ಹುಲಿ ಉಗುರಿನ ದ್ವೇಷ, ಕಿಡಿ ಕಾರಿದ ಜಗ್ಗೇಶ್ – ವರ್ತೂರು ಸಂತೋಷ್ ಅಭಿಮಾನಿಗಳು ಸುಮ್ನೆ ಇರ್ತಾರಾ?

ಹುಲಿ ಉಗುರಿನ ದ್ವೇಷ, ಕಿಡಿ ಕಾರಿದ ಜಗ್ಗೇಶ್ – ವರ್ತೂರು ಸಂತೋಷ್ ಅಭಿಮಾನಿಗಳು ಸುಮ್ನೆ ಇರ್ತಾರಾ?

ಜಗ್ಗೇಶ್. ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ. ರಾಜಕೀಯದಲ್ಲೂ ಸಾಕಷ್ಟು ಪ್ರಭಾವ ಹೊಂದಿರುವ ಜಗ್ಗೇಶ್, ರಾಜ್ಯಸಭೆಯ ಹಾಲಿ ಸದಸ್ಯರೂ ಆಗಿದ್ದಾರೆ. ಕಾಮಿಡಿ ನಟನಾಗೇ ಹೆಸರು ಮಾಡಿರುವ ಜಗ್ಗೇಶ್​ಗೆ ಕೆಲವೊಮ್ಮೆ ತಮ್ಮ ಮಾತುಗಳೇ ಮುಳುವಾಗ್ತಿವೆ. ಅತಿರೇಖದ ಪದಬಳಕೆಯಿಂದ ಪದೇಪದೆ ವಿವಾದವನ್ನ ಮೈಮೇಲೆ ಎಳೆದುಕೊಳ್ತಿದ್ದಾರೆ. ಇದೀಗ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಗ್ಗೆ ನಾಲಗೆ ಹರಿಬಿಟ್ಟಿದ್ದು  ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕ್ಷಮೆ ಕೇಳುವಂತೆ ವರ್ತೂರು ಸಂತೋಷ್ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಮನೆಗೆ ಮುತ್ತಿಗೆ ಹಾಕಿ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ‘ಕಿತ್ತೋದ್ ನನ್ಮಗ’ ಅನ್ನೋ ಮಾತು ಜಗ್ಗೇಶ್ ಆಡಿದ್ದು ಎಷ್ಟು ಸರಿ? – ವರ್ತೂರು ಸಂತೋಷ್ ಬಗ್ಗೆ ಕೀಳು ಮಾತಿಗೆ ಅಭಿಮಾನಿಗಳ ಬೇಸರ

ಬಿಗ್​ಬಾಸ್ ಸೀಸನ್ 10ರಲ್ಲಿ ಜನಮನಗೆದ್ದ ಸ್ಪರ್ಧಿಗಳ ಪೈಕಿ ವರ್ತೂರು ಸಂತೋಷ್ ಕೂಡ ಒಬ್ಬರು. ಫಿನಾಲೆಯಲ್ಲಿ ಟಾಪ್ 5 ಸ್ಪರ್ಧಿಯಾಗಿ ಔಟ್ ಆದ್ರೂ ಲಕ್ಷಾಂತರ ಅಭಿಮಾನಿಗಳ ಪ್ರೀತಿ ಗಳಿಸಿದ್ದರು. ಬಿಗ್​ಬಾಸ್ ನಿಂದ ಹೊರಬಂದ ಮೇಲಂತೂ ಯಾವ ಹೀರೋಗೂ ಕಮ್ಮಿ ಇಲ್ಲದಂತಹ ಸ್ವಾಗತ ಸಿಕ್ಕಿತ್ತು. ಈಗ್ಲೂ ಕೂಡ ವರ್ತೂರು ಹೋದಲ್ಲೆಲ್ಲಾ ಗ್ರ್ಯಾಂಡ್ ವೆಲ್ಕಂ ಸಿಗ್ತಿದೆ. ಹೀಗಿರುವಾಗ್ಲೇ ವರ್ತೂರು ಸಂತೋಷ್ ಬಗ್ಗೆ ನಟ ಜಗ್ಗೇಶ್ ಹೇಳಿದ ಅದೊಂದು ಮಾತು ಭಾರೀ ಚರ್ಚೆಗೆ ಗ್ರಾಸವಾಗಿದೆ. ಆಕ್ರೋಶಕ್ಕೂ ಕಾರಣವಾಗಿದೆ.

ರಂಗನಾಯಕ ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಟ ಜಗ್ಗೇಶ್, ಹುಲಿ ಉಗುರು ಪ್ರಕರಣವನ್ನ ಪ್ರಸ್ತಾಪಿಸಿದ್ದರು. ನಾನು ಹುಲಿ ರೀತಿ ಬದುಕಬೇಕು ಅಂತ ನನ್ನ ತಾಯಿ ಹುಲಿ ಉಗುರನ್ನು ಕೊಟ್ಟಳು. ಆದರೆ ಯಾವನೋ ಕಿತ್ತೋದ್ ನನ್ಮಗ ರಿಯಲ್ ಆಗಿ ಹುಲಿ ಉಗುರು ಹಾಕ್ಕೊಂಡು, ಯಾವುದೋ ಟಿವಿಯಲ್ಲಿ ತಗಲಾಕ್ಕೊಂಡ. ಬಳಿಕ ದೊಡ್ಡ ಸುದ್ದಿ ಆಯಿತು ಎಂದು ಜಗ್ಗೇಶ್ ಮಾತನಾಡಿದ್ದರು. ವರ್ತೂರು ಸಂತೋಷ್ ಬಗ್ಗೆ ಜಗ್ಗೇಶ್ ಬಳಸಿದ ಪದಬಳಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲೂ ಜಗ್ಗೇಶ್ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗಿದೆ. ಕೆಲವ್ರು ಜಗ್ಗೇಶ್ ಪರ ಬ್ಯಾಟ್ ಬೀಸಿದ್ರೆ ಇನ್ನೂ ಕೆಲವ್ರು ಕಿಡಿ ಕಾರಿದ್ದಾರೆ.

ವರ್ತೂರು ಬಗ್ಗೆ ಜಗ್ಗೇಶ್ ಹೇಳಿದ ಇದೇ ಮಾತುಗಳು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿವೆ. ಕ್ಷಮೆ ಕೇಳಬೇಕು ಎಂದು ವರ್ತೂರು ಸಂತೋಷ್ ಆಪ್ತರು ಆಗ್ರಹಿಸಿದ್ದಾರೆ. ಜಗ್ಗೇಶ್ ಕ್ಷಮೆ ಕೇಳದೇ ಇದ್ದರೆ, ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ವಿಡಿಯೋ ಹರಿಬಿಟ್ಟಿದ್ದಾರೆ.  ಇನ್ನು ಜಗ್ಗೇಶ್ ಹೇಳಿಕೆಗೆ ವರ್ತೂರು ಸಂತೋಷ್ ಸೈಲೆಂಟಾಗೇ ತಿರುಗೇಟು ನೀಡಿದ್ದಾರೆ. ಬಿಡಿ ಅವರು ದೊಡ್ಡವರು. ನಾನು ಹೇಳುವುದು ಇಷ್ಟೆ, ಕಾಲಾಯ ತಸ್ಮೈ ನಮಃ ಅಷ್ಟೆ. ಎಲ್ಲದಕ್ಕೂ ಉತ್ತರ ಕೊಡಲೇ ಬೇಕು ಅಂತೇನೂ ಇಲ್ಲ. ಕೆಲವೊಂದಕ್ಕೆ ಉತ್ತರ ಕೊಡಬೇಕು. ಕೆಲವೊಂದಕ್ಕೆ ಮೌನವಾಗಿದ್ದರೆ ಸಾಕು ಎಂದಿದ್ದಾರೆ. ಅಷ್ಟಕ್ಕೂ ಇಲ್ಲಿ ಜಗ್ಗೇಶ್ ವರ್ತೂರು ಸಂತೋಷ್ ಮೇಲೆ ಸಿಟ್ಟಾಗೋಕೆ ಕಾರಣ ಹುಲಿ ಉಗುರು ಪ್ರಕರಣ..

ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿದ್ದ ವರ್ತೂರು ಸಂತೋಶ್ ರಿಯಾಲಿಟಿ ಶೋ ಆರಂಭವಾದ ಕೆಲವೇ ದಿನಗಳಲ್ಲಿ ಅರೆಸ್ಟ್ ಆಗಿದ್ರು. ಕೊರಳಲ್ಲಿ ಹುಲಿ ಉಗುರು ಧರಿಸಿದ್ದಾರೆ. ಇದು ಕಾನೂನು ಬಾಹಿರ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು ಬಳಿಕ 10 ದಿನಗಳ ಕಾಲ ಜೈಲು ಸೇರಿದ್ದರು. ವರ್ತೂರು ಸಂತೋಷ್ ಬಂಧನದ ಬೆನ್ನಲ್ಲೇ ನಟರು, ರಾಜಕಾರಣಿಗಳು ಸೇರಿದಂತೆ ಸೆಲೆಬ್ರಿಟಿಗಳ ಕೊರಳಲ್ಲಿಯೂ ಹುಲಿ ಉಗುರಿನ ಆಕಾರದ ಪೆಂಡೆಂಟ್ ಇರುವ ಫೋಟೋಗಳು ವೈರಲ್ ಆಗಿದ್ದವು. ನಟ ಜಗ್ಗೇಶ್ ಕೂಡ ಸುದ್ದಿವಾಹಿನಿಯ ಸಂದರ್ಶನದಲ್ಲಿ ತಮ್ಮ ಕೊರಳಲ್ಲಿದ್ದ ಹುಲಿ ಉಗುರಿನ ಪದಕ ತೋರಿಸಿದ್ದರು. ಇದು ನಿಜವಾದ ಹುಲಿ ಉಗುರು. ನೀನು ಹುಲಿ ಇದ್ದಂಗೆ ಇರಬೇಕು ಎಂದು ನಮ್ಮ ಅಮ್ಮ ನನಗೆ ಹಾಕಿದ್ದರು ಎಂದು ತೋರಿಸಿದ್ದರು. ಇದೇ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಜಗ್ಗೇಶ್ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿ ಬಂದಿತ್ತು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಜಗ್ಗೇಶ್ ಮನೆಗೆ ತೆರಳಿ ಹುಲಿ ಉಗುರನ್ನ ವಶಕ್ಕೆ ಪಡೆದಿದ್ದರು.

ಹುಲಿ ಉಗುರಿನ ಪೆಂಡೆಂಟ್ ಅನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದೇ ಜಗ್ಗೇಶ್ ಸಿಟ್ಟಿಗೆ ಕಾರಣವಾಗಿದೆ. ವರ್ತೂರು ಸಂತೋಷ್ ಬಿಗ್​ಬಾಸ್​ಗೆ ಹೋಗಿ ಅರೆಸ್ಟ್ ಆಗಿದ್ದಕ್ಕೆ ತಮ್ಮದೆಲ್ಲಾ ಸುದ್ದಿಯಾಯ್ತು. ಹುಲಿಉಗುರಿನ ಪದಕ ವಶಕ್ಕೆ ಪಡೆದ್ರು ಎಂದು ಕಿಡಿ ಕಾರಿದ್ದಾರೆ. ಅಲ್ದೇ ಹುಲಿ ಉಗುರಿನ ಪ್ರಕರಣ ತಣ್ಣಗಾಗಲು ತಾವೇ ಕಾರಣ ಅನ್ನೋ ರೀತಿಯೂ ಜಗ್ಗೇಶ್ ಮಾತನಾಡಿದ್ದಾರೆ. ಈ ಪ್ರಕರಣ ಭಾರೀ ಸದ್ದು ಮಾಡ್ತಿದ್ದಾಗ ನಾನು ತಕ್ಷಣ ನನ್ನ ಫ್ರೆಂಡ್‌ ಡಿ.ಕೆ ಶಿವಕುಮಾರ್‌ಗೆ ಕರೆ ಮಾಡಿದೆ. ಅಲ್ರೀ ನಾಯಕರೇ, ನೀವು ನಾವು ಯಾವ ಕಾಲದಿಂದ ಸ್ನೇಹಿತರು. ನಿಮ್ಮ ಸ್ನೇಹಿತನಿಗೆ ಯಾವುದೋ ಈ ಕಾನೂನು ತಲೆ ತಿಂತಿದೆ ಅಂದಾಗ ನೀವು ನನಗೆ ಸಹಾಯ ಮಾಡಬೇಕೋ, ಬೇಡ್ವೋ ಎಂದು ಕೇಳಿದೆ. ತಕ್ಷಣ ಅವರು ಯಾರಿಗೆ ಏನು ಹೇಳಬೇಕೋ ಅದನ್ನು ಹೇಳಿ ಅದನ್ನು ಜಾಗೃತಿ ಮೂಡಿಸೋ ತರ ಮಾಡಿದ್ರು ಅದನ್ನ ಕಡಿಮೆ ಮಾಡಿದರು.  ಆ ನಂತರ ಆ ಪ್ರಕರಣ ಎಲ್ಲಿ ಸತ್ತೋಯ್ತು ಅನ್ನೋದೇ ಗೊತ್ತಿಲ್ಲ ಎಂದಿದ್ದಾರೆ. ಒಟ್ನಲ್ಲಿ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಹುಲಿ ಉಗುರಿನ ಪ್ರಕರಣದ ವೇಳೆ ದೊಡ್ಡ ದೊಡ್ಡವರ ಹೆಸರೇ ಕೇಳಿ ಬಂದಿತ್ತು.  ವರ್ತೂರು ಸಂತೋಷ್ ಜೈಲಿಗೂ ಹೋಗಿ ಬಂದಿದ್ದರು. ಆದ್ರೆ ಜಗ್ಗೇಶ್ ಈಗ ಅದೇ ಪ್ರಕರಣವನ್ನ ಪ್ರಸ್ತಾಪಿಸುವ ವೇಳೆ ನಾಲಗೆ ಹರಿಬಿಟ್ಟು ಪೇಚಿಕೆ ಸಿಲುಕಿದ್ದಾರೆ.

Sulekha