90 ಲಕ್ಷ ವಂಚನೆ, ಕಿಚ್ಚ ಸುದೀಪ್ ವಿರುದ್ಧ ಕೇಸ್ – ಕಾಫಿ ತೋಟದ ರಹಸ್ಯ!

90 ಲಕ್ಷ ವಂಚನೆ, ಕಿಚ್ಚ ಸುದೀಪ್ ವಿರುದ್ಧ ಕೇಸ್ –  ಕಾಫಿ ತೋಟದ ರಹಸ್ಯ!

ಬಿಗ್‌ಬಾಸ್ ಮುಗಿಯುತ್ತಿದ್ದಂತೆ ಕಿಚ್ಚ ಸುದೀಪ್‌ಗೆ ಬಿಗ್ ಶಾಕ್ ಎದುರಾಗಿದೆ. 90 ಲಕ್ಷ ರೂಪಾಯಿ ನೀಡದೆ ಸುದೀಪ್‌ ಮತ್ತು ಅವರ ಮ್ಯಾನೇಜರ್‌ ಚಕ್ರವರ್ತಿ ಚಂದ್ರಚೂಡ್‌ ವಂಚಿಸಿದ್ದಾರೆ ಎಂದು ಚಿಕ್ಕಮಗಳೂರು ಮೂಲದ, ಕಾಫಿ ತೋಟದ ಮಾಲಕ ದೀಪಕ್‌ ಠಾಣೆ ಮೆಟ್ಟಿಲೇರಿದ್ದಾರೆ. ಬೆಂಗಳೂರು ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಸುದೀಪ್‌ ಮತ್ತು ಚಕ್ರವರ್ತಿ ಚಂದ್ರಚೂಡ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಸುದೀಪ್‌ ನಿರ್ಮಾಣದ ʼವಾರಸ್ದಾರʼ ಧಾರಾವಾಹಿಗೆ ಸಂಬಂಧಿಸಿದಂತೆ ಈ ವಂಚನೆ ನಡೆದಿದೆ ಎಂದು ದೀಪಕ್‌ ಆರೋಪಿಸಿದ್ದಾರೆ.

ಇದನ್ನೂ ಓದಿ:ಏಯ್.. ನನ್ನ ಕೆಣಕಬೇಡ..! – ತನಗೆ ಬೊಗಳಿದ ಶ್ವಾನವನ್ನು ಒದ್ದು ಓಡಿಸಿದ ಗಜರಾಜ

2018ರಲ್ಲಿ ನಟ ಕಿಚ್ಚ ಸುದೀಪ್ ಅವರ ನಿರ್ಮಾಣ ಸಂಸ್ಥೆ ‘ಕಿಚ್ಚ ಕ್ರಿಯೇಷನ್ಸ್​’ನಿಂದ ‘ವಾರಸ್ದಾರ’ ಧಾರಾವಾಹಿಯನ್ನು ನಿರ್ಮಿಸಲಾಗಿತ್ತು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯ ಚಿತ್ರೀಕರಣವನ್ನು ಚಿಕ್ಕಮಗಳೂರು ಜಿಲ್ಲೆಯ ಬೈಗೂರು ಗ್ರಾಮದಲ್ಲಿ ನಡೆಸಲಾಗಿತ್ತು. ಇದಕ್ಕಾಗಿ ದೀಪಕ್ ಅವರ ಮನೆಯನ್ನು ಬಾಡಿಗೆಗೆ ಪಡೆಯಲಾಗಿತ್ತು. ಆದರೆ ಹಣ ನೀಡಿಲ್ಲ ಎಂದು ದೀಪಕ್‌ ದೂರಿದ್ದಾರೆ.ವಾರಸ್ದಾರ  ಧಾರಾವಾಹಿ ಚಿತ್ರೀಕರಣಕ್ಕಾಗಿ ತಮ್ಮ ಕಾಫಿ ತೋಟ ಮತ್ತು ಮನೆಯನ್ನು 2 ವರ್ಷಗಳಿಗೆ ಅಗ್ರಿಮೆಂಟ್‌ ಮಾಡಿಸಿ ಬಾಡಿಗೆ ಪಡೆಯಲಾಗಿತ್ತು. ಆದರೆ ಬಳಿಕ 2 ತಿಂಗಳಿಗೆ ಜಾಗ ಖಾಲಿ ಮಾಡಿ ಹಣ ನೀಡಿಲ್ಲ ಎಂದು ದೀಪಕ್‌ ಆರೋಪಿಸಿದ್ದಾರೆ. 2 ತಿಂಗಳ ಅವಧಿಯ ಶೂಟಿಂಗ್‌ ವೇಳೆ ಕಾಫಿ ಗಿಡ ಮತ್ತು ಮರ ನಾಶವಾಗಿದ್ದು, 90 ಲಕ್ಷ ರುಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಚಿತ್ರೀಕರಣದ ವೇಳೆ ಆದ ನಷ್ಟಕ್ಕೆ ಪರಿಹಾರ ನೀಡುವುದಾಗಿ ಸುದೀಪ್‌ ಭರವಸೆ ನೀಡಿದ್ದರು. ಆದರೆ ಇದುವರೆಗೆ ತಮಗೆ 10 ಲಕ್ಷ ರುಪಾಯಿಯ ಚೆಕ್‌ ಮಾತ್ರವೇ ಬಂದಿದೆ. ಹೀಗಾಗಿ ಸುದೀಪ್‌ ಮತ್ತು ಚಕ್ರವರ್ತಿ ಚಂದ್ರಚೂಡ್‌ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ದೀಪಕ್‌ ದೂರಿನಲ್ಲಿ ಮನವಿ ಮಾಡಿದ್ದಾರೆ.

Kishor KV