ತವರು ಜಿಲ್ಲೆ ಬಿಟ್ಟು ಬೇರೆ ಕ್ಷೇತ್ರಗಳಿಗೆ ಜಂಪ್ ಆದವರೆಷ್ಟು? – ಬದಲಾಗುತ್ತಾ ಲೆಕ್ಕಾಚಾರ?

ತವರು ಜಿಲ್ಲೆ ಬಿಟ್ಟು ಬೇರೆ ಕ್ಷೇತ್ರಗಳಿಗೆ ಜಂಪ್ ಆದವರೆಷ್ಟು? – ಬದಲಾಗುತ್ತಾ ಲೆಕ್ಕಾಚಾರ?

ಲೋಕಸಭಾ ಚುನಾವಣೆಗೆ ನಾಮಿನೇಷನ್ ಭರಾಟೆ ಜೋರಾಗಿ ನಡೀತಿದೆ. ನಾಮಪತ್ರದ ದಿನವೇ ಶಕ್ತಿಪ್ರದರ್ಶನದ ಮೂಲಕ ಅಭ್ಯರ್ಥಿಗಳು ಸಮರಕ್ಕೆ ಸಜ್ಜಾಗುತ್ತಿದ್ದಾರೆ. ಆದ್ರೆ ಬಿಜೆಪಿ ಮತ್ತು ಕಾಂಗ್ರೆಸ್​ನಲ್ಲಿ ಬಂಡಾಯದ ಬೆಂಕಿ ಧಗಧಗಿಸುತ್ತಿದೆ. ಟಿಕೆಟ್ ವಂಚಿತರು ಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದು, ಕೆಲ ಕ್ಷೇತ್ರಗಳಲ್ಲಿ ಪಕ್ಷೇತರವಾಗಿ ಸ್ಪರ್ಧೆಗಿಳಿದಿದ್ದಾರೆ. ಅದ್ರಲ್ಲೂ ವಲಸಿಗರಿಗೆ ಟಿಕೆಟ್ ನೀಡಿರೋದು ಸ್ಥಳೀಯ ಮಟ್ಟದಲ್ಲಿ ಕಿಚ್ಚು ಹಚ್ಚಿದೆ. ಸ್ವಪಕ್ಷೀಯ ಅಭ್ಯರ್ಥಿ ವಿರುದ್ಧವೇ ಗೋ ಬ್ಯಾಕ್ ಅಭಿಯಾನ ನಡೆಸುತ್ತಿದ್ದಾರೆ. ಅಷ್ಟಕ್ಕೂ ಈ ಬಾರಿಯ ಚುನಾವಣೆಯಲ್ಲಿ ವಲಸಿಗ ಅಭ್ಯರ್ಥಿಗಳಿಗೆ ಹೆಚ್ಚು ಮಣೆ ಹಾಕಲಾಗಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್​ನಲ್ಲೂ ತವರು ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದಾರೆ. ಅಷ್ಟಕ್ಕೂ ಯಾವ ಯಾವ ಪಕ್ಷಗಳಲ್ಲಿ ಯಾರು ಕ್ಷೇತ್ರದಿಂದ ಜಂಪ್ ಮಾಡಿದ್ದಾರೆ..? ಜನ ವಲಸಿಗರಿಗೆ ಮಣೆ ಹಾಕ್ತಾರಾ..? ಕ್ಷೇತ್ರದ ಲೆಕ್ಕಾಚಾರ ಇಲ್ಲಿದೆ..

ಇದನ್ನೂ ಓದಿ: BJP ಸಂಸದ ಶ್ರೀನಿವಾಸ್ ಪ್ರಸಾದ್ ಸೋದರ ಸೇರಿ 30 ಮುಖಂಡರು ಕಾಂಗ್ರೆಸ್ ಸೇರ್ಪಡೆ

ಕರ್ನಾಟಕದಲ್ಲಿ ಚುನಾವಣಾ ಕಣ ದಿನದಿನಕ್ಕೂ ರಂಗೇರುತ್ತಿದ್ದು, ಈಗಾಗಲೇ ಮೂರು ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ. ಆದ್ರೆ 28 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ಹೊರಗಿನವರಿಗೆ ಟಿಕೆಟ್‌ ನೀಡಲಾಗಿದ್ದು, ಮೂರು ಪಕ್ಷಗಳಲ್ಲಿ ವಲಸಿಗರ ಭರಾಟೆ ಜೋರಾಗಿದೆ. ಹಲವು ಕ್ಷೇತ್ರಗಳಲ್ಲಿ ವಲಸಿಗರಿಗೆ ಆಯಾ ಪಕ್ಷಗಳಲ್ಲಿಯೇ ವಿರೋಧ ಕೂಡ ವ್ಯಕ್ತವಾಗಿದ್ದು, ಹಿರಿಯ ನಾಯಕರಿಗೆ ಮನವೊಲಿಕೆ ಮಾಡುವುದೇ ದೊಡ್ಡ ಸವಾಲಾಗಿದೆ. ಬಿಜೆಪಿಯ 25 ಅಭ್ಯರ್ಥಿಗಳ ಪೈಕಿ ಐವರು ಹೊರಗಿನ ಅಭ್ಯರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಟಿಕೆಟ್‌ ನೀಡಲಾಗಿದೆ. ಇನ್ನು, ಕಾಂಗ್ರೆಸ್‌ನಲ್ಲಿ 7 ಹೊರಗಿನ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗಿದ್ದರೆ, ಜೆಡಿಎಸ್‌ನಿಂದ ಒಂದು ಕ್ಷೇತ್ರದಲ್ಲಿ ಹೊರಗಿನವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ.

ವಲಸಿಗರಿಗೆ ಮಣೆ! 

ಹಾಸನಕ್ಕೆ ಸೇರಿದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ರಾಮನಗರವನ್ನು ಕರ್ಮ ಭೂಮಿ ಮಾಡಿಕೊಂಡಿದ್ದಾರೆ. ಆದರೆ, ಈ ಬಾರಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಧಾರವಾಡದ ಜಗದೀಶ್‌ ಶೆಟ್ಟರ್‌ ಅವರಿಗೆ ಬೆಳಗಾವಿಯಲ್ಲಿ ಟಿಕೆಟ್‌ ನೀಡಲಾಗಿದ್ದರೆ, ದಕ್ಷಿಣ ಕನ್ನಡದ ಶೋಭಾ ಕರಂದ್ಲಾಜೆಗೆ ಬೆಂಗಳೂರು ಉತ್ತರದಲ್ಲಿ ಟಿಕೆಟ್‌ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ ಅಭ್ಯರ್ಥಿಯಾಗಿರುವ ಡಾ ಸಿಎನ್‌ ಮಂಜುನಾಥ್‌ ಅವರ ತವರು ಹಾಸನ ಆಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬಾಗಲಕೋಟೆಯ ಗೋವಿಂದ ಕಾರಜೋಳ ಅವರಿಗೆ ಚಿತ್ರದುರ್ಗ ಟಿಕೆಟ್‌ ನೀಡಲಾಗಿದೆ. ಇನ್ನು, ಬೆಂಗಳೂರಿನ ವಿ ಸೋಮಣ್ಣ ಅವರು ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಇವರು ಮೂಲತಃ ಕನಕಪುರದವರು. ಇಷ್ಟು ಅಭ್ಯರ್ಥಿಗಳ ಪೈಕಿ ಜಗದೀಶ್ ಶೆಟ್ಟರ್, ಶೋಭಾ ಕರಂದ್ಲಾಜೆ, ಗೋವಿಂದ ಕಾರಜೋಳ, ವಿ.ಸೋಮಣ್ಣಗೆ ಬಂಡಾಯದ ಬಿಸಿ ತಟ್ಟಿದೆ. ಸ್ವಪಕ್ಷೀಯರೇ ಆಕ್ರೋಶಗೊಂಡಿದ್ದಾರೆ.

ಇದು ಬಿಜೆಪಿ ಕಥೆಯಾದ್ರೆ ಈ ಬಾರಿ ಕಾಂಗ್ರೆಸ್​ ಪಕ್ಷ ಕುಟುಂಬ ರಾಜಕಾರಣಕ್ಕೆ ಹಾಗೂ ವಲಸಿಗರಿಗೇ ಹೆಚ್ಚು ಮಣೆ ಹಾಕಿದಂತೆ ಕಾಣ್ತಿದೆ. ಅವ್ರಿಗೆ ಕೊಟ್ರೆ ಇವ್ರಿಗೆ ಸಿಟ್ಟು ಇವ್ರಿಗೆ ಕೊಟ್ರೆ ಅವ್ರಿಗೆ ಸಿಟ್ಟು ಅಂತಾ ತಮ್ಮ ನಾಯಕರು ಹಾಗೂ ಅವ್ರ ಕುಟುಂಬಸ್ಥರಿಗೇ ಮಣೆ ಹಾಕಿದ್ದಾರೆ. 7ರಿಂದ 8 ಕ್ಷೇತ್ರಗಳಲ್ಲಿ ಸಚಿವರು, ಶಾಸಕರ ಮಕ್ಕಳಿಗೇ ಟಿಕೆಟ್ ನೀಡಲಾಗಿದೆ. ಹಾಗೇ 7 ಹೊರಗಿನ ನಾಯಕರಿಗೆ ಟಿಕೆಟ್ ಕೊಟ್ಟಿದ್ದಾರೆ.. ಯಾರ್ಯಾರೆಲ್ಲಾ ಅನ್ನೋದನ್ನ ನೋಡೋದಾದ್ರೆ..

ಕೈನಲ್ಲೂ ವಲಸೆ ಪಾಲಿಟಿಕ್ಸ್!  

ಬೆಂಗಳೂರು ಉತ್ತರದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಪ್ರೊ. ಎಂ ವಿ ರಾಜೀವ್‌ ಗೌಡ ಕೋಲಾರದವರು. ಇತ್ತ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ರಕ್ಷಾ ರಾಮಯ್ಯ ಬೆಂಗಳೂರಿನವರು. ಶಿವಮೊಗ್ಗದಲ್ಲಿ ಸ್ಪರ್ಧಿಸಿರುವ ಗೀತಾ ಶಿವರಾಜಕುಮಾರ್‌ ಶಿವಮೊಗ್ಗದವರೇ ಆದರೂ ಅವರ ಪತಿ ಶಿವರಾಜ್‌ಕುಮಾರ್‌ ಚಾಮರಾಜನಗರಕ್ಕೆ ಸೇರಿದ್ದು, ಸದ್ಯ ಇಬ್ಬರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇನ್ನು, ಚಿತ್ರದುರ್ಗದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎಂ ಚಂದ್ರಪ್ಪ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಗೆ ಸೇರಿದವರು. ಆದರೆ, ಒಂದು ಬಾರಿ ಚಿತ್ರದುರ್ಗದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಚಿಕ್ಕೋಡಿಯಿಂದ ಸ್ಪರ್ಧಿಸಿರುವ ಪ್ರಿಯಾಂಕಾ ಜಾರಕಿಹೊಳಿ ಗೋಕಾಕ್​ನವರಾಗಿದ್ದು, ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸೇರಿದವರಾಗಿದ್ದಾರೆ. ಇನ್ನು, ಬಾಗಲಕೋಟೆಯಿಂದ ಸ್ಪರ್ಧಿಸಿರುವ ಸಂಯುಕ್ತಾ ಶಿವಾನಂದ ಪಾಟೀಲ್‌ ವಿಜಯಪುರಕ್ಕೆ ಸೇರಿದ್ದರೆ, ಕೋಲಾರದಿಂದ ಸ್ಪರ್ಧಿಸಿರುವ ಕೆ.ವಿ ಗೌತಮ್‌ ಬೆಂಗಳೂರಿಗೆ ಸೇರಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್ ಏನೋ ವಲಸಿಗರಿಗೆ ಅಸ್ತು ಅಂದಿದೆ ನಿಜ. ಆದ್ರೆ ಹಲವು ಲೋಕಸಭಾ ಕ್ಷೇತ್ರಗಳಿಗೆ ವಲಸಿಗರಿಗೆ ವಿರೋಧ ಕೂಡ ವ್ಯಕ್ತವಾಗಿದೆ. ಜಗದೀಶ್‌ ಶೆಟ್ಟರ್‌ಗೆ ಬೆಳಗಾವಿಯಲ್ಲಿ ವಿರೋಧ ವ್ಯಕ್ತವಾಗಿದ್ದರೆ, ತುಮಕೂರಲ್ಲಿ ವಿ ಸೋಮಣ್ಣಗೆ, ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳಗೆ, ಬೆಂಗಳೂರು ಉತ್ತರದಲ್ಲಿ ಶೋಭಾ ಕರಂದ್ಲಾಜೆಗೆ ಬಿಜೆಪಿಯಲ್ಲಿ ವಿರೋಧ ವ್ಯಕ್ತವಾಗಿದೆ. ಇನ್ನು, ಕಾಂಗ್ರೆಸ್‌ನಲ್ಲಿ ಬಾಗಲಕೋಟೆಯಿಂದ ಸ್ಪರ್ಧಿಸಿರುವ ಸಂಯುಕ್ತಾ ಪಾಟೀಲ್‌ಗೆ ವಿರೋಧ ವ್ಯಕ್ತವಾಗಿದೆ. ಉಳಿದಂತೆ ಸಣ್ಣಪುಟ್ಟ ವ್ಯತ್ಯಾಸಗಳು ವಿವಿಧ ಕ್ಷೇತ್ರಗಳಲ್ಲಿ ಕಂಡುಬಂದಿದೆ. ಹೀಗಾಗಿ ವಲಸಿಗರಿಗೆ ಮತದಾರರು ಇರ್ಲಿ ಅವ್ರ ಪಕ್ಷದವ್ರೇ ಸಪೋರ್ಟ್ ಮಾಡದೇ ಇರೋದು ಆಕ್ರೋಶಕ್ಕೆ ಕಾರಣವಾಗಿದೆ.

Shwetha M