ಮತ್ತೆ ತೆನೆ ಹೊತ್ತ ದತ್ತಾ..! – ಕಡೂರಿನಿಂದ ಜೆಡಿಎಸ್ ಟಿಕೆಟ್ ಫಿಕ್ಸ್

ಮತ್ತೆ ತೆನೆ ಹೊತ್ತ ದತ್ತಾ..! – ಕಡೂರಿನಿಂದ ಜೆಡಿಎಸ್ ಟಿಕೆಟ್ ಫಿಕ್ಸ್

ಕಾಂಗ್ರೆಸ್ ಸೇರಿ ಟಿಕೆಟ್ ಸಿಗದೆ ನಿರಾಶರಾಗಿದ್ದ ವೈಎಸ್‌ವಿ ದತ್ತಾ ಘರ್ ವಾಪ್ಸಿ ಆಗಿದ್ದಾರೆ. ಅತ್ತ ಅಲ್ಲೂ ಇಲ್ಲದೇ, ಇತ್ತ ಕೈ ಪಾಳಯದಲ್ಲೂ ಟಿಕೆಟ್ ಸಿಗದೆ ಅತಂತ್ರರಾಗಿದ್ದ ದತ್ತಾ ಜೊತೆ ಮತ್ತೆ ದಳಪತಿಗಳು ನಿಂತಿದ್ದಾರೆ. ಅಷ್ಟೇ ಅಲ್ಲ, ಕಡೂರು ಜೆಡಿಎಸ್ ಅಭ್ಯರ್ಥಿಯನ್ನಾಗಿ ಘೋಷಣೆ ಕೂಡಾ  ಮಾಡಿದ್ದಾರೆ.

ಇದನ್ನೂ ಓದಿ: ಅತ್ತ ‘ತೆನೆ’ ಇಳಿಸಿದ್ದಾಯ್ತು.. ಇತ್ತ ‘ಕೈ’ ಹಿಡಿದಾಯ್ತು..ಆದರೂ ಟಿಕೆಟ್ ಮಿಸ್ – ವೈಎಸ್‌ವಿ ದತ್ತ ಅತಂತ್ರ, ಅಭಿಮಾನಿಗಳಿಗೆ ಭಾವುಕ ಪತ್ರ

ಇತ್ತೀಚೆಗಷ್ಟೇ ವೈಎಸ್‌ವಿ ದತ್ತಾ ಕಾಂಗ್ರೆಸ್ ಗೆ ಸೇರಿದ್ದರು. ಆದರೆ, ಕಾಂಗ್ರೆಸ್‌ನಿಂದ ಚುನಾವಣೆಗೆ ಟಿಕೆಟ್ ಸಿಗದೆ ನಿರಾಶರಾಗಿದ್ದರು. ಅಭಿಮಾನಿಗಳಿಗೆ ಭಾವುಕರಾಗಿ ಪತ್ರ ಕೂಡಾ ಬರೆದಿದ್ದರು. ಇದಾದ ನಂತರ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿರುವ ದತ್ತಾ ನಿವಾಸಕ್ಕೆ ಜೆಡಿಎಸ್ ನಾಯಕ ಹೆಚ್.ಡಿ ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಭೇಟಿ ನೀಡಿದ್ದರು. ಕಡೂರಿನಲ್ಲಿ ದತ್ತ ಸ್ಪರ್ಧಿಸಲಿದ್ದಾರೆ ಎಂದು ಈ ವೇಳೆ ರೇವಣ್ಣ ಘೋಷಣೆ ಮಾಡಿದ್ದಾರೆ.

ಇದೇ ವೇಳೆ ಮಾತನಾಡಿದ ವೈ.ಎಸ್‌.ವಿ ದತ್ತ, ‘ಪಕ್ಷೇತರವಾಗಿ ಸ್ಪರ್ಧಿಸುವುದು ಬೇಡ ಎಂದು ದೇವೇಗೌಡರು ನನಗೆ ಹೇಳಿದ್ದಾರೆ. ಹಾಗಾಗಿ ಅವರ ಮಾತಿಗೆ ಬೆಲೆ ಕೊಡುತ್ತೇನೆ’ ಎಂದು ಹೇಳಿದ್ದಾರೆ. ಕಾರ್ಯಕರ್ತರ ಅಭಿಪ್ರಾಯವನ್ನೂ ಪಡೆದಿದ್ದೇನೆ. ಎಲ್ಲರ ಸಮ್ಮತಿಯೊಂದಿಗೆ ಜೆಡಿಎಸ್ ಸೇರಿದ್ದು, 18ರಂದು ನಾಮಪತ್ರ ಸಲ್ಲಿಸಲಿದ್ದೇನೆ’ ಎಂದು ದತ್ತಾ ಹೇಳಿದ್ದಾರೆ.

ಕಡೂರು ಕ್ಷೇತ್ರದ ಜೆಡಿಎಸ್ ಟಿಕೆಟ್ ಈಗಾಗಲೇ ಧನಂಜಯ್ ಅವರಿಗೆ ಘೋಷಣೆಯಾಗಿತ್ತು. ಆದರೆ ಇದೀಗ ದತ್ತಾ ಮತ್ತೆ ಜೆಡಿಎಸ್ ಸೇರಿರುವುದರಿಂದ, ಅವರೇ ಅಭ್ಯರ್ಥಿ ಎಂದು ರೇವಣ್ಣ ಘೋಷಣೆ ಮಾಡಿರುವುದಿರಿಂದ ಧನಂಜಯ್ ಕಣದಿಂದ ಹಿಂದೆ ಸರಿಯಬೇಕಾಗಲಿದೆ.

suddiyaana