ಮಗಳ ಮದುವೆ ಮಾಡಿಸಿದ್ದ ಫೈವ್ ಸ್ಟಾರ್ ಹೊಟೇಲ್‌ನಲ್ಲೇ ದಂಪತಿ ಆತ್ಮಹತ್ಯೆ – ಡೆತ್‌ ನೋಟ್‌ನಲ್ಲಿ ಬಯಲಾಯ್ತು ಸಾವಿನ ರಹಸ್ಯ!

ಮಗಳ ಮದುವೆ ಮಾಡಿಸಿದ್ದ ಫೈವ್ ಸ್ಟಾರ್ ಹೊಟೇಲ್‌ನಲ್ಲೇ ದಂಪತಿ ಆತ್ಮಹತ್ಯೆ – ಡೆತ್‌ ನೋಟ್‌ನಲ್ಲಿ ಬಯಲಾಯ್ತು ಸಾವಿನ ರಹಸ್ಯ!

ಅವರದ್ದು ಪುಟ್ಟ ಸಂಸಾರ. ಗಂಡ, ಹೆಂಡತಿ ಮತ್ತು ಮಗಳು ಮೂವರೂ ಅನ್ಯೋನವಾಗಿದ್ದರು. ಮಗಳ ಮದುವೆಯ ಬಗ್ಗೆ ಸಾವಿರಾರು ಕನಸುಗಳನ್ನು ಕಂಡಿದ್ದರು. ಮೂರು ತಿಂಗಳ ಹಿಂದಷ್ಟೇ ಮಗಳಿಗೆ ಅದ್ದೂರಿಯಾಗಿ ಮದುವೆ ಮಾಡಿಸಿ ಗಂಡನ ಮನೆಗೆ ಕಳುಹಿಸಿದ್ದರು. ಮಗಳು ಕೂಡ ಗಂಡನ ಮನೆಯಲ್ಲಿ ಸುಖವಾಗಿದ್ದಳು.  ಮಗಳ ವಿವಾಹ ನಡೆದು ಕೇವಲ ಮೂರು ತಿಂಗಳಲ್ಲೇ ಸಾವಿನ ಹಾದಿ ಹಿಡಿದಿದ್ದಾರೆ. ಮಗಳನ್ನು ಅದ್ದೂರಿಯಾಗಿ ಮದುವೆ ಮಾಡಿಸಿದ ಹೊಟೇಲ್‌ನಲ್ಲೇ ದಂಪತಿ ಸಾವಿಗೆ ಶರಣಾದ ದುರಂತ ಘಟನೆ ಕೇರಳದ ತಿರುವನಂತರಪುರದಲ್ಲಿ ನಡೆದಿದೆ.

ಏನಿದು ಘಟನೆ?

ಐದು ದಿನಗಳ ಹಿಂದೆ ಈ ದಂಪತಿ ಈ ಫೈವ್ ಸ್ಟಾರ್ ಹೊಟೇಲ್‌ಗೆ  ಆಗಮಿಸಿದ್ದರು. ಇದೇ ಹೊಟೇಲ್‌ನಲ್ಲಿ ಸ್ವಲ್ಪ ಸಮಯದ ಹಿಂದೆ ದಂಪತಿ ತಮ್ಮ ಮಗಳ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಿದ್ದರು. ಹೊಟೇಲ್‌ಗೆ ಆಗಮಿಸಿದ ದಂಪತಿ ಎಲ್ಲೂ ಹೊರಗೆ ಕಾಣಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ ಹೊಟೇಲ್ ಸಿಬ್ಬಂದಿಗೆ ಅನುಮಾನ ಬಂದು ಬಾಗಿಲು ಒಡೆದು ನೋಡಿದ್ದಾರೆ. ಈ ವೇಳೆ ದಂಪತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಇದನ್ನೂ ಓದಿ: ಗರ್ಲ್‌ಫ್ರೆಂಡ್‌ ಜೊತೆ ಸುತ್ತಾಡಲು ಸಂಬಂಧಿಕರ ಮನೆಯಲ್ಲೇ ಕಳ್ಳತನ – ಶೋಕಿಲಾಲ ಸಿಕ್ಕಿಬಿದ್ದಿದ್ದು ಹೇಗೆ?

ಆತ್ಮಹತ್ಯೆಗೆ ಕಾರಣವೇನು? 

ಮಗಳ ಮದುವೆಯನ್ನು ಅದ್ದೂರಿ ಮಾಡಬೇಕೆಂದು ಕೈ ತುಂಬಾ ಸಾಲ ಮಾಡಿದ್ದರು. ಆರ್ಥಿಕ ಸಂಕಷ್ಟಕ್ಕೊಳಗಾದ ಈ ದಂಪತಿ ಸಾವಿನ ಹಾದಿ ಹಿಡಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಡೆತ್‌ ನೋಟ್‌ನಲ್ಲಿ ಏನಿದೆ?

ಹೊಟೇಲ್ ರೂಮ್‌ನಲ್ಲಿ ಡೆತ್‌ನೋಟು ಸಿಕ್ಕಿದ್ದು, ಅದರಲ್ಲಿ ಉಲ್ಲೇಖಿಸಿದಂತೆ, ಆಕೆಯನ್ನು ಇದೇ ಹೊಟೇಲ್‌ನಲ್ಲಿ ಮದುವೆ ಮಾಡಿ ಕೊಡಲಾಗಿದ್ದು, ಪ್ರಸ್ತುತ ಆಕೆ ಗರ್ಭಿಣಿಯಾಗಿದ್ದಾಳೆ. ಪ್ರಸ್ತುತ ಸಂತೋಷದಿಂದ ಇರುವ ಆಕೆಗೆ ನಮ್ಮ ಕಷ್ಟಗಳನ್ನು ಹೇಳಿಕೊಂಡು ತೊಂದರೆ ನೀಡಲು ಇಷ್ಟವಿಲ್ಲ, ನಮ್ಮ ಸಾವಿಗೆ ನಾವೇ ಕಾರಣವಾಗಿದ್ದು, ನಮ್ಮ ಸಾವಿನ ನಂತರ ಈ ವಿಷಯವಾಗಿ ನಮ್ಮ ಮಗಳಿಗೆ ಯಾವುದೇ ತೊಂದರೆ ನೀಡಬೇಡಿ ಅಲ್ಲದೇ ನಮ್ಮ ಶವವನ್ನು ಮೆಡಿಕಲ್ ಕಾಲೇಜು ಆಸ್ಪತ್ರೆಯ ಶವಗಾರದಲ್ಲಿ ಇರಿಸಿ ಅಲ್ಲದೇ ಮಗಳು ಉತ್ತರಗಳಿಗೆ ಈ ವಿಚಾರವನ್ನು ತಿಳಿಸಿ ಎಂದು ಡೆತ್‌ನೋಟ್‌ನಲ್ಲಿ ದಂಪತಿ ಬರೆದಿದ್ದಾರೆ.

ಹೋಟೆಲ್‌ ಬಿಲ್‌ ಪಾವತಿಸದ ದಂಪತಿ!

ಇದೇ ಹೊಟೇಲ್‌ನಲ್ಲಿ ಆಯೋಜಿಸಿದ್ದ ಓಣಂ ಸಂಭ್ರಮದಲ್ಲಿ ಈ ದಂಪತಿ ಭಾಗವಹಿಸಿದ್ದರು,  ಸಂಪ್ರದಾಯಿಕ ಓಣಂ ಧಿರಿಸು ಧರಿಸಿ ಓಣಂ ಖಾದ್ಯ ಸವಿದಿದ್ದರು. ಆದರೆ ಇಲ್ಲಿಯವರೆಗೂ ಅವರು ಹೊಟೇಲ್ ಬಿಲ್ ಪಾವತಿ ಮಾಡಿರಲಿಲ್ಲ ಎಂದು ತಿಳಿದು ಬಂದಿದೆ.

ಖಿನ್ನತೆಗೆ ಒಳಗಾಗಿದ್ದ ದಂಪತಿ

ಒಂದೊಮ್ಮೆ ಈ ಕುಟುಂಬ ಆರ್ಥಿಕವಾಗಿ ತುಂಬಾ ಸಧೃಡವಾಗಿತ್ತು. ಆದರೆ ಇತೀಚೆಗೆ ಉದ್ಯಮದಲ್ಲಿ ಹಿನ್ನಡೆಯಾಗಿ ಆರ್ಥಿಕ ಸಂಕಷ್ಟ ಎದುರಾಗಿತ್ತು. ಸಾವಿಗೆ ಶರಣಾದ ಸುಗಥನ್ ಸೌದಿ ರಾಷ್ಟ್ರ ಮಸ್ಕತ್‌ನಲ್ಲಿ ಯಶಸ್ವಿ ಉದ್ಯಮಿಯಾಗಿದ್ದರು. ಕೆಲ ವರ್ಷಗಳ ಹಿಂದಷ್ಟೇ ಅವರು 2021ರಲ್ಲಿ ತಾಯ್ನಾಡು ಕೇರಳಕ್ಕೆ ಬಂದಿದ್ದರು.  ನಂತರ ಕರಿಪುರ ಪ್ರಕೃತಿ ಗಾರ್ಡನ್‌ನಲ್ಲಿ ಮನೆಯೊಂದಕ್ಕೆ ಹೂಡಿಕೆ ಮಾಡಿದ್ದರು.  ಆದರೆ ಮಗಳ ಮದುವೆಗೂ ಮೊದಲು ದಂಪತಿ ಅದನ್ನು ಮಾರಾಟ ಮಾಡಿದ್ದರು. ಹೀಗಿದ್ದರೂ ಅವರ ಪ್ರಾಥಮಿಕ ಹೂಡಿಕೆಯ 65 ಲಕ್ಷದಲ್ಲಿ ಕೇವಲ 35 ಲಕ್ಷವಷ್ಟೇ ಅವರಿಗೆ ಮರಳಿ ಪಡೆಯಲು ಸಾಧ್ಯವಾಗಿತ್ತು. ಇದರಿಂದ ದಂಪತಿ ಆರ್ಥಿಕವಾಗಿ ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದರು. ಇದು ಅವರನ್ನು ಮಾನಸಿಕವಾಗಿ ಕುಗ್ಗಿಸಿ ಖಿನ್ನತೆಗೆ ಜಾರಿಸಿತ್ತು.  ಪೊಲೀಸರು ಈಗ ದಂಪತಿಯ ಆರ್ಥಿಕ ಹಿನ್ನಡೆಗೆ ಕಾರಣವಾದ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

suddiyaana