ಕೆಇಎ ಪರೀಕ್ಷಾ ಅಕ್ರಮ – ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

ಕೆಇಎ ಪರೀಕ್ಷಾ ಅಕ್ರಮ – ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

ಬೆಂಗಳೂರು: ಕೆಇಎ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕರು ಕಿಡಿಕಾರುತ್ತಲೇ ಇದ್ದಾರೆ. ಇದೀಗ ಕೆಇಎ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆಯವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ರಾಜ್ಯ ಬಿಜೆಪಿ ಆಗ್ರಹಿಸಿದೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಸುವುದಕ್ಕೆ ಕುಖ್ಯಾತಿ ಪಡೆದಿರುವ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಆರ್. ಡಿ. ಪಾಟೀಲ್, ಕಾನ್‌ಸ್ಟೇಬಲ್ ಪರೀಕ್ಷೆಯಲ್ಲೂ ಅಕ್ರಮ ನಡೆಸಲು ಹೊಂಚು ಹಾಕಿ ಕೂತಿದ್ದು ಬೆಳಕಿಗೆ ಬಂದಿದೆ. ಪ್ರತಿಯೊಂದು ಪರೀಕ್ಷೆಯಲ್ಲೂ ಆರ್. ಡಿ. ಪಾಟೀಲ್ ರಾಜಾರೋಷವಾಗಿ ಅಕ್ರಮ ನಡೆಸಲು ಕಾರಣ ಆತನ ಬೆನ್ನಿಗೆ ಎಟಿಎಂ ಸರ್ಕಾರ ನಿಂತಿರುವುದರಿಂದ. ಸಿಬಿಐ ತನಿಖೆಗೆ ವಹಿಸಿ ಎಂದರೆ ಸಚಿವ  ಪ್ರಿಯಾಂಕ್ ಖರ್ಗೆ ಮೂಗು ಮುರಿಯುವುದಕ್ಕೆ ಕಾರಣ ತಮ್ಮ ಬುಡಕ್ಕೆ ಪ್ರಕರಣ ಬಂದು ಬೀಳಲಿದೆ ಎನ್ನುವುದು ಅವರಿಗೆ ಖಾತರಿಯಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ -ಗುಂಡಿನ ದಾಳಿಯಲ್ಲಿ 10 ಮಂದಿಗೆ ಗಾಯ

ಮಾನ್ಯ ಗೃಹ ಸಚಿವ ಪರಮೇಶ್ವರ್ ಸಾಹೇಬರೇ, ಯಾರಿಗಾಗಿ ಯಾರಿಗೋಸ್ಕರ ಕಿಂಗ್ ಪಿನ್ ಆರ್. ಡಿ. ಪಾಟೀಲ್ ಅವರನ್ನು ಬಂಧಿಸದೆ ಕಳ್ಳಾಟವಾಡುತ್ತಿದ್ದೀರಿ? ಆರ್. ಡಿ. ಪಾಟೀಲ್ ಬಂಧನವಾದರೆ ಪ್ರಿಯಾಂಕ್ ಖರ್ಗೆ ಹೆಸರು ಹೊರ ಬರಲಿದೆ ಎನ್ನುವ ಆತಂಕ ಎಟಿಎಂ ಸರ್ಕಾರಕ್ಕೆ ಇದ್ದಂತಿದೆ. ಹೀಗಾಗಿಯೇ‌ ನೇಮಕಾತಿ ಪರೀಕ್ಷೆಯ ಅಕ್ರಮದ ಕಿಂಗ್‌ಪಿನ್ ಕಾಂಪೌಂಡ್‌ ಹಾರಿ ಹೋಗಲು ಬಿಟ್ಟಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕಳ್ಳ ಪೊಲೀಸ್ ಆಟ ಆಡುತ್ತಾ ಕಳ್ಳರನ್ನು ರಾಜಾರೋಷವಾಗಿ ಓಡಾಡಿಕೊಂಡು ಇರುವಂತೆ ಬಿಟ್ಟು, ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆಸಿ ಕಲೆಕ್ಷನ್ ಮಾಡುತ್ತಿದೆ.  ವರ್ಷಪೂರ್ತಿ ಕಷ್ಟಪಟ್ಟು ಓದಿ ನೌಕರಿ ಕನಸು ಕಾಣುತ್ತಿರುವ ಬಡ ವಿದ್ಯಾರ್ಥಿಗಳ ಹೊಟ್ಟೆ ಮೇಲೆ ಹೊಡೆಯುವ ಗ್ಯಾರಂಟಿ ಕೊಟ್ಟಿದೆ ಸಿದ್ದರಾಮಯ್ಯ ಅವರ ಸರ್ಕಾರ ಎಂದು ವ್ಯಂಗ್ಯವಾಡಿದೆ.

ಹಗರಣ, ಅಕ್ರಮಗಳ ಹೂರಣದಲ್ಲಿ ಯಾವುದೇ ಮುಲಾಜಿಲ್ಲದೆ ಭಾಗಿಯಾಗಿ, ಸದಾ ಕಲೆಕ್ಷನ್‌, ಕಮಿಷನ್‌ ಎನ್ನುತ್ತಾ, ಕೆ.ಇ.ಎ ಪರೀಕ್ಷಾ ಅಕ್ರಮ ಹಾಗೂ ಕಿಯೋನಿಕ್ಸ್ ಹಗರಣದಲ್ಲಿ ಭಾಗಿಯಾಗಿರುವ ಕಿಂಗ್‌ ಪಿನ್‌‌ಗಳನ್ನು ರಕ್ಷಿಸುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಚಿವ ಸ್ಥಾನದಲ್ಲಿ ಮುಂದುವರೆಯಲು ಒಂದು ಕ್ಷಣವೂ ಅರ್ಹರಲ್ಲ.  ಸಿಎಂ ಸಿದ್ದರಾಮಯ್ಯ ಅವರೇ, ಮೊದಲು ಈ ಕಡುಭ್ರಷ್ಟ ಸಚಿವರನ್ನು ನಿಮ್ಮ ಸಂಪುಟದಿಂದ ವಜಾ ಮಾಡಿ ಎಂದು ಆಗ್ರಹಿಸಿದೆ.

Shwetha M