ಎಟಿಎಂ ಹಣ ತುಂಬುವ ವಾಹನದಲ್ಲೇ ಅಕ್ರಮವಾಗಿ ನಗದು ಸಾಗಾಟ

ಎಟಿಎಂ ಹಣ ತುಂಬುವ ವಾಹನದಲ್ಲೇ ಅಕ್ರಮವಾಗಿ ನಗದು ಸಾಗಾಟ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿದ್ದು, ಮತದಾರರ ಮನಗೆಲ್ಲೋಕೆ ಕುಕ್ಕರ್, ಸೀರೆ ಅಂತಾ ಹತ್ತಾರು ಗಿಫ್ಟ್ ನೀಡುತ್ತಿದ್ದಾರೆ. ಇಂಥ ಕೃತ್ಯಗಳನ್ನು ತಡೆಯಲು ಚುನಾವಣಾ ಆಯೋಗವು ಹದ್ದಿನ ಕಣ್ಣಿಟ್ಟಿದ್ದರೂ ಇದನ್ನು ತಪ್ಪಿಸಿ ಹಣ, ಉಡುಗೊರೆ ಹಂಚಲು ಮತ್ತು ಸಾಗಾಟಕ್ಕೆ ರಾಜಕೀಯ ಪಕ್ಷಗಳ ಮುಖಂಡರು, ಬೆಂಬಲಿಗರು ಮತ್ತಷ್ಟು ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇದೀಗ ಎಟಿಎಂಗೆ ಹಣ ತುಂಬಲು ಕೊಂಡೊಯ್ಯುವ ವಾಹನಗಳಲ್ಲೂ ಅಕ್ರಮವಾಗಿ ನಗದು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಅಳಿಯನಿಗೆ ಟಿಕೆಟ್ ಮಿಸ್ – ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಮಾಜಿ ಶಾಸಕ 

ಚುನಾವಣಾ ನೀತಿಸಂಹಿತೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಚೆಕ್ ಪೋಸ್ಟ್ ನಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ಬೆಂಗಳೂರಿನ ಹೆಬ್ಬಗೋಡಿಯಲ್ಲಿ ಎಟಿಎಂಗೆ ಹಣ ಸಾಗಿಸುವ 3 ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ವೇಳೆ, ಮೂರು ವಾಹನಗಳ ಪೈಕಿ ಒಂದು ವಾಹನದಲ್ಲಿ ಹೆಚ್ಚುವರಿ ಹಣ ಇರುವುದು ಪತ್ತೆಯಾಗಿದೆ. ಸಿಬ್ಬಂದಿ ಹೇಳಿದ ಲೆಕ್ಕಕ್ಕೂ ಹಣಕ್ಕೂ ವ್ಯತ್ಯಾಸ ಕಂಡು ಬಂದಿದೆ. ಹೆಚ್ಚುವರಿ 10 ಲಕ್ಷ ರೂ. ಹಣ ಸಾಗಿಸುತ್ತಿರುವುದು ಕಂಡುಬಂದ ಕಾರಣ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಬಳಿ ಚೆಕ್ ಪೋಸ್ಟ್​​ನಲ್ಲಿ ಎರಡು ದಿನಗಳ ಹಿಂದಷ್ಟೇ ಖಾಸಗಿ ಬಸ್​​ನಲ್ಲಿದ್ದ ಪ್ರಯಾಣಿಕರೊಬ್ಬರ ಬ್ಯಾಗ್​ನಲ್ಲಿ 2 ಕೋಟಿ ರೂ. ನಗದು ದೊರೆತಿತ್ತು. ಸಾರ್ವಜನಿಕ ಸಾರಿಗೆಗಳ ಮೂಲಕವೂ ಕೋಟ್ಯಂತರ ರೂ. ನಗದು ಸಾಗಾಟ ಮಾಡುವುದು ಬೆಳಕಿಗೆ ಬಂದಿತ್ತು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ನ್ಯಾಮತಿ ತಾಲೂಕಿನ ಜೀನಹಳ್ಳಿ ಚೆಕ್ ಪೊಸ್ಟ್​ನಲ್ಲೂ ಬೈಕ್ ತಡೆದ ಪೊಲೀಸರು ಸವಾರನನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ಸೊಂಟದಲ್ಲಿ ಕಂತೆಕಂತೆ ನೋಟುಗಳು ಪತ್ತೆಯಾಗಿವೆ.

ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸೊನ್ನ ಚೆಕ್‌ಪೋಸ್ಟ್‌‌ನಲ್ಲಿ ದಾಖಲೆಯಿಲ್ಲದ 3.2 ಲಕ್ಷ ರೂ. ನಗದು ಹಣ ಜಪ್ತಿ ಮಾಡಲಾಗಿದೆ. ಬೈಕ್​ನಲ್ಲಿ ನಗದು ತೆಗೆದುಕೊಂಡು ಹೋಗುತ್ತಿದ್ದ ಶ್ರೀಕಾಂತ್ ಮ್ಯಾಳೇಸಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಇವರು ಅಫಜಲಪುರದಿಂದ ಬೈಕ್​ನಲ್ಲಿ ಮಹಾರಾಷ್ಟ್ರದ ನಾಗಣಸೂರ್‌ಗೆ ಹಣ ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

suddiyaana