಾದಲ್ಲಿ ಸೈಡ್​ಲೈನ್ ಆದ್ರು ಎಂದೇ ಹೇಳಲಾಗಿತ್ತು. ಆದ್ರೀಗ  ಐಪಿಎಲ್​ನಲ್ಲಿ ಎಲ್​ಎಸ್​ಜಿ ಮಾಲೀಕರಿಂದ ಆದ ಅವಮಾನ, ಟಿ20 ವಿಶ್ವಕಪ್​ಗೆ ಸೆಲೆಕ್ಟ್ ಆಗಲಿಲ್ಲ ಅನ್ನೋ ನೋವನ್ನೆಲ್ಲಾ ಮರೆಸುವಂತೆ ಕೆ.ಎಲ್ ರಾಹುಲ್​ ಕಮ್ ಬ್ಯಾಕ್ ಮಾಡೋಕೆ ರೆಡಿಯಾಗಿದ್ದಾರೆ. ಮತ್ತೊಂದೆಡೆ ರಾಹುಲ್ ಜೊತೆ ಹಾರ್ದಿಕ್ ಪಾಂಡ್ಯಗೂ ಲಕ್ ಖುಲಾಯಿಸಿದೆ. ಜುಲೈ 27ನೇ ತಾರೀಕಿನಿಂದ ಶುರುವಾಗಲಿರೋ ಪ್ರವಾಸಕ್ಕೆ ಇನ್ನಷ್ಟೇ ತಂಡವನ್ನು ಪ್ರಕಟಿಸಬೇಕಿದೆ. ಕ್ಯಾಪ್ಟನ್​ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ರೆಸ್ಟ್​ ನೀಡಿರೋ ಕಾರಣ ತಂಡದ ಆಯ್ಕೆಯಲ್ಲಿ ಹೆಚ್ಚು ಬದಲಾವಣೆ ಇರಲಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಅವರು ಶ್ರೀಲಂಕಾ ಸರಣಿಯಿಂದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಂದ್ರೆ ಕೆಎಲ್ ರಾಹುಲ್ ಏಕದಿನ ಪಂದ್ಯಕ್ಕೆ ಕ್ಯಾಪ್ಟನ್ ಆದ್ರೆ ಪಾಂಡ್ಯ ಟಿ20 ಯಲ್ಲಿ ಭಾರತ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.

 

Shwetha M

Leave a Reply

Your email address will not be published. Required fields are marked *