‘ಕಿತ್ತೋದ್ ನನ್ಮಗ’ ಅನ್ನೋ ಮಾತು ಜಗ್ಗೇಶ್ ಆಡಿದ್ದು ಎಷ್ಟು ಸರಿ? – ವರ್ತೂರು ಸಂತೋಷ್ ಬಗ್ಗೆ ಕೀಳು ಮಾತಿಗೆ ಅಭಿಮಾನಿಗಳ ಬೇಸರ

‘ಕಿತ್ತೋದ್ ನನ್ಮಗ’ ಅನ್ನೋ ಮಾತು ಜಗ್ಗೇಶ್ ಆಡಿದ್ದು ಎಷ್ಟು ಸರಿ? – ವರ್ತೂರು ಸಂತೋಷ್ ಬಗ್ಗೆ ಕೀಳು ಮಾತಿಗೆ ಅಭಿಮಾನಿಗಳ ಬೇಸರ

ನಟ ಜಗ್ಗೇಶ್ ಡೈಲಾಗ್ ಹೊಡೆಯುವಲ್ಲಿ ಫೇಮಸ್. ದಿಗ್ಗಜ ನಟರಲ್ಲಿ ಒಬ್ಬರು. ಆದರೆ, ಹಿರಿಯ ನಟನ ಮಾತಲ್ಲೂ ಬದ್ಧತೆಯಿರಬೇಕು. ಮಾತಿನಲ್ಲಿ ಮತ್ತೊಬ್ಬ ವ್ಯಕ್ತಿ ಬಗ್ಗೆ ಗೌರವ ಇರಬೇಕು. ನಾವು ಆಡಿದ ಪ್ರತಿಮಾತು ಇನ್ನೊಬ್ಬರ ಮನಸಿಗೆ ನೋವಾಗದಂತೆ, ಅವರ ಗೌರವಕ್ಕೆ ದಕ್ಕೆ ಆಗದಂತೆ ಇರಬೇಕು ಎಂಬ ವಿಚಾರ ನಟ ಜಗ್ಗೇಶ್‌ಗೂ ಗೊತ್ತಿಲ್ಲ ಅಂತಲ್ಲ. ಆದರೆ, ಇನ್ನೊಬ್ಬರ ಬಗ್ಗೆ ಕೇವಲ ಆಗಿ ಮಾತನಾಡುವುದು ಇಂಥಾ ಹಿರಿಯ ನಟರಿಗೆ ಶೋಭೆ ತರುವಂತದ್ದಲ್ಲ ಅನ್ನೋದು ಕೂಡಾ ಸತ್ಯವೇ. ಇದೀಗ ನಟ ಜಗ್ಗೇಶ್ ವರ್ತೂರು ಸಂತೋಷ್‌ಗೆ ‘ಯಾವನೋ ಕಿತ್ತೋದ್ ನನ್ಮಗ’ ಎಂದು ಹೇಳುವ ಮೂಲಕ ವಿವಾದದಲ್ಲಿ ಸಿಲುಕಿದ್ದಾರೆ.

ಇದನ್ನೂ ಓದಿ: ಕೋಲ, ನೇಮೋತ್ಸವದ ರೀತಿ ಬಣ್ಣ ಹಚ್ಚಿ ಸಿನಿಮಾ, ಧಾರಾವಾಹಿಯಲ್ಲಿ ಅನುಕರಣೆ – ಕರಾವಳಿ ಭಾಗದ ದೈವಾರಾಧಕರಿಂದ ಹೋರಾಟ

ಅನಿಸಿದ್ದನ್ನು ಹೆಚ್ಚು ಯೋಚಿಸದೆ ಹೇಳಿ ಬಿಡುವ ನಟ ಜಗ್ಗೇಶ್‌ ಮಾತು ಈಗ ವರ್ತೂರು ಸಂತೋಷ್ ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇತ್ತೀಚೆಗೆ ವೇದಿಕೆಯೊಂದರ ಮೇಲೆ ಜಗ್ಗೇಶ್ ಆಡಿದ ಮಾತಿನ ಬಗ್ಗೆ ವಹ್ನಿಕುಲ ಕ್ಷತ್ರಿಯ ಸಮುದಾಯದ ಕೆಲವು ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೇಳಿದ ಮಾತಿಗೆ ಕ್ಷಮೆ ಕೇಳದಿದ್ದರೆ ಪ್ರತಿಭಟನೆ ನಡೆಸುವುದಾಗಿಯೂ, ಮನೆಗೆ ಮುತ್ತಿಗೆ ಹಾಕುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಜಗ್ಗೇಶ್ ವರ್ತೂರು ಸಂತೋಷ್ ಬಗ್ಗೆ ಹೇಳಿದ್ದೇನು?

ರಂಗನಾಯಕ ಸಿನಿಮಾದ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಜಗ್ಗೇಶ್ ಹುಲಿ ಉಗುರು ಪ್ರಕರಣದ ಬಗ್ಗೆ ಮಾತನಾಡಿದ್ದರು. ವರ್ತೂರು ಸಂತೋಷ್ ಹುಲಿ ಉಗುರು ಧರಿಸಿ ಬಂಧನಕ್ಕೆ ಒಳಗಾದ ವಿಷಯ ಮಾತನಾಡುತ್ತಾ, ‘ಯಾವನೋ ಕಿತ್ತೋದ್ ನನ್ ಮಗ ರಿಯಲ್ ಹುಲಿ ಉಗುರು ಹಾಕ್ಕೋಂಡ್ ಯಾವುದೋ ಟಿವಿಯಲ್ಲಿ ತಗಲಾಕ್ಕೊಂಡ’ ಎಂದಿದ್ದರು. ಜಗ್ಗೇಶ್ ಆಡಿರುವ ಮಾತು ವರ್ತೂರು ಸಂತೋಷ್ ಹಾಗೂ ಅವರ ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿತ್ತು.

ಜಗ್ಗೇಶ್ ಆಡಿರುವ ಮಾತಿಗೆ ಪ್ರತಿಕ್ರಿಯೆ ನೀಡಿದ್ದ ವರ್ತೂರು ಸಂತೋಷ್, ‘ಅವರು ದೊಡ್ಡವರು, ಎಲ್ಲದಕ್ಕೂ ಉತ್ತರ ಕೊಡಬೇಕಿಲ್ಲ, ನಾವು ಸುಮ್ಮನಿದ್ದರೆ ಅದೇ ಉತ್ತರ, ‘ಕಾಲಾಯ ತಸ್ಮೈ ನಮಃ’ ಎಂದಿದ್ದರು.

ರಾಜ್ಯಸಭಾ ಸದಸ್ಯರೂ ಆಗಿರುವ ಜಗ್ಗೇಶ್ ಅವರು ವರ್ತೂರು ಸಂತು ಬಗ್ಗೆ ಕೀಳು ಪದಗಳ ಬಳಕೆ ಮಾಡಿದ ಬಗ್ಗೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ವಹ್ಮಿಕುಲ ಕ್ಷತ್ರಿಯ ಸಮುದಾಯದ ಮುಖಂಡರೊಬ್ಬರು, ತಮ್ಮ ಸಮುದಾಯದ ಯುವಕನ ಬಗ್ಗೆ ಜಗ್ಗೇಶ್ ಲಘುವಾಗಿ ಮಾತನಾಡಿರುವುದನ್ನು ಖಂಡಿಸಿದ್ದಾರೆ. ಒಂದೊಮ್ಮೆ ಜಗ್ಗೇಶ್ ಕ್ಷಮೆ ಕೇಳದೇ ಇದ್ದರೆ ಅವರ ಮನೆಯ ಮುಂದೆ ಪ್ರತಿಭಟನೆ ಮಾಡುವುದಾಗಿಯೂ, ಮನೆಗೆ ಮುತ್ತಿಗೆ ಹಾಕುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿರುವ ಹೆಬ್ಬಗೋಡಿ ಮಾಜಿ ನಗರಸಭೆ ಸದಸ್ಯ, ಹಾಗೂ ವಹ್ನಿಕುಲ ಕ್ಷತ್ರಿಯ ಸಮಯುದಾಯದ ಮುಖಂಡ ನಾರಾಯಣ ಸ್ವಾಮಿ, ‘ಬಿಗ್ಬಾಸ್ ಖ್ಯಾತಿಯ ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್ ಬಗ್ಗೆ ರಾಜ್ಯಸಭಾ ಸದಸ್ಯ, ಚಲನಚಿತ್ರ ನಟ ಜಗ್ಗೇಶ್ ಲಘುವಾಗಿ ಮಾತನಾಡಿದ್ದಾರೆ. ಸಂತೋಷ್ ಒಳ್ಳೆಯ ಮನುಷ್ಯ. ಸಣ್ಣ ಹುಡುಗನನ್ನು ಕೂಡ ಅಣ್ಣ ಎಂದು ಕರೆಯುವ ಒಳ್ಳೆ ಹೃದಯವಂತ, ಸ್ನೇಹಜೀವಿ. ಅಂತಹವರ ಬಗ್ಗೆ ಕೆಟ್ಟ ಪದಗಳನ್ನು ಬಳಸಲಾಗಿದೆ. ಇದರಲ್ಲೇ ನೀನು ಎಲ್ಲರಿಗೂ ಯಾವ ರೀತಿ ಮರ್ಯಾದೆ ಕೊಡುತ್ತೀಯ ಎನ್ನುವುದು ಗೊತ್ತಾಗುತ್ತಿದೆ. ಕೂಡಲೇ ಮಾಧ್ಯಮದ ಮುಂದೆ ಬಂದು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ನಿಮ್ಮ ಮನೆಗೆ ಮುತ್ತಿಗೆ ಹಾಕಿ ಧರಣಿ ಕೂರುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ. ಸಂತೋಷ್, ಕ್ಷತ್ರಿಯ ವಂಶದಲ್ಲಿ ಹುಟ್ಟಿದ್ದಾನೆ. ವಹ್ನಿಕುಲದಲ್ಲಿ ಹುಟ್ಟಿ ಬೆಳವಣಿಗೆ ಆಗುತ್ತಿದ್ದಾನೆ. ಅಂತಹ ಹುಡುಗನ ಬಗ್ಗೆ ಕೀಳುಮಟ್ಟದ ಭಾಷೆ ಬಳಸಿದ್ದೀಯ. ವಹ್ನಿಕುಲ ಕ್ಷತ್ರಿಯರ ಹುಡುಗ ಆತ. ಈಗ ಅವನು ಬೆಳವಣಿಗೆ ಆಗುತ್ತಿದ್ದಾನೆ ಎಂದು ಹೊಟ್ಟೆ ಕಿಚ್ಚಿನಿಂದ ಈ ರೀತಿಯ ಪದಗಳನ್ನು ಬಳಸುತ್ತಿದ್ದೀಯಾ? ಕ್ಷಮೆ ಕೇಳದಿದ್ದರೆ ವರ್ತೂರು ಸಂತೋಷ್ ಅಭಿಮಾನಿಗಳು ನಿನಗೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಹೇಳಿರುವ ನಾರಾಯಣಸ್ವಾಮಿ, ಆ ಪ್ರಕರಣ ನಡೆದಾಗ ‘ನೀನು ಯಾಕೆ ಕೋರ್ಟ್ ಮೊರೆ ಹೋದೆ ಹೇಳು’ ಎಂದು ಏಕವಚನದಲ್ಲಿಯೇ ಪ್ರಶ್ನೆ ಮಾಡಿದ್ದಾರೆ.

ವರ್ತೂರು ಸಂತೋಷ್ ಬಿಗ್ಬಾಸ್ ಮನೆಗೆ ಹೋಗಿದ್ದಾಗ ಅಲ್ಲಿ ಹುಲಿ ಉಗುರು ತೊಟ್ಟಿದ್ದ ಕಾರಣ ಅವರು ಬಂಧನಕ್ಕೆ ಒಳಗಾಗಿದ್ದರು. ಅದಾದ ಬಳಿಕ ಹುಲಿ ಉಗುರು ಧರಿಸಿದ್ದ ಸಿನಿಮಾ ಸೆಲೆಬ್ರಿಟಿಗಳ ಮನೆಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಜಗ್ಗೇಶ್ ಸಹ ಈ ಪ್ರಕರಣದಲ್ಲಿ ತಮ್ಮ ತಾಯಿ ತಮಗೆ ನೀಡಿದ್ದ ಹುಲಿ ಉಗುರಿನ ಪೆಂಡೆಂಟ್ ಅನ್ನು ಕಳೆದುಕೊಳ್ಳುವಂತಾಯ್ತು.

Sulekha