ಮುಂದುವರಿದ ಸಂಸದರ ಅಮಾನತು ಪರ್ವ – ಲೋಕಸಭೆಯಿಂದ ಡಿಕೆ ಸುರೇಶ್ ಸಸ್ಪೆಂಡ್!

ಮುಂದುವರಿದ ಸಂಸದರ ಅಮಾನತು ಪರ್ವ – ಲೋಕಸಭೆಯಿಂದ ಡಿಕೆ ಸುರೇಶ್ ಸಸ್ಪೆಂಡ್!

ಲೋಕಸಭೆ ಕಲಾಪದ ವೇಳೆ ಉಂಟಾದ ಭದ್ರತಾ ವೈಫಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಾಪದಲ್ಲಿ ಗದ್ದಲ ಮುಂದುವರಿದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರ ಸ್ಪಷ್ಟನೆ ನೀಡಬೇಕೆಂದು ವಿಪಕ್ಷಗಳು ಆಗ್ರಹಿಸಿದ್ದಾರೆ. ಈ ಸಂಬಂಧ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಡುವೆ ವಾಕ್ಸಮರ ನಡೆದಿದೆ. ‌ಗುರುವಾರ ಕಲಾಪದಲ್ಲಿ ಗದ್ದಲ ಉಂಟು ಮಾಡಿದ  ಮೂವರು ವಿಪಕ್ಷ ಸದಸ್ಯರನ್ನು ಮತ್ತೆ ಅಮಾನತು ಮಾಡಲಾಗಿದೆ.

ಸಂಸತ್‌ ನಲ್ಲಿ ಭದ್ರತಾ ವೈಫಲ್ಯ ಉಂಟಾದ ಹಿನ್ನೆಲೆಯಲ್ಲಿ ಕಳೆದ ಶನಿವಾರದಿಂದ ನಾಯಕರು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರ ಸ್ಪಷ್ಟನೆ ನೀಡಬೇಕೆಂದು ವಿಪಕ್ಷಗಳು ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಕೂಡ ವಿಪಕ್ಷ ನಾಯಕರು ಸಂಸತಿನಲ್ಲಿ ಪ್ರತಿಭಟನೆಗಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೆ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಮೂವರು ಸಂಸದರನ್ನು ಅಮಾನತು ಮಾಡಲಾಗಿದೆ.

ಇದನ್ನೂ ಓದಿ: ಭಾರತದ ಕುಸ್ತಿ ಫೆಡರೇಷನ್ ಚುನಾವಣೆ – ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿ ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಆಯ್ಕೆ

ನಿಯಮ ಮೀರಿ ಪ್ರತಿಭಟನೆ ಆರೋಪ ಹಿನ್ನೆಲೆ ಅಮಾನತು ಸಂಸದರನ್ನು ಅಮಾನತು ಮಾಡಲಾಗಿದೆ. ಸಚಿವ ಪ್ರಹ್ಲಾದ್ ಜೋಶಿ ಅಮಾನತು ಪ್ರಸ್ತಾವನೆ ಮಂಡಿಸಿದ್ರು. ಇದರೊಂದಿಗೆ ಉಭಯ ಸದನಗಳಲ್ಲಿ ಈವರೆಗೆ ಒಟ್ಟು 146 ಸಂಸದರನ್ನು ಸಂಸತ್​​​ ಅಧಿವೇಶನದಿಂದ ಅಮಾನತು ಮಾಡಲಾಗಿದೆ.

ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್, ಪ್ರಜಾಪ್ರಭುತ್ವದ ದೇವಸ್ಥಾನದೊಳಗೆ ಕೆಲವರು ಅಕ್ರಮವಾಗಿ ದಾಳಿ ಮಾಡಿದ್ದಾರೆ. ಭದ್ರತಾ ಲೋಪದ ಬಗ್ಗೆ ಕೇಂದ್ರ ಗೃಹ ಸಚಿವರು ಹಾಗೂ ಪ್ರಧಾನಮಂತ್ರಿಗಳು ಮಾತನಾಡಬೇಕು. ಮತ್ತು ತನಿಖೆಯಲ್ಲಿ ಪಾಸ್ ನೀಡಿದವರನ್ನು ಒಳಪಡಿಸಬೇಕು ಎಂದು ಆಗ್ರಹಿಸಿದ್ದೇವೆ. ಇಲ್ಲಿ ಸಂಸದರಿಗೆ ರಕ್ಷಣೆ ಇಲ್ಲ. ಬೇರೆಯವರಿಗೆ ರಕ್ಷಣೆ ಹೇಗೆ ಎಂದು ಪ್ರಶ್ನೆ ಮಾಡಿದ್ದೇವು. ಪ್ರತಿಭಟನೆ ನಡೆಸಿದ ಸಂಸದರನ್ನು ಅಮಾನತು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಯಮಗಳನ್ನು ಗಾಳಿಗೆ ತೂರಿ ಅಮಾನತು ಮಾಡಿದ್ದಾರೆ. ಇದೊಂದು ದುರ್ದೈವದ‌ ಸಂಗತಿ. ನಾವು ಮಾತನಾಡಲು ಸೂಕ್ತವಾದ ಅವಕಾಶ‌ ಕೇಳಿದ್ದೇವು. ಮಾತನಾಡುವ ಹಕ್ಕನ್ನು ಕಸಿಯುವ ಪ್ರಯತ್ನ ಲೋಕಸಭೆ ಮಾಡಲಾಗುತ್ತಿದೆ. ಇದನ್ನು ಖಂಡಿಸಿ ಬಾವಿಗಿಳಿದು ಪ್ರತಿಭಟನೆ ನಡೆಸಿದೆವು. ಇದಕ್ಕೆ ಸ್ಪೀಕರ್ ಅಸಮಧಾನ ವ್ಯಕ್ತಪಡಿಸಿದ್ದರು. ಈ ಹಿನ್ನಲೆ ಇಂದು ಮೂವರನ್ನು ಅಮಾನತು ಮಾಡಿದೆ. ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬ ಸದಸ್ಯನ ಹಕ್ಕು. ಅದನ್ನು ಕಿತ್ತು ಕೊಳ್ಳಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಆಡಳಿತ ಪಕ್ಷ ತನ್ನ ಅನುಕೂಲಕ್ಕೆ ತಕ್ಕಂತೆ ಹೇಳಿಕೆ ನೀಡುತ್ತಿದ್ದಾರೆ. ಆದ್ರೆ, ನಮ್ಮ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಹಿಂದೆ ಬಿಜೆಪಿ ನಾಯಕರು ಪ್ಲೆಕಾರ್ಡ್ ಹಿಡಿದು ಪ್ರತಿಭಟನೆ ‌ನಡೆಸಿದ್ದರು. ಇತಿಹಾಸದಲ್ಲಿ ಮೊದಲ ಬಾರಿಗೆ ‌ಇಷ್ಟು ಜನರನ್ನು ಅಮಾನತು ಮಾಡಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ಹಿಂದೆ ನಮ್ಮನ್ನು ವ್ಯಂಗ್ಯ ಮಾಡುವಾಗ ಬಿಜೆಪಿ ನಾಯಕರು ಎಂಜಾಯ್ ಮಾಡಿದ್ದಾರೆ ಎಂದರು.

Shwetha M