ಸ್ಪೀಕರ್ ಮೇಲೆ ಹಾಳೆ ಹರಿದು ಎಸೆದ ವಿರೋಧ ಪಕ್ಷದ ನಾಯಕರು – ಅಧಿವೇಶನದಿಂದ ಬಿಜೆಪಿಯ 10 ಸದಸ್ಯರು ಅಮಾನತು

ಸ್ಪೀಕರ್ ಮೇಲೆ ಹಾಳೆ ಹರಿದು ಎಸೆದ ವಿರೋಧ ಪಕ್ಷದ ನಾಯಕರು – ಅಧಿವೇಶನದಿಂದ ಬಿಜೆಪಿಯ 10 ಸದಸ್ಯರು ಅಮಾನತು

ಬೆಂಗಳೂರು: ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಭಾರಿ ಹೈಡ್ರಾಮ ನಡೆದಿದೆ. ಬುಧವಾರ ಮಧ್ಯಾಹ್ನ ಸದನದಲ್ಲಿ ಬಿಜೆಪಿ ನಾಯಕರು ಸ್ಪೀಕರ್ ಪೀಠದ ಮೇಲೆ ಬಿಲ್ ಪ್ರತಿ ಹರಿದು ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ಸದಸ್ಯರ ನಡೆಯಿಂದ ವಿಧಾನಸಭೆಯಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಗಿತ್ತು.

ಇಂಡಿಯಾ ಒಕ್ಕೂಟದ ಸಭೆಗೆ ಆಗಮಿಸಿದ್ದ ವಿಪಕ್ಷ ನಾಯಕರ ಸ್ವಾಗತಕ್ಕೆ ಐಎಎಸ್ ಅಧಿಕಾರಿಗಳನ್ನು ಬಳಕೆ ಮಾಡಿರುವ ಸರ್ಕಾರದ ನಡೆಗೆ ಬಿಜೆಪಿ ಸದಸ್ಯರು ವಿರೋಧಿಸಿ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಧರಣಿ‌ ನಡೆವೆಯೇ ವಿಧೇಯಕ ಅಂಗೀಕಾರ ಮಾಡಲಾಗಿತ್ತು. ವಿಧೇಯಕ ಅಂಗೀಕಾರದ ಬಳಿಕ ಸದನ ಮುಂದೂಡದೆ ಭೋಜನ ವಿರಾಮವನ್ನೂ ನೋಡದೆ ಬಜೆಟ್ ಮೇಲಿನ ಭಾಷಣಕ್ಕೆ ಸ್ಪೀಕರ್ ಸೂಚನೆ ನೀಡಿದ್ದಾರೆ. ಇದರಿಂದ ಕ್ರೋಧಗೊಂಡ ಬಿಜೆಪಿ ಸದಸ್ಯರು ತಮ್ಮ ಪ್ರತಿಭಟನೆ ‌ತೀವ್ರಗೊಳಿಸಿದರು. ಈ ವೇಳೆ ಪೀಠದಲ್ಲಿ ಉಪ ಸ್ಪೀಕರ್ ರುದ್ರಪ್ಪ ಲಮಾಣಿ ಇದ್ದರು. ಬಿಜೆಪಿ‌ ಸದಸ್ಯರು ಬಿಲ್ ಪತ್ರಿಯನ್ನು ಹರಿದು ಹಾಕಿ ಪೀಠದ ಮುಂದೆ ಎಸೆದರು.

ಇದನ್ನೂ ಓದಿ: ಬೆಳಗಾವಿ ಜೈನ ಮುನಿ ಹತ್ಯೆ ಪ್ರಕರಣ ಸಿಐಡಿ ತನಿಖೆಗೆ – ಸದನದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ

ಬಿಜೆಪಿ ಸದಸ್ಯರ ನಡೆಗೆ ಉಪ ಸ್ಪೀಕರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸದಸ್ಯರು ಬಿಲ್ ಪ್ರತಿ‌ ಹರಿದು ಹಾಕಿದ ಹಿನ್ನಲೆಯಲ್ಲಿ ಸ್ಪೀಕರ್ ಪೀಠಕ್ಕೆ ಮಾರ್ಷಲ್ ಗಳು ರಕ್ಷಣೆ ನೀಡಿದ್ದಾರೆ. ಬಿಜೆಪಿ‌ ಸದಸ್ಯರ ನಡೆಯನ್ನು ಖಂಡಿಸಿದ ಉಪ ಸಭಾಧ್ಯಕ್ಷರು ನಾನು‌ ದಲಿತ ಎಂಬ ಕಾರಣಕ್ಕಾಗಿ ಈ‌ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೀರಿ. ಇದು ಸರಿಯಲ್ಲ ಎಂದಿದ್ದಾರೆ. ಅಲ್ಲದೆ ಸದಸ್ಯರನ್ನು ಸದನದಿಂದ‌ ಹೊರಹಾಕಲು ಮಾರ್ಷಲ್ ಗಳಿಗೆ ಸೂಚನೆ ನೀಡಿದ್ದರು.

ಬಿಜೆಪಿ ನಾಯಕರು ಉಪ ಸಭಾಪತಿ ಮೇಲೆ ಕಾಗದ ಪತ್ರ ಎಸೆದು ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ ಹಿನ್ನಲೆಯಲ್ಲಿ ಬಿಜೆಪಿಯ 10 ಸದಸ್ಯರನ್ನು ಹಾಲಿ ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ. ಬಿಜೆಪಿಯ ಡಾ.ಅಶ್ವತ್ಥ್​​ ನಾರಾಯಣ, ವೇದವ್ಯಾಸ ಕಾಮತ್, ಅರವಿಂದ ಬೆಲ್ಲದ್, ಧೀರಜ್ ಮುನಿರಾಜು, ಯಶಪಾಲ್ ಸುವರ್ಣ, ಸುನೀಲ್ ಕುಮಾರ್, ಆರ್.ಅಶೋಕ್, ಉಮಾನಾಥ್ ಕೋಟ್ಯಾನ್, ಆರಗ ಜ್ಞಾನೇಂದ್ರ, ಮತ್ತು ಭರತ್ ಶೆಟ್ಟಿ ಅವರನ್ನು ಸ್ಪೀಕರ್ ಯುಟಿ ಖಾದರ್ ಅವರು ಅಮಾನತು ಮಾಡಿದ್ದಾರೆ. ಈ 10 ಸದಸ್ಯರನ್ನು ಈ ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಲಾಗಿದೆ ಎಂದು ಸ್ಪೀಕರ್ ಯುಟಿ ಖಾದರ್ ತಿಳಿಸಿದ್ದಾರೆ.

ಇನ್ನು ಸ್ಪೀಕರ್‌ ಆದೇಶದ ಬೆನ್ನಲ್ಲೇ ಮಾರ್ಷಲ್‌ಗಳು ಅಮಾನತುಗೊಂಡ ಬಿಜೆಪಿ ನಾಯಕರನ್ನು ಸದನದಿಂದ ಹೊರಹಾಕಿದ್ದಾರೆ. ಸ್ಪೀಕರ್‌ ಕಚೇರಿ ಮೆಟ್ಟಿಲು ಮೇಲೆ ಕುಳಿತು ಬಿಜೆಪಿ ಸದಸ್ಯರಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಈ ವೇಳೆ ವಿಧಾನಸಭೆ ಪೂರ್ವಭಾಗದ ಪ್ರವೇಶ ದ್ವಾರದ ಗಾಜು ಪುಡಿ ಪುಡಿ ಆಗಿದೆ. ಈ ವೇಳೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಕುಸಿದು ಬಿದ್ದಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

suddiyaana