ಚಂದ್ರನ ಬಳಿ ನಡೆದ ಚಂದ್ರಗಿರಿಯ ಸಾರಾ – ಕನ್ನಡದ ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ಇನ್ನಿಲ್ಲ

ಚಂದ್ರನ ಬಳಿ ನಡೆದ ಚಂದ್ರಗಿರಿಯ ಸಾರಾ – ಕನ್ನಡದ ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ಇನ್ನಿಲ್ಲ

ಮಾಗಿದ ಬದುಕು. ಆಳವಾದ ನೋಟ. ವಿಶಾಲ ದೃಷ್ಟಿ. ಧರ್ಮದ ಹೆಸರಲ್ಲಿ ಹಾಕಿದ ಕಟ್ಟುಪಾಡುಗಳನ್ನು ಮೀರಿ ಧರ್ಮದ ನಿಜವಾದ ಸಾರವನ್ನು ಮಾತ್ರ ಪಸರಿಸುವ ಕಾಯಕ. ಮಹಿಳಾ ಸಬಲೀಕರಣದ ಚಿಂತನೆ.. ಸ್ತ್ರೀ ದನಿಯಾಗಿದ್ದ ಉಮ್ಮಾ ಇನ್ನು ನೆನಪು ಮಾತ್ರ. ಚಂದ್ರಗಿರಿಯ ತೀರದಲ್ಲಿ ಸಾರಾ ಹರಡಿರುವ ಸಾಹಿತ್ಯದ ಬೆಳದಿಂಗಳು ಇನ್ನೂ ಹಾಗೇ ಇದೆ. ಆದರೆ, ಈಗ ಚಂದ್ರಗಿರಿಯ ತೀರದಲ್ಲಿ ಅವರಿಲ್ಲ. ಜನವರಿ 10ರಂದು ಅಪಾರ ಅಭಿಮಾನಿಗಳನ್ನು ಅಗಲಿ ಸಾರಾ ಅಬೂಬಕ್ಕರ್ ದೂರ ಸಾಗಿದ್ದಾರೆ.

ಕನ್ನಡ ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್‌ ದೀರ್ಘಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಕೇರಳದ ಕಾಸರಗೋಡು ಜಿಲ್ಲೆಯವರಾದ ಸಾರಾ ಅಬೂಬಕ್ಕರ್ ಬಾಲ್ಯದಿಂದಲೇ ಬರವಣಿಯೆ ಬಗ್ಗೆ ಆಸಕ್ತಿ ಹೊಂದಿದ್ದರುತಮ್ಮ ಬರಹಗಳಲ್ಲಿ ಮುಸ್ಲಿಮ್‌ ನಾಯಕ-ನಾಯಕಿಯ ಮೂಲಕ ಮುಸ್ಲಿಮರ ಸಂವೇದನೆಗಳನ್ನು ನಾಡಿಗೆ ಪರಿಚಯಿಸಿದ್ದರು. ಹಾಗೆಯೇ ಕೆಲವೊಂದು ಸಂಪ್ರದಾಯಗಳನ್ನು ಪ್ರಶ್ನಿಸುತ್ತಲೇ ಸ್ತ್ರೀ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದರು. ಕಟುವಾಗಿ ಟೀಕಿಸಬೇಕಾದ ವಿಚಾರಗಳು ಬಂದಾಗ ಅದಕ್ಕೂ ಹಿಂದೆ ಸರಿದವರಲ್ಲ ಸಾರಾ ಅಬೂಬಕ್ಕರ್‌.

ಸಾರಾ ಅವರು 1936ರ ಜೂನ್ 30ರಂದು ಕಾಸರಗೋಡಿನ ಚಂದ್ರಗಿರಿ ನದಿ ತೀರದ  ಗ್ರಾಮವೊಂದರಲ್ಲಿ ಜನಿಸಿದರು. ತಂದೆ ಪಿ.ಅಹಮದ್ ನ್ಯಾಯವಾದಿ. ತಾಯಿ ಜೈನಾಬಿ. ಹುಟ್ಟಿದೂರಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಸಾರಾ, ಹೈಸ್ಕೂಲಿನವರೆಗೆ ಕಲಿತದ್ದು ಕಾಸರಗೋಡಿನಲ್ಲಿ. ಎಂಜನಿಯರ್ ಆಗಿದ್ದ ಅಬೂಬಕ್ಕರ್‌ ಅವರೊಡನೆ ಸಾರಾ ಅವರು ಮದುವೆಯಾದರು.  ವಿವಾಹದಿಂದಾಗಿ ವಿದ್ಯಾಭ್ಯಾಸಕ್ಕೆ ವಿದಾಯ ಹೇಳುವಂತಾಯಿತು. ಆದರೆ ಓದಿನಲ್ಲಿ ನಿರಂತರ ಆಸಕ್ತರಾಗಿದ್ದ ಸಾರಾ ಅವರು ಶಿವರಾಮ  ಕಾರಂತ, ಇನಾಂದಾರ್, ಭೈರಪ್ಪ, ಅನಂತಮೂರ್ತಿ ಇವರೆಲ್ಲರ ಬರವಣಿಗೆಗೆ ಮಾರು ಹೋಗಿ ಸದಾ ಓದಿನಲ್ಲಿ ಮಗ್ನರಾಗಿರುತ್ತಿದ್ದರು. ಮನೋವಿಜ್ಞಾನದ ಬಗ್ಗೆ ತ್ರಿವೇಣಿಯವರು ಬರೆದ ಕಾದಂಬರಿಗಳು ಸಾರಾ ಅವರಲ್ಲಿ  ಆಕರ್ಷಣೆ ಹುಟ್ಟಿಸಿದವು.

ತಮ್ಮ ಸುತ್ತಲಿನಲ್ಲಿಯೇ ಹೆಣ್ಣು ಮಕ್ಕಳ ಕಷ್ಟ, ಸಂಕಟಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸಾರಾ ಅವರ ಮೊದಲ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಈ ಕಥೆಯಲ್ಲಿ ಹೊರಹೊಮ್ಮಿದ ವಾಸ್ತವಿಕ ಬದುಕಿನ ಚಿತ್ರಣ ಮತ್ತು ಧರ್ಮದ ಕಟ್ಟುಪಾಡುಗಳಲ್ಲಿ ಶೋಷಿತಗೊಂಡ ಮಹಿಳೆಯರ ಧ್ವನಿಗಳು ಅಸಂಖ್ಯಾತ ಓದುಗರ ಹೃದಯ ತಟ್ಟುವಲ್ಲಿ ಯಶಸ್ವಿಯಾಯಿತು.

ಸಾರಾ ಅಬೂಬಕ್ಕರ್ ಬರೆದ ಕೃತಿಗಳು:
ಸಹನಾ, ವಜ್ರಗಳು, ಕದನವಿರಾಮ, ಸುಳಿಯಲ್ಲಿ ಸಿಕ್ಕವರು, ಪ್ರವಾಹ-ಸುಳಿ, ತಳ ಒಡೆದ ದೋಣಿ, ಪಂಜರ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇವರು 10 ಕ್ಕೂ ಹೆಚ್ಚು ಕಾದಂಬರಿ, 6 ಕಥಾ ಸಂಕಲನ, 5 ಬಾನುಲಿ ನಾಟಕ, 4 ಲೇಖನ, ಒಂದು ಪ್ರವಾಸ ಕಥನ ಬರೆದಿದ್ದಾರೆ.

ಸಾರಾ ಅವರಿಗೆ ಸಂದ ಪ್ರಶಸ್ತಿಗಳು:
ಸಾರಾ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ  ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜಾದೇವಿ ಪ್ರಶಸ್ತಿ, ‘ಸಹನಾ’ ಕಾದಂಬರಿಗೆ ವರ್ಧಮಾನ ಪ್ರಶಸ್ತಿ, ‘ಸುಳಿಯಲ್ಲಿ ಸಿಕ್ಕವರು’ ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಹಾಗೂ ಸಂದೇಶ ಪ್ರಶಸ್ತಿ, ಅನುಪಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ  ಮುಂತಾದ ಹಲವಾರು ಪ್ರಮುಖ ಪ್ರಶಸ್ತಿ ಗೌರವಗಳು ಸಂದಿವೆ.

suddiyaana