ಗೊಸುಂಬೆ ಉರುಫ್ ಊಸರವಳ್ಳಿ ಕಾಂಗ್ರೆಸ್ ಪಕ್ಷಕ್ಕೆ ಒಳಗೊಂದು ಹೊರಗೊಂದು ವೇಷ – ಜೆಡಿಎಸ್ ವಾಗ್ದಾಳಿ

ಗೊಸುಂಬೆ ಉರುಫ್ ಊಸರವಳ್ಳಿ ಕಾಂಗ್ರೆಸ್ ಪಕ್ಷಕ್ಕೆ ಒಳಗೊಂದು ಹೊರಗೊಂದು ವೇಷ – ಜೆಡಿಎಸ್ ವಾಗ್ದಾಳಿ

ಲೋಕಸಭೆ ಚುನಾವಣೆಗೆ ಕೆಲವೇ ಕೆಲವು ದಿನಗಳು ಬಾಕಿ ಉಳಿದಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡ ಬಳಿಕ ಕಾಂಗ್ರೆಸ್‌ ಸರ್ಕಾರದ ವಿರುದ್ದ ಹೆಚ್​ಡಿ ಕುಮಾರಸ್ವಾಮಿ ಅವರು ಒಗ್ಗಟ್ಟಿನ ಹೋರಾಟ ನಡೆಸುತ್ತಿದ್ದಾರೆ. ಈ ನಡುವೆ ಕುಮಾರಸ್ವಾಮಿ ಅವರು ಬಿಜೆಪಿ ಹಾಗೂ ಆರ್​ಎಸ್​ಎಸ್​ ವಿರುದ್ಧ ಟೀಕಿಸಿರುವುದನ್ನು ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಈ ಟ್ವೀಟ್‌ ಗೆ ತಿರುಗೇಟು ಕೊಟ್ಟ ಜೆಡಿಎಸ್ (JDS), ಗೊಸುಂಬೆ ಉರುಫ್ ಊಸರವಳ್ಳಿ ಕಾಂಗ್ರೆಸ್ ಪಕ್ಷಕ್ಕೆ ಒಳಗೊಂದು ಹೊರಗೊಂದು ವೇಷ ಎಂದು ಹೇಳಿದೆ.

ಕಾಂಗ್ರೆಸ್‌ ಟೀಕೆಗಳಿಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ನಲ್ಲಿ ಪ್ರತ್ಯುತ್ತರ ನೀಡಿರುವ ಜೆಡಿಎಸ್‌, ಗೋಸುಂಬೆ ಉರುಫ್ ಊಸರವಳ್ಳಿ ಕಾಂಗ್ರೆಸ್ ಪಕ್ಷಕ್ಕೆ ಒಳಗೊಂದು ಹೊರಗೊಂದು ವೇಷ. ಈ ದೇಶದಲ್ಲಿ ಯಾವುದಾದರೂ ಛದ್ಮವೇಷದಾರಿ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ. ಹೆಚ್‌.ಡಿ.ಕುಮಾರಸ್ವಾಮಿ ಅವರು ಹಾಗಲ್ಲ. ಏನಾದರೂ ಹೇಳಬೇಕೆಂದರೆ; ನೇರ, ದಿಟ್ಟ, ನಿಷ್ಠುರ. ಏನೇ ಬಂದರೂ ಎದುರಿಸುವ ಕೆಚ್ಚು ಅವರದ್ದು, ಪಲಾಯನ ಮಾಡುವ ಪೈಕಿ ಅವರಲ್ಲ. ಎಂದು ತಿಳಿಸಿದೆ.

ಇದನ್ನೂ ಓದಿ: ಸಿಲಿಕಾನ್‌ ಸಿಟಿಯಲ್ಲಿ ನಿರ್ಮಾಣಗೊಳ್ಳಲಿದೆ ಸುರಂಗ ಮಾರ್ಗ – ಮೊದಲ ಹಂತದಲ್ಲಿ ಹೆಬ್ಬಾಳದಿಂದಲೇ ರಸ್ತೆ ನಿರ್ಮಾಣ!

RSS ಬಗ್ಗೆ ಕುಮಾರಸ್ವಾಮಿ ಅವರು ಹಿಂದೆ ಮಾತನಾಡಿದ್ದಾರೆ, ಬರೆದಿದ್ದಾರೆ.. ನಿಜ. ಟೀಕೆ ಮಾಡಿದ್ದಾರೆನ್ನುವುದೂ ಹೌದು. ಹಾಗೆಯೇ, ಕಲ್ಲಡ್ಕ ಪ್ರಭಾಕರ ಭಟ್ಟರು ನಡೆಸುತ್ತಿರುವ ಶ್ರೀರಾಮ ವಿದ್ಯಾಲಯಕ್ಕೆ ಭೇಟಿ ನೀಡಿದಾಗಲೂ ಅವರು ಏನು ಹೇಳಬೇಕೋ ಅದನ್ನೇ ಹೇಳಿದ್ದಾರೆ. ಕಾಮಾಲೆ ಕಣ್ಣಿನ, ಕುತ್ಸಿತ ಕಿವಿಯ ಕಾಂಗ್ರೆಸ್‌ಗೆ ಅದೆಲ್ಲಾ ಗೊತ್ತಾಗುವುದೇ ಇಲ್ಲ ಎಂದು ಟಾಂಗ್‌ ಕೊಟ್ಟಿದೆ.

ಪ್ರಭಾಕರ ಭಟ್ಟರ ಶಾಲೆಯಲ್ಲಿ, ನಿನ್ನೆ ದಿನ ಮಂಡ್ಯದಲ್ಲಿ ಕುಮಾರಸ್ವಾಮಿ ಅವರು ಮಾಡಿರುವ ಭಾಷಣಗಳನ್ನು ಕಾಂಗ್ರೆಸ್ಸಿಗರು ಕೇಳಲಿ. ಕೊಳೆತು ನಾರುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಕೊಚ್ಚೆಯೇ ಸಹ್ಯವಾಗಿದೆಯೇ ಹೊರತು ಸತ್ಯವಲ್ಲ. ವೀರೇಂದ್ರ ಪಾಟೀಲರ ಕಾಲದಲ್ಲಿ (1989) ಚನ್ನಪಟ್ಟಣ, ರಾಮನಗರದಲ್ಲಿ ಬೆಂಕಿ ಹಾಕಿ ರಾಜಕೀಯ ಬೇಳೆ ಬೇಯಿಸಿಕೊಂಡ ಗಿರಾಕಿಗಳು ನೀವು? ಹಿರಿಯರಾದ ವೀರೇಂದ್ರ ಪಾಟೀಲರ ಜೀವಕ್ಕೆ ಕ್ಷೋಭೆ ಕೊಟ್ಟ ಆಸಾಮಿಗಳೂ ನೀವೇ? ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ ವಾಗ್ದಾಳಿ ನಡೆಸಿದೆ.

ಕೇಸರಿ ಬಗ್ಗೆ ಹೇಳಿದ್ದೀರಿ, ಸರಿ. ಅದು ನಮ್ಮ ಸಂಪ್ರದಾಯ, ಸಂಸ್ಕೃತಿಯ ಪ್ರತೀಕ. ನಮ್ಮ ನಂಬಿಕೆಯ ಹೆಗ್ಗುರುತು. ಸ್ವಧರ್ಮದ ಬಗ್ಗೆ ಗೌರವವೇ ಇಲ್ಲದವರಿಗೆ, ಓಲೈಕೆ ಮಾಡಿಕೊಂಡೇ ಒಲೆ ಉರಿಸಿಕೊಳ್ಳುವವರಿಗೆ ಆಚಾರ ವಿಚಾರಗಳ ಪಾವಿತ್ರ್ಯತೆ ಎಲ್ಲಿ ಗೊತ್ತಾಗಬೇಕು? ಕೊಳಕು ಮನಸ್ಸಿನವರಿಗೆ ಕೇಸರಿಯೂ ರಾಜಕೀಯದ ಸರಕು ಎಂದು ಚಾಟಿ ಬೀಸಿದೆ.

ಕುಮಾರಸ್ವಾಮಿ ಅವರು RSS ಕಾಳಾಲೋ, ಸೇವಕರೋ ಎನ್ನುವುದು ಕಾಲವೇ ನಿರ್ಣಯಿಸುತ್ತದೆ. ಆದರೆ, ನಿಮ್ಮ ಸಿದ್ದಹಸ್ತನಂತೆ ಉಂಡ ಮನೆಗೆ ಎರಡು ಬಗೆಯುವ ಪೈಕಿ ಅವರಲ್ಲ. ಮಾತೃಭೂಮಿಯನ್ನು, ಪರಂಪರಾಗತ ಆಚಾರ-ವಿಚಾರ, ನಂಬಿಕೆಗಳಿಗೆ ಕೊಳ್ಳಿ ಇಟ್ಟು ಜಾತಿ-ಧರ್ಮಗಳ ನಡುವೆ ವಿಷಪ್ರಾಶನ ಮಾಡಿ, ಅದನ್ನೇ ಅಮಲೇರಿಸಿಕೊಳ್ಳುವ ಗತಿಗೆಟ್ಟ ಕಾಂಗ್ರೆಸ್ ಮನಸ್ಥಿತಿಗೆ ಆ ಹನುಮದೇವರೇ ಅಂತ್ಯ ಕಾಣಿಸುತ್ತಾನೆ. ಇದು ಸತ್ಯ.. ಸತ್ಯ ಎಂದು ತಿರುಗೇಟು ನೀಡಿದೆ.

Shwetha M